ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಸನಾತನ ಧರ್ಮದ ಸಂಸ್ಥಾಪಕ ಜಗದ್ಗುರು ಶಂಕರಾಚಾರ್ಯರ ಬಗ್ಗೆ ಅವಹೇಳನಕಾರಿ ಹೇಳಿಕೆಯನ್ನು ಪತ್ರಿಕೆಯೊಂದರಲ್ಲಿ ಓದಿದ್ದೇನೆ. ಶಂಕರಾಚಾರ್ಯರು ಈ ಜಗತ್ತಿನಲ್ಲಿ ಅಳಿದು ಹೋಗುತ್ತಿದ್ದ ಹಿಂದೂ ಧರ್ಮವನ್ನು ಕಟ್ಟಿ ನಿಲ್ಲಿಸಿದ ಮಹನೀಯರು. ಅಂತಹವರ ವಿರುದ್ಧವಾಗಿ ಇಂತಹ ಹೇಳಿಕೆ ಕೊಡುವವರನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯು ಬಲವಾಗಿ ಖಂಡಿಸುತ್ತದೆ ಎಂದು ರಾಜ್ಯಾಧ್ಯಕ್ಷ ಅಶೋಕ ಹಾರನಹಳ್ಳಿ ಹೇಳಿದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ೫೦ನೇ ವರ್ಷದ ಸುವರ್ಣ ಮಹೋತ್ಸವದ ಕಾರ್ಯಕ್ರಮಕ್ಕೆ ಎಲ್ಲ ವಿಪ್ರರನ್ನು ಆಮಂತ್ರಿಲು ಪಟ್ಟಣದ ಶ್ರೀ ದತ್ತಾತ್ರೇಯ ದೇವಸ್ಥಾನಕ್ಕೆ ಆಗಮಿಸಿದ್ದ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು.
ನಮ್ಮಲ್ಲಿನ ಒಳಪಂಗಡಗಳ ತಿಕ್ಕಾಟದಿಂದಾಗಿ ನಾವು ಅವಸಾನದ ಅಂಚಿಗೆ ತಲುಪುತ್ತಿದ್ದೇವೆ. ಇನ್ನಾದರೂ ನಾವು ಎಚ್ಚೆತ್ತುಕೊಳ್ಳದೆ ಹೋದರೆ ನಮ್ಮ ಅವಸಾನಕ್ಕೆ ನಾವೇ ಕಾರಣವಾಗುತ್ತೇವೆ. ಅದಕ್ಕಾಗಿ ನಾವು ಒಳಪಂಗಡಗಳ ನಡುವಿನ ವ್ಯತ್ಯಾಸವನ್ನು ಅಲಕ್ಷಿಸಿ ಎಲ್ಲರೂ ಒಕ್ಕಟ್ಟಾಗಲು ಪ್ರಯತ್ನಿಸಿದಾಗ ಮಾತ್ರ ಉದ್ಧಾರವಾಗಲು ಸಾಧ್ಯ. ಅಂತಹ ಒಂದು ಆಶಾದಾಯಕ ವಾತಾವರಣವನ್ನು ಈ ಪುಟ್ಟ ಗ್ರಾಮ ನರೇಗಲ್ಲದಲ್ಲಿ ಕಂಡು ನನಗೆ ಅತೀವ ಸಂತಸವಾಗಿದೆ. ಇಲ್ಲಿನ ಬ್ರಹ್ಮ ಸಮಾಜವು ಚಿಕ್ಕದಾದರೂ ಚೊಕ್ಕ ಕಾರ್ಯಕ್ರಮಗಳ ಮೂಲಕ ಈ ನಾಡಿನ ಗಮನ ಸೆಳೆಯುತ್ತಿರುವುದಕ್ಕೆ ಅಭಿನಂದನೆಗಳು ಎಂದರು.
ದಿವ್ಯ ಸಾನ್ನಿಧ್ಯ ವಹಿಸಿದ್ದ ಶ್ರೀ ದತ್ತಾವಧೂತ ಮಹಾರಾಜರು ಆಶೀರ್ವಚನ ನೀಡಿ, ಜನೇವರಿಯಲ್ಲಿ ನಡೆಯುವ ಸಮಾರಂಭದಲ್ಲಿ ಎಲ್ಲರೂ ಪಾಲ್ಗೊಳ್ಳೋಣ. ಈಗಿನ ರಾಜಾಧ್ಯಕ್ಷರು ಮತ್ತು ಅವರ ತಂಡ ಸಮಾಜವನ್ನು ಸಂಘಟಿಸುವಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದ್ದಾರೆ. ಇದನ್ನು ನಾವೆಲ್ಲರೂ ಬೆಂಬಲಿಸೋಣ ಎಂದರು.
