ಬೆಂಗಳೂರು;- ವನ್ಯಜೀವಿಗಳನ್ನು ಅಕ್ರಮವಾಗಿ ಪೋಷಣೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಸಚಿವ ಮಲ್ಲಿಕಾರ್ಜುನ ವಿರುದ್ಧದ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ರದ್ದು ಮಾಡಿದೆ.ಜತೆಗೆ, ಇಡೀ ಪ್ರಕ್ರಿಯೆಯನ್ನು ತನಿಖಾಧಿಕಾರಿಗಳು ಬುಡಮೇಲು ಮಾಡಿದ್ದಾರೆ. ಪ್ರಕರಣದಲ್ಲಿ ಸರಿಪಡಿಸಲಾಗದಷ್ಟು ದೋಷಗಳು ಕಂಡು ಬಂದಿವೆ. ಹಾಗಾಗಿ ಪ್ರಕರಣದ ವಿಚಾರಣೆಗೆ ಅನುಮತಿ ನೀಡಿದಲ್ಲಿ ಕಾನೂನಿನ ಪ್ರಕ್ರಿಯೆ ದುರುಪಯೋಗ ಪಡಿಸಿದಂತಾಗಲಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ಎಸ್. ಎಸ್. ಮಲ್ಲಿಕಾರ್ಜುನ, ಅವರ ಸಹೋದರ ಎಸ್. ಎಸ್. ಗಣೇಶ್ ಹಾಗೂ ಸಂಪಣ್ಣ ಮುತಾಲಿಕ್ ಹಾಗೂ ಜಿ. ಎಂ. ಕರಿಬಸಪ್ಪ ಅವರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿ ಈ ಆದೇಶ ನೀಡಿದೆ.ಅಲ್ಲದೆ, ಪ್ರಕರಣ ದಾಖಲಿಸುವಲ್ಲಿ ವನ್ಯಜೀವಿ ಅಪರಾಧ ಕಾಯಿದೆಯ ನಿಯಮಗಳನ್ನು ಅರಣ್ಯಾಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಉಲ್ಲಂಘಿಸಿದ್ದಾರೆ. ಜತೆಗೆ, ಅರಣ್ಯಾಧಿಕಾರಿಗಳ ದೂರಿನ ಆಧಾರದಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಕಾಗ್ನಿಜೆನ್ಸ್ ಪಡೆದು ತನಿಖೆಗೆ ಆದೇಶಿಸುವಲ್ಲಿ ಲೋಪವೆಸಗಿದೆ ಎಂದು ನ್ಯಾಯಾಲಯ ಹೇಳಿದೆ.