ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ದೇಶ ಕಂಡ ಅಪರೂಪದ, ಮುತ್ಸದ್ಧಿ ರಾಜಕಾರಣಗಳಲ್ಲಿ ಮಾಜಿ ಪ್ರಧಾನಿ, ಭಾರತರತ್ನ ದಿ ಅಟಲ್ ಬಿಹಾರಿ ವಾಜಪೇಯಿ ಅಗ್ರಗಣ್ಯರು ಎನ್ನುವುದರಲ್ಲಿ ಎರಡು ಮಾತಿಲ್ಲ. ಅಜಾತಶತ್ರು ಎಂದೇ ಹೆಸರಾಗಿದ್ದ ಆವರ ಆದರ್ಶ, ಮೌಲ್ಯಾಧಾರಿತ ರಾಜಕಾರಣ ಇಂದಿನ ಯುವ ಪೀಳಿಗೆಗೆ ಸದಾ ಮಾರ್ಗದರ್ಶನವಾಗಿದೆ ಎಂದು ಬಿಜೆಪಿ ಬೂತ್ ಕಮಿಟಿ ಅಧ್ಯಕ್ಷ ಆನಂದ ತವರಿ ಹೇಳಿದರು.
ಅವರು ಬುಧವಾರ ಸಂಜೆ ಶಿಗ್ಲಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಮಾಜಿ ಪ್ರಧಾನಮಂತ್ರಿ ದಿ ಅಟಲ್ಬಿಹಾರಿ ವಾಜಪೇಯ ಅವರ ಜನ್ಮದಿನಾಚರಣೆಯ ಸಂದರ್ಭದಲ್ಲಿ ವಾಜಪೇಯಿ ಅವರ ಭಾವಚಿತ್ರಕ್ಕೆ ಪುಷ್ಪ ಮತ್ತು ನುಡಿ ನಮನ ಸಲ್ಲಿಸಿ ಮಾತನಾಡಿದರು.
ಅಧಿಕಾರಕ್ಕಾಗಿ ಏನನ್ನಾದರೂ ಮಾಡಲು ಸಿದ್ಧರಿರುವ ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಪಕ್ಷದ ತತ್ವ, ಸಿದ್ಧಾಂತಕ್ಕೆ ಬದ್ಧರಾಗುಳಿದ ಶ್ರೇಯಸ್ಸು ಅಟಲ್ಜೀ ಅವರದ್ದಾಗಿದೆ. ಎಲ್ಲ ಜಾತಿ, ಮತ, ಪಂಥ, ಧರ್ಮ ಮತ್ತು ವಿರೋಧ ಪಕ್ಷದವರೂ ಗೌರವದಿಂದ ಕಾಣುವ ಶ್ರೇಷ್ಠ ಶಕ್ತಿ ಅಟಲ್ಜೀಯವರದ್ದಾಗಿತ್ತು. ಕವಿ ಹೃದಯಿ, ಮನವತಾವಾದಿಯಾಗಿದ್ದ ಅವರ ಜನ್ಮದಿನವನ್ನು ಉತ್ತಮ ಆಡಳಿತ ದಿನವನ್ನಾಗಿ ಆಚರಿಸುತ್ತಿರುವುದು ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿದೆ.
ದೇಶದ ಬಡವರು, ರೈತರು, ಕೂಲಿಕಾರರ ಬಗ್ಗೆ ಅಪಾರವಾದ ಪ್ರೀತಿ ಹೊಂದಿದ್ದರು. ದೇಶದ ಪ್ರಗತಿಗಾಗಿ ಉನ್ನತ ಮಟ್ಟದ ಕನಸು ಕಂಡಿದ್ದ ಅವರ ಕ್ರಿಯಾಶೀಲತೆಯಿಂದ ದೇಶ ವಿಶ್ವಮಟ್ಟದಲ್ಲಿ ಗುರುತಿಸುವಂತಾಗಿತ್ತು. ಅವರ ಯೋಚನೆ, ಚಿಂತನೆ, ಸಂಘಟನೆ, ತತ್ವ ಸಿದ್ಧಾಂತಗಳು ಯುವಕರಿಗೆ ಪ್ರೇರಣೆಯಾಗಬೇಕು. ಯುವಕರು ಅಟಲ್ಜೀ ಅವರ ಜೀವನಾದರ್ಶಗಳನ್ನು ರೂಢಿಸಿಕೊಳ್ಳುವ ಸಂಕಲ್ಪ ಮಾಡಬೇಕು ಎಂದರು.
ಈ ವೇಳೆ ಪಕ್ಷದ ಮುಖಂಡರಾದ ಸೋಮಣ್ಣ ಡಾಣಗಲ್, ಅಶೋಕ ಶಿರಹಟ್ಟಿ, ಹನಮಂತಪ್ಪ ತಳವಾರ, ಈರಣ್ಣ ಅಕ್ಕೂರ, ಸುರೇಶ ಗೋದಿ, ಸದಾಶಿವ ಬಾಳಿಕಾಯಿ, ಈರಣ್ಣ ಅಳ್ಳಳ್ಳಿ, ನಿಂಗಪ್ಪ ಕುಂಬಾರ, ಈರಣ್ಣ ಪುಟ್ಟಪ್ಪನವರ, ಸಿದ್ದಪ್ಪ ಹರ್ತಿ, ಸಿದ್ದಾರೂಡ ಗುಲಗಂಜಿ ಮುಂತಾದವರಿದ್ದರು.