ಸಭೆಯಲ್ಲಿ ಮಹಾಸಭಾದ ರಾಜ್ಯ ಪ್ರಧಾನ ಸಂಚಾಲಕರಾದ ಕಾರ್ತಿಕ ಬಾಪಟ್, ಎಸ್. ಸುಧಾಕರ ಬಾಬು, ವಿಜಯೇಂದ್ರ ನಾಡಜೋಷಿ, ಗದಗ ಜಿಲ್ಲಾ ಬ್ರಾಹ್ಮಣ ಸಮಾಜದ ಸಂಚಾಲಕ ಶ್ರೀನಿವಾಸ ಹುಯಿಲಗೋಳರವರನ್ನು ಗುರುಗಳು ಸನ್ಮಾನಿಸಿ, ಆಶೀರ್ವದಿಸಿದರು.
ಮದನ ಕುಲಕರ್ಣಿ, ರಾಮಚಂದ್ರ ಕುಲಕರ್ಣಿ, ಹರೀಶ ಕುಲಕರ್ಣಿ, ಡಾ. ಕೃಷ್ಣಾ ಕಾಳೆ, ಕಿರಣ ಕಾಳೆ ಸೇರಿದಂತೆ ಇತರರು ಇದ್ದರು. ಅನಿತಾ ಗ್ರಾಮಪುರೋಹಿತ ಪ್ರಾರ್ಥಿಸಿದರು. ಶ್ರೀಪಾದಭಟ್ಟ ಜೋಷಿ ಸ್ವಾಗತಿಸಿದರು. ಗದಗ ಜಿಲ್ಲಾಧ್ಯಕ್ಷ ವೆಂಕಟೇಶ ಕುಲಕರ್ಣಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಡಾ. ಜಿ.ಕೆ. ಕಾಳೆ ಅಧ್ಯಕ್ಷತೆ ವಹಿಸಿದ್ದರು. ಶ್ರೀ ದತ್ತ ಭಕ್ತ ಮಂಡಳಿ ಕಾರ್ಯದರ್ಶಿ ರಘುನಾಥ ಕೊಂಡಿ ನಿರೂಪಿಸಿದರು. ಆದರ್ಶ ಕುಲಕರ್ಣಿ ವಂದಿಸಿದರು.
ಬ್ರಾಹ್ಮಣರ ಎಲ್ಲ ಪಂಗಡಗಳನ್ನು ಒಗ್ಗೂಡಿಸುವ ಹಿನ್ನೆಲೆಯಲ್ಲಿ ಬರುವ ಜನೇವರಿ 18 ಮತ್ತು 19ರಂದು ಬೆಂಗಳೂರಿನಲ್ಲಿ ಬೃಹತ್ ವಿಪ್ರ ಸಮ್ಮೇಳನವನ್ನು ಆಯೋಜಿಸಲಾಗಿದೆ. ಈ ಸಮ್ಮೇಳನದಲ್ಲಿ ತಾವೆಲ್ಲರೂ ಪಾಲ್ಗೊಂಡು ಅದನ್ನು ಯಶಸ್ವಿ ಮಾಡುವುದರ ಜೊತೆಗೆ ಇತರೆ ಭಾಗದಲ್ಲಿನ ವಿಪ್ರ ಬಾಂಧವರನ್ನು ಪರಿಚಯಿಸಿಕೊಳ್ಳಲು ಇದೊಂದು ಸುವರ್ಣ ಅವಕಾಶ. ಈ ಸಮ್ಮೇಳನಕ್ಕೆ ನಿಮ್ಮನ್ನು ಆಮಂತ್ರಿಸಲು ನಾವಿಲ್ಲಿಗೆ ಬಂದಿದ್ದೇವೆ. ದಯಮಾಡಿ ಸಮ್ಮೇಳನಕ್ಕೆ ಎಲ್ಲರೂ ಆಗಮಿಸಿ ಎಂದು ಹಾರನಹಳ್ಳಿ ಹೇಳಿದರು.