ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಪಟ್ಟಣ ಸೇರಿದಂತೆ ಹೋಬಳಿಯಾದ್ಯಂತ ಬುಧವಾರ ಶಿವಮಂದಿರಗಳಲ್ಲಿ ಶಿವನಿಗೆ ವಿಶೇಷ ಅಭೀಷೇಕ, ಪೂಜೆ ಸಲ್ಲಿಸುವ ಮೂಲಕ ಭಕ್ತಾದಿಗಳು ಶ್ರದ್ಧಾಭಕ್ತಿಯಿಂದ ಶಿವರಾತ್ರಿಯನ್ನು ಆಚರಿಸಿದರು.
ಪಟ್ಟಣದ ಚಂದ್ರಮೌಳೇಶ್ವರ, ಸೋಮೇಶ್ವರ, ತ್ರಿಪುರಾಂತಕೇಶ್ವರ, ನಾರಾಯಣ, ಶ್ರೀಶೈಲ ಮಲ್ಲಿಕಾರ್ಜುನ, ಕಲ್ಮೇಶ್ವರ, ಭೂತನಾಥೇಶ್ವರ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಬೆಳಗ್ಗೆಯಿಂದಲೇ ಭಕ್ತರು ಸಾಲುಗಟ್ಟಿ ನಿಂತು ಶಿವಲಿಂಗಗಳ ದರ್ಶನ ಪಡೆದರು.
ಈಶ್ವರೀಯ ವಿಶ್ವವಿದ್ಯಾಯದಲ್ಲಿ:
ಇಂದಿನ ದಿನಗಳಲ್ಲಿ ಜನರು ಭಗವಂತನ ಜ್ಞಾನವಿಲ್ಲದೆ ಕುರುಡರಾಗಿದ್ದಾರೆ. ಜಗತ್ತಿಗೆ ಭಗವಂತ ಶಿವ ಒಬ್ಬನೇ ಆಗಿದ್ದು, ಆತನನ್ನು ಧ್ಯಾನಿಸುವುದರಿಂದ ಮನಸ್ಸಿಗೆ ನೆಮ್ಮದಿ-ಶಾಂತಿ ದೊರೆಯುತ್ತದೆ ಎಂದು ಈಶ್ವರೀಯ ವಿಶ್ವವಿದ್ಯಾಯದ ಸಂಚಾಲಕಿ ಬ್ರಹ್ಮಕುಮಾರಿ ಸವಿತಕ್ಕ ಹೇಳಿದರು.
ಪಟ್ಟಣದ ಈಶ್ವರಿ ವಿಶ್ವವಿದ್ಯಾಲಯ ಕೇಂದ್ರದಲ್ಲಿ ಬುಧವಾರ ಶಿವರಾತ್ರಿ ಪ್ರಯುಕ್ತ ದ್ವಾದಶ ಜೋರ್ತಿಲಿಂಗಗಳ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಜ್ಯೋತಿರ್ ಬಿಂದು ಸ್ವರೂಪಿ ಶಿವನು ಈ ಭೂಮಿಯ ಮೇಲೆ ಅವತರಿಸಿದ್ದಾನೆ. ಶಿವನು ಮನುಷ್ಯರಾತ್ಮ ಕಲ್ಯಾಣಾರ್ಥವಾಗಿ ಸರ್ವರಿಗೂ ಸತ್ಯ ಜ್ಞಾನವನ್ನು ನೀಡುತ್ತಾನೆ. ಶಿವರಾತ್ರಿಯಂದು ಎಲ್ಲ ರೀತಿಯ ಮನೋದೌರ್ಬಲ್ಯಗಳನ್ನು ದೂರ ಮಾಡಿ, ಪರಮಾತ್ಮ ಶಿವನನ್ನು ಸ್ಮರಿಸಿದರೆ ಸಂಪೂರ್ಣ ಸುಖ, ಶಾಂತಿ ದೊರೆಯುತ್ತದೆ. ಅಜ್ಞಾನ, ಅಂಧಕಾರವನ್ನು ಮನದಿಂದ ತೆಗೆಯಿರಿ. ಜ್ಞಾನದ ಹಣತೆಯನ್ನು ಹಚ್ಚಿರಿ. ಮನುಷ್ಯತ್ವ ಅರಿತು ಶಿವನನ್ನು ಸದಾ ಆರಾಧಿಸಿ ಎಂದರು.
ಮಲ್ಲಿಕಾರ್ಜುನ ಕಾತರಕಿ, ಲಿಂಗರಾಜ ಬೊಪಳಾಪುರ, ಬಸವಣ್ಯಪ್ಪ ಬಳಿಗೇರ, ಮಲ್ಲೇಶ ಪೂಜಾರ ವೀರೇಶ ತಳವಾರ, ವೀರಣ್ಣ ಹತ್ತಿಕಟಗಿ, ಬಾಬು ನೀರಲೋಟಿ, ರವಿ ದೇವರಡ್ಡೆ, ಹನಮಂತಪ್ಪ ರಾಚನಗೌಡ್ರ, ನಾಗರತ್ನಾ ಬಾಣದ, ಬಿ.ಜಿ. ಶಿರ್ಸಿ, ಅನ್ನಪೂರ್ಣ ರೊಟ್ಟಿ, ಸುಶೀಲಾ ಬೊಪಳಾಪೂರ, ಕೆ.ವಿ. ಕಟ್ಟಿ, ನಿಲ್ಲಮ್ಮ ಬೊಪಳಾಪುರ, ನಿರ್ಮಲಾ ಅಂಗಡಿ ಮುಂತಾದವರಿದ್ದರು.