ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಕ್ರೀಡೆ ಪರಸ್ಪರ ಸ್ನೇಹ, ಬಾಂಧವ್ಯ ವೃದ್ಧಿಸುವ ಹೊಂದಾಣಿಕೆ ಮತ್ತು ನಾಯಕತ್ವದ ಗುಣ ಬೆಳೆಯುವಲ್ಲಿ ನೆರವಾಗುತ್ತದೆ ಎಂದು ಶಾಸಕ ಡಾ.ಚಂದ್ರು ಲಮಾಣಿ ಹೇಳಿದರು.
ಅವರು ಮಂಗಳವಾರ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಹಾಗೂ ಅಗಡಿ ಪ.ಪೂ. ಕಾಲೇಜುಗಳ ಸಹಯೋಗದಲ್ಲಿ ಲಕ್ಷ್ಮೇಶ್ವರ ತಾಲೂಕು ಮಟ್ಟದ ಪ.ಪೂ ಕಾಲೇಜುಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ವಿದ್ಯಾರ್ಥಿಗಳ ದೈಹಿಕ, ಮಾನಸಿಕ, ಬೌದ್ಧಿಕ ಬೆಳವಣಿಗೆಗೆ ಕ್ರೀಡೆಗಳು ಪೂರಕ. ವಿದ್ಯಾರ್ಥಿಗಳು ಕ್ರೀಡೆಯ ಜೊತೆಗೆ ಪಾಠಕ್ಕೂ ಅಷ್ಟೇ ಆದ್ಯತೆ ನೀಡಬೇಕು. ಸಾಧನೆ ಮಾಡುವ ಛಲ ನಿಮ್ಮಲ್ಲಿದ್ದರೆ ಗುರಿ ತಲುಪುವುದು ಸುಲಭವಾಗಲಿದೆ. ದೈಹಿಕ, ಮಾನಸಿಕ ಸದೃಢತೆಗೆ ಕ್ರೀಡೆ ಅವಶ್ಯವಾಗಿದ್ದು, ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ದುಶ್ಚಟಗಳಿಗೆ ದಾಸರಾಗಿ, ಆರೊಗ್ಯಕರವಲ್ಲದ ಆಹಾರಗಳನ್ನು ಸೇವಿಸುತ್ತಾ ತಮ್ಮಲ್ಲಿರುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಿದ್ದಾರೆ. ಮನುಷ್ಯನಿಗೆ ಮುಖ್ಯವಾಗಿ ಆರೋಗ್ಯ ಉತ್ತಮವಾಗಿದ್ದಲ್ಲಿ ಎಲ್ಲವನ್ನು ಗೆಲ್ಲುವ ಭಾವನೆ ಬರುತ್ತದೆ ಎಂದರು.
ಎಷ್ಟು ದುಡ್ಡಿದ್ದರೂ ಆರೋಗ್ಯ ಸಂಪತ್ತಿನ ಮುಂದೆ ಇವೆಲ್ಲವೂ ಶೂನ್ಯ. ಸಾಕಷ್ಟು ದುಡ್ಡು ಮಾಡಿರುವ ವ್ಯಕ್ತಿಯನ್ನು ಕೇಳಿದಾಗ ಆತನಿಗೆ ದುಡ್ಡಿನಿಂದ ಆರೋಗ್ಯ ಕೊಳ್ಳಲಾಗುವದಿಲ್ಲ ಎನ್ನುವ ಭಾವನೆ ಬಂದಿರುತ್ತದೆ. ನಿತ್ಯ ಕ್ರೀಡೆಯಲ್ಲಿ ಪಾಲ್ಗೊಳ್ಳುವದರ ಜೊತೆಗೆ, ಯೋಗ ಇತ್ಯಾದಿಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಂಡಲ್ಲಿ ಮಾನಸಿಕವಾಗಿ ಸದೃಢವಾಗಿ ಬೆಳೆದುನಿಲ್ಲಬಹುದು. ಈ ನಿಟ್ಟಿನಲ್ಲಿ ಕ್ರೀಡೆಯ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಹೆಚ್ಚಬೇಕು. ಅಗಡಿ ಸಂಸ್ಥೆ ನಮ್ಮ ಊರಿಗೆ ಒಂದು ಕಳಶಪ್ರಾಯ ಶಿಕ್ಷಣ ಕೇಂದ್ರವಾಗಿರುವದು ನಮ್ಮೆಲ್ಲರ ಹೆಮ್ಮೆಯಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಗಡಿ ಇಂಜಿನಿಯರಿAಗ್ ಕಾಲೇಜಿನ ಪ್ರಾಚಾರ್ಯ ಡಾ. ಪರಶುರಾಮ ಬಾರ್ಕಿ ವಹಿಸಿದ್ದರು. ಗೋನಾಳ ಗ್ರಾ.ಪಂ ಅಧ್ಯಕ್ಷ ರಾಮನಗೌಡ ಹೊಸಗೌಡ್ರ, ಉಪಾಧ್ಯಕ್ಷೆ ಗಂಗಮ್ಮ ತಳವಾರ, ದೈಹಿಕ ಶಿಕ್ಷಣ ನಿರ್ದೇಶಕ ಎಸ್.ಎಫ್. ಕೊಡ್ಲಿ, ಎಂ.ಎಂ. ಹವಳದ, ಪ್ರೊ. ವಿಕ್ರಮ ಶಿರೋಳ, ಗದಗ ಜಿಲ್ಲಾ ನೋಡಲ್ ಅಧಿಕಾರಿ ಎಂ.ಎನ್. ಶಾಮದಾರ್, ನಿವೃತ್ತ ದೈಹಿಕ ಶಿಕ್ಷಣ ಉಪನ್ಯಾಸಕ ಸುರೇಶ ಕೊಡ್ಲಿ ಹಾಗೂ ತಾಲೂಕಿನ ಪ.ಪೂ ಕಾಲೇಜುಗಳ ಪ್ರಾಚಾರ್ಯರು, ದೈಹಿಕ ಶಿಕ್ಷಣ ನಿರ್ದೇಶಕರು, ನಿರ್ಣಾಯಕರು ಇದ್ದರು.
ಪ್ರಾಚಾರ್ಯ ಪ್ರಕಾಶ ಹೊಂಗಲ್ ಸ್ವಾಗತಿಸಿದರು. ಸಿ.ಎಸ್. ಹಿರೇಮಠ ನಿರೂಪಿಸಿದರು. ಎನ್.ಎಸ್. ಬೋದ್ಲೇಖಾನ್ ವಂದಿಸಿದರು.
ತಾಲೂಕಾ ಪ.ಪೂ ಉಪನ್ಯಾಸಕರ ಸಂಘದ ಅಧ್ಯಕ್ಷ ಹಾಗೂ ಸರಕಾರಿ ಪ.ಪೂ ಕಾಲೇಜಿನ ಪ್ರಾಚಾರ್ಯ ಮಂಜುನಾಥ ಕೊಕ್ಕರಗುಂದಿ ಮಾತನಾಡಿ, ಎಲ್ಲ ಪ.ಪೂ ಕಾಲೇಜುಗಳಲ್ಲಿ ದೈಹಿಕ ಶಿಕ್ಷಕರನ್ನು ನೇಮಿಸುವುದಕ್ಕೆ ಸರಕಾರ ಮುಂದಾಗಬೇಕು. ಮಕ್ಕಳಿಗೆ ಸರಿಯಾದ ತರಬೇತಿ ದೊರೆತರೆ ರಾಜ್ಯಮಟ್ಟದವರೆಗೂ ಸಾಧನೆ ಮಾಡಬಹುದಾಗಿದೆ. ತಾಲೂಕಾ ಕ್ರೀಡಾಂಗಣ ಕಾಮಗಾರಿಯನ್ನು ಆದಷ್ಟು ಶೀಘ್ರ ಮಾಡಿದರೆ ಕ್ರೀಡಾಪಟುಗಳಿಗೆ ಪ್ರೋತ್ಸಾಹ ದೊರಕಿದಂತಾಗುತ್ತದೆ ಎಂದರು.