ಗದಗ: ಸರ್ಕಾರ ಬಡವರು ಹಸಿವಿನಿಂದ ಬಳಲಬಾರದು ಎಂದು ಪಡಿತರ ಅಂಗಡಿಗಳ ಮೂಲಕ ಬಡಜನರಿಗೆ ಉಚಿತವಾಗಿ ಅಕ್ಕಿ ಸೇರಿದಂತೆ ಕೆಲ ಆಹಾರ ಧಾನ್ಯಗಳನ್ನು ನೀಡುತ್ತದೆ. ಆದ್ರೆ, ಬಡ ಜನರ ಹೊಟ್ಟೆ ತುಂಬಿಸಬೇಕಿದ್ದ ಪಡಿತರ ಧಾನ್ಯಗಳು, ಬಡವರ ಹೊಟ್ಟೆ ತುಂಬಿಸದೇ ಕಾಳ ಸಂತೆಯಲ್ಲಿ ಮಾರಾಟವಾಗುತ್ತಿವೆ.
ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಎಪಿಎಂಸಿಯಲ್ಲಿ ಇರುವ ಮ್ಯಾಗೇರಿ ಎಂಬುವರ ಅಂಗಡಿಯಲ್ಲಿ, ಶರಣಪ್ಪ ಹನಮಂತಪ್ಪ ಗೌಡರ ಎನ್ನುವ ವ್ಯಕ್ತಿ ಅಕ್ರಮವಾಗಿ ಅಕ್ಕಿ ದಾಸ್ತಾನು ಮಾಡಿರುವ ಮಾಹಿತಿ ತಿಳಿದು, ರೋಣ ತಾಲೂಕಿನ ಆಹಾರ ಇಲಾಖೆ ಅಧಿಕಾರಿ ಶಾಂತಾ ಚವಡಿ, ಗಜೇಂದ್ರಗಡ ಪಿಎಸ್ಐ ಸೋಮನಗೌಡ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದು,
ಸುಮಾರು 1ಲಕ್ಷ 18ಸಾವಿರ ರೂ ಮೌಲ್ಯದ 50ಕೇಜಿ ತೂಕದ 75 ಪ್ಯಾಕೆಟ್ ಪಡಿತರ ಅಕ್ಕಿ ವಶಕ್ಕೆ ಪಡೆದಿದ್ದಾರೆ.
ಬಡಜನರು ಹೊಟ್ಟೆ ತುಂಬ ಊಟ ಮಾಡಲಿ ಎಂದು ಸರ್ಕಾರ ಕೋಟಿ ಕೋಟಿ ಖರ್ಚು ಮಾಡಿ ಪಡಿತರ ವಿತರಿಸುತ್ತದೆ. ಆದ್ರೆ ಗದಗ ನಗರವೂ ಸೇರಿದಂತೆ ಗಜೇಂದ್ರಗಡ, ರೋಣ, ನರಗುಂದ ಹಾಗೂ ಮುಂಡರಗಿ ಭಾಗದಲ್ಲಿ ಅಕ್ರಮ ಅಕ್ಕಿ ಸಾಗಾಟ ದಂಧೆ ಎಗ್ಗಿಲ್ಲದೆ ನಡೆಯುತ್ತಿದ್ದು. ಇದೀಗ ಒಂದೊಂದೇ ಪ್ರಕರಣ ಬೆಳಕಿಗೆ ಬರುತ್ತಿದ್ದು, ಈ ಅಕ್ರಮದ ಹಿಂದಿರುವ ಕಿಂಗ್ ಪಿನ್ ಗಳನ್ನು ಪತ್ತೆ ಮಾಡುವ ಕೆಲಸವನ್ನು ಅಧಿಕಾರಿಗಳು ಮತ್ತು ಪೊಲೀಸರು ಮಾಡಬೇಕಿದೆ.