ವಿಜಯಸಾಕ್ಷಿ ಸುದ್ದಿ, ಗದಗ: ಜಮ್ಮು ಕಾಶ್ಮೀರದ ಪಹಲ್ಗಾಮ್ ಜಿಲ್ಲೆಯಲ್ಲಿ ಕನ್ನಡಿಗರೂ ಸೇರಿ 26 ಜನ ಪ್ರವಾಸಿಗರನ್ನು ಅಮಾನುಷವಾಗಿ ಕೊಂದಿರುವ ಉಗ್ರರ ನಡೆ ಭೀಕರ ಹಾಗೂ ಖಂಡನೀಯವಾಗಿದ್ದು, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇದಕ್ಕೆ ಸದ್ಯದಲ್ಲೇ ತಕ್ಕ ಪ್ರತ್ಯುತ್ತರ ನೀಡಲಿದೆ ಎಂದು ಬಿಜೆಪಿ ಮುಖಂಡ ವಿಜಯಕುಮಾರ ಗಡ್ಡಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಈ ಹಿಂದೆ ಪುಲ್ವಾಮಾ ದಾಳಿಗೆ ಪ್ರತ್ಯುತ್ತರವಾಗಿ ನಡೆಸಿದ ಬಾಲಾಕೋಟ್ ವಾಯುದಾಳಿಯಿಂದ ಪಾಕ್ ಹಾಗೂ ಉಗ್ರನೆಲೆಗಳು ಮರ್ಮಾಘಾತ ಅನುಭವಿಸಿದ್ದವು. ಅದಾದ ನಂತರ ಗಡಿ ಭಾಗದಲ್ಲಿ ಭಯೋತ್ಪಾದಕ ಚಟುವಟಿಕೆಗಳು ಗಣನೀಯವಾಗಿ ಕ್ಷೀಣಿಸಿದ್ದು ಎಲ್ಲರಿಗೂ ಗೊತ್ತಿದೆ. ಉಗ್ರ ಸಂಘಟನೆಗಳು ತಾವು ಕಲಿತ ಪಾಠವನ್ನು ಮರೆತು ಮತ್ತೆ ಇಂಥ ಹೇಯ ಕೃತ್ಯಕ್ಕೆ ತೊಡಗಿದ್ದು, ಪಾಕಿಸ್ಥಾನ ತಾನು ಆರ್ಥಿಕವಾಗಿ ಬಳಲಿಹೋಗಿದ್ದರೂ ಇಂಥ ಅಮಾನವೀಯ ಕೃತ್ಯಗಳಿಗೆ ಪ್ರೋತ್ಸಾಹ ನೀಡುವುದನ್ನು ಬಿಟ್ಟಿಲ್ಲ. ಪ್ರಧಾನಿ ಮೋದಿಯವರು ಬಿಹಾರದಲ್ಲಿ ನಡೆದ ಸಮಾರಂಭದಲ್ಲಿ ಒಬ್ಬೊಬ್ಬ ಉಗ್ರರನ್ನೂ ಹೊಡೆದುರುಳಿಸುತ್ತೇವೆ, ಊಹೆಗೂ ನಿಲುಕದ ಉತ್ತರ ನೀಡುತ್ತೇವೆ ಎಂದು ದಿಟ್ಟ ಸಂದೇಶ ನೀಡಿದ್ದು, ಮತ್ತೊಮ್ಮೆ ಕೇಂದ್ರ ಸರ್ಕಾರ ದುಷ್ಟರ ದಮನ ಮಾಡಲಿದೆ ಎಂದಿದ್ದಾರೆ.