ವಿಜಯಸಾಕ್ಷಿ ಸುದ್ದಿ, ಗದಗ/ಶಿರಸಿ: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆದು ಕರ್ನಾಟಕ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆದ ಉರ್ದು ಮಾಧ್ಯಮದ ಶಿರಸಿಯ ವಿದ್ಯಾರ್ಥಿನಿ ಶಗುಪ್ತಾ ಅಂಜುಮ್ ಇವರಿಗೆ ಅವರ ಸ್ವಗೃಹದಲ್ಲಿ ಅಖಿಲ ಕರ್ನಾಟಕ ಮುಸ್ಲಿಂ ಮಹಾಸಭಾ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಜ್ಯಾಧ್ಯಕ್ಷ ಮಹ್ಮದಶಫಿ ನಾಗರಕಟ್ಟಿ, ಇವರಿಗೆ ದೊರಕಿರುವ ಪ್ರೀತಿಯ ಪ್ರಶಸ್ತಿಗಳು ನಮ್ಮ ಸಂಸ್ಕೃತಿಗೆ ಹಿಡಿದ ಕೈಗನ್ನಡಿಯಾಗಿದೆ. ಶಗುಪ್ತಾ ಅಂಜುಮ್ ಮೂಲತಃ ಬಿಹಾರ ರಾಜ್ಯದಲ್ಲಿ 8ನೇ ತರಗತಿಯವರೆಗೂ ಉರ್ದು ಮಾಧ್ಯಮದಲ್ಲಿ ಕಲಿತು, 9ನೇ ತರಗತಿಗೆ ಶಿರಸಿ ನಗರದ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ದಾಖಲಾತಿ ಪಡೆದಿದ್ದಾರೆ. ವಿಶೇಷವೆಂದರೆ, ಕೇವಲ ಎರಡೇ ವರ್ಷಗಳಲ್ಲಿ ಕನ್ನಡ ಭಾಷೆಯನ್ನು ಕಲಿತು, ಕನ್ನಡ ವಿಷಯದಲ್ಲಿ ನೂರಕ್ಕೆ ನೂರರಷ್ಟು ಅಂಕಗಳನ್ನು ಪಡೆದು ಅತ್ಯುತ್ತಮ ಸಾಧನೆ ಮಾಡಿರುವುದು ಶ್ಲಾಘನೀಯ ಎಂದರು.
ಶಿರಸಿಯ ಸರ್ಕಾರಿ ಉರ್ದು ಪ್ರೌಢಶಾಲೆ ಮುಖ್ಯ ಗುರುಗಳಾದ ಅನಂತ ಕೊರವರ ಮಾತನಾಡಿ, ಶಗುಪ್ತಾ ಅಂಜುಮ್ ಅಗಾಧವಾದ ಸಾಧನೆ ಮಾಡಿದ್ದಾರೆ. ಆಕೆಯಲ್ಲಿ ಒಂದು ಅಭೂತಪೂರ್ವ ಶಕ್ತಿ ಅಡಗಿದೆ. ಅದನ್ನು ಅರಿತಿದ್ದ ನಾವು ಆಕೆಗೆ ವಿಶೇಷ ತರಬೇತಿ ಹಾಗು ಮಾರ್ಗದರ್ಶನ ನೀಡಿದ ಪರಿಣಾಮವಾಗಿ ಇಂದು ರಾಜಕ್ಕೆ ಪ್ರಥಮ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾಳೆ. ಇದು ಕೇವಲ ನಮ್ಮ ಶಾಲೆಗಷ್ಟೇ ಅಲ್ಲ, ನಮ್ಮ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ ಎಂದರು.
ಸಲೀಂ ನರಗುಂದ ಮಾತನಾಡಿ, ಇದೊಂದು ವಿಶೇಷ ಸಾಧನೆಯಾಗಿದೆ. ಕೇವಲ ಎರಡು ವರ್ಷಗಳಲ್ಲಿ ಕನ್ನಡದ ಕಲಿತು ನೂರಕ್ಕೆ ನೂರು ಅಂಕ ಪಡೆದಿರುವುದು ಸಮಸ್ತ ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ ಎಂದರು. ಗದಗ ಜಿಲ್ಲಾ ಯುವ ಘಟಕದ ಅಧ್ಯಕ್ಷ ಯಾಸಿನ್ ಮುಲ್ಲಾ ಶಗುಪ್ತಾ ಅಂಜುಮ್ ಕನ್ನಡದಲ್ಲಿ ವಿಷಯದಲ್ಲಿ ಮಾಡಿದ ಸಾಧನೆಗಾಗಿ 5 ಸಾವಿರ ರೂಪಾಯಿಗಳ ಕಾಣಿಕೆಯನ್ನು ನೀಡಿ ಗೌರವಿಸಿದರು. ಗದಗ ಮತ್ತು ಧಾರವಾಡ ಜಿಲ್ಲಾ ಉಸ್ತುವಾರಿ ಎಂ.ಡಿ. ಜಾಫರ್ ಡಾಲಾಯತ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಮುಸ್ಲಿಂ ಮಹಾಸಭಾ ಸದಸ್ಯರಗಳಾದ ಮುನ್ನಾ ಕಲ್ಮನಿ, ಇಲಿಯಾಸ ಶಿರಹಟ್ಟಿ, ಹನೀಫ್ ಇರಕಲ್ಲ, ಯೂನಸ ಖಾಜಿ, ಇಸಾಕ್ ಇರಕಲ್ಲ, ಮುಜಂಮಿಲ್ ಬಳ್ಳಾರಿ, ಎಸ್.ಎಸ್. ಖಾದ್ರಿ, ನೂರ್ಅಹ್ಮದ್ ಕಟ್ಟಿಮನಿ, ಇಮ್ತಿಯಾಜ್ ಜಮಾದಾರ, ಇಬ್ರಾಹಿಂ ಅತ್ತಾರ, ವಿದ್ಯಾರ್ಥಿನಿಯ ಪಾಲಕರು ಮತ್ತು ಸರಕಾರಿ ಉರ್ದು ಪ್ರೌಢಶಾಲೆಯ ಎಸ್ಡಿಎಂಸಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಗುರು ಇದ್ದರೆ ಏನಾದರೂ ಸಾಧಿಸಬಹುದೆಂಬುದಕ್ಕೆ ಶಿರಸಿಯ ಉರ್ದು ಪ್ರೌಢಶಾಲೆಯ ಶಿಕ್ಷಕರು ಉದಾಹರಣೆಯಾಗಿದ್ದಾರೆ. ಭವಿಷ್ಯದಲ್ಲಿ ಶಗುಪ್ತಾ ಅಂಜುಮ್ ತಾವು ಬಯಸಿದಂತೆ ಎಂಬಿಬಿಎಸ್ ಪದವಿಯನ್ನು ಪಡೆದು ಐಎಎಸ್ ಆಗುವ ಕನಸು ನನಸಾಗಲಿ ಎಂದು ಮಹ್ಮದಶಫಿ ನಾಗರಕಟ್ಟಿ ಹಾರೈಸಿದರು.