ವಿಜಯಸಾಕ್ಷಿ ಸುದ್ದಿ, ಗದಗ: ಆರು ದಶಕಗಳ ಹಿಂದೆ ಪ್ರಾಥಮಿಕ ಹಂತದಲ್ಲಿ ಪಾಠ ಹೇಳಿದ ವಿದ್ಯಾಗುರುಗಳಾದ, ಈಗ 95ರ ಇಳಿವಯಸ್ಸಿನ ಇಬ್ರಾಹಿಮಸಾಬ ತಳ್ಳಿಹಾಳರ ನಿವಾಸಕ್ಕೆ ತೆರಳಿ ಗದುಗಿನ ನಿವಾಸಿ ಕರಿಬಸಯ್ಯ ಎಸ್.ಹಿರೇಮಠ ಶಾಲು ಹೊದಿಸಿ ಫಲಪುಷ್ಪ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಪ್ರೊ. ವಿಜಯ ಮಹಾಂತದೇವರು ಮಾತನಾಡಿ, ಗುರು-ಶಿಷ್ಯ ಪರಂಪರೆಯನ್ನು ಜಾಗತಿಕವಾಗಿ ವಿಸ್ತರಿಸಿದ ಗೌರವ ನಮ್ಮ ದೇಶಕ್ಕಿದೆ. ಗುರು-ಹಿರಿಯರನ್ನು ಗೌರವಿಸುವಾತನಿಗೆ ಜೀವನದಲ್ಲಿ ದುಃಖವೇ ಇರುವುದಿಲ್ಲ ಎಂಬ ಹಿರಿಯರ ಮಾತು ಇಂದಿನ ಸನ್ನಿವೇಶ ನೋಡಿದಾಗ ನಮ್ಮ ಕಣ್ಮುಂದೆ ಬಂದು ನಿಲ್ಲುತ್ತದೆ. ಅರವತ್ತು ವರ್ಷಗಳ ಹಿಂದೆ ಪ್ರಾಥಮಿಕ ಹಂತದಲ್ಲಿ ವಿದ್ಯೆ ಕಲಿಸಿದ ಗುರುಗಳನ್ನು ನೆನಪಿಸಿಕೊಂಡು ಇಬ್ರಾಹಿಮ್ಸಾಬ ತಳ್ಳಿಹಾಳ ಗುರುಗಳನ್ನು ಗೌರವಿಸಿದ್ದು ಅಭಿನಂದನಾರ್ಹ ಎಂದರು.
ಸನ್ಮಾನ ಸ್ವೀಕರಿಸಿದ ಇಬ್ರಾಹಿಮ್ಸಾಬ ತಳ್ಳಿಹಾಳ ಗುರುಗಳು ಮಾತನಾಡಿ, ಬದುಕಿನ ಕೊನೆಯ ಅಂಚಿನಲ್ಲಿರುವ ನಮಗೆ ನಮ್ಮ ಶಿಷ್ಯರಾದ ಕರಿಬಸಯ್ಯ ಹಿರೇಮಠ ನಮ್ಮ ನಿವಾಸಕ್ಕೆ ಬಂದು ಸತ್ಕರಿಸಿದ ಕ್ಷಣ ಆನಂದ ತಂದಿದೆ. ನಿಜಕ್ಕೂ ನಮ್ಮ ಬದುಕಿನಲ್ಲಿ ಇದೊಂದು ಅವಿಸ್ಮರಣೀಯ ದಿನ ಎಂದರು.
ಈ ಸಂದರ್ಭದಲ್ಲಿ ಸವಡಿ ಅಂಜುಮನ್ ಕಮಿಟಿ ಚೇರಮನ್ ಹಸನಸಾಬ ನದಾಫ್, ಅಬ್ದುಲ್ಸಾಬ ನದಾಫ್, ಫಕ್ರುಸಾಬ ತಳ್ಳಿಹಾಳ, ಮೆಹಬೂಬಅಲಿ ತಳ್ಳಿಹಾಳ, ಪ್ರಭು ಹಿರೇಮಠ, ಸಿದ್ದಯ್ಯ ಹಿರೇಮಠ ಮುಂತಾದವರು ಉಪಸ್ಥಿತರಿದ್ದರು.