ದಾವಣಗೆರೆ:- ದಾವಣಗೆರೆಯ ಕಾಡಜ್ಜಿ ಗ್ರಾಮದಲ್ಲಿ ಪತ್ನಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ವ್ಯಕ್ತಿಯೊಬ್ಬ ಪತ್ನಿಯನ್ನು ಹತ್ಯೆಗೈದ ಘಟನೆ ಜರುಗಿದೆ.
ಕಲೀಂವುಲ್ಲಾ ಕೊಲೆಗೈದ ಆರೋಪಿ. ಈತನಿಗೆ ಕಳೆದ ಐದು ವರ್ಷದ ಹಿಂದೆ ಮದುವೆಯಾಗಿತ್ತು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ ಮದುವೆಯಾಗಿ ಇಬ್ಬರು ಮಕ್ಕಳು ಇದ್ದರೂ ಪತ್ನಿ ಬೇರೋಬ್ಬ ಪುರುಷನ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳಂತೆ. ಈ ವಿಚಾರ ಪತಿಗೆ ಗೊತ್ತಾಗಿ ಹಿರಿಯರಿಗೆ ಹೇಳಿ ರಾಜಿ ಪಂಚಾಯಿತಿ ನಡೆಸಿದ್ದ. ಆದರೆ ಹಿರಿಯರು ಯಾರು ನಂಬಿರಲಿಲ್ಲ.
ಇದೇ ಕಾರಣಕ್ಕೆ ರಹಸ್ಯವಾಗಿ ಬೆಡ್ರೂಮ್ನಲ್ಲಿ ಸಿಸಿ ಕ್ಯಾಮೆರಾ ಇರಿಸಿದ್ದ. ಬಳಿಕ ಬೇರೊಬ್ಬನೊಂದಿಗೆ ಪತ್ನಿ ಇದ್ದ ಖಾಸಗಿ ವೀಡಿಯೋವನ್ನು ಇಟ್ಟುಕೊಂಡು ಡಿವೋರ್ಸ್ಗೆ ಅರ್ಜಿ ಹಾಕಿದ್ದ. ಮಕ್ಕಳು ತನ್ನ ಬಳಿಯೇ ಇರಬೇಕು ಎಂದು ಮನವಿ ಮಾಡಿದ್ದ. ಹಿರಿಯರು ಒಂದು ಮಗು ಅವನ ಬಳಿ ಹಾಗೂ ಇನ್ನೊಂದು ಮಗು ಮಹಿಳೆಯ ಜೊತೆ ಇರಲಿ ಎಂದು ಹೇಳಿದ್ದರು. ಅದರಂತೆ ಬಾಲನ್ಯಾಯ ಮಂಡಳಿಗೆ ಮಕ್ಕಳನ್ನು ಕೌನ್ಸಿಲಿಂಗ್ಗೆ ಕರೆದಿದ್ದರು. ಇನ್ನೇನೂ ಕೌನ್ಸಿಲಿಂಗ್ಗೆ ಹೋಗಬೇಕು ಎನ್ನುವಷ್ಟರಲ್ಲಿ ಕಲೀಂವುಲ್ಲಾ ಪತ್ನಿಗೆ 20 ಬಾರಿ ಚಾಕು ಇರಿದಿದ್ದಾನೆ.
ಬಿಡಿಸಲು ಬಂದ ಪತ್ನಿಯ ತಾಯಿಗೂ ಕೂಡ ಚಾಕುವಿನಿಂದ ಇರಿದಿದ್ದಾನೆ. ಕೂಡಲೇ ಇಬ್ಬರನ್ನು ಬಡಾವಣೆ ಪೊಲೀಸರು ಜಿಲ್ಲಾಸ್ಪತ್ರೆಗೆ ಸೇರಿಸಿದ್ದರು. ಚಿಕಿತ್ಸೆ ಫಲಿಸದೆ ಪತ್ನಿ ಸಾವಿಗೀಡಾಗಿದ್ದಾಳೆ. ಅತ್ತೆಗೆ ಚಿಕಿತ್ಸೆ ಮುಂದುವರಿದಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.