ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಎಸ್ಎಸ್ಎಲ್ಸಿ ಫಲಿತಾಂಶ ಭವಿಷ್ಯದ ಶೈಕ್ಷಣಿಕ ಜೀವನಕ್ಕೆ ಮಾರ್ಗದರ್ಶಿಯಾಗಿದ್ದು, ಪರೀಕ್ಷೆ ಕಾಲ ಸಮೀಪಿಸುತ್ತಿದೆ. ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೇ ಶೃದ್ಧೆ, ಪ್ರಾಮಾಣಿಕತೆಯಿಂದ ಅಭ್ಯಾಸದಲ್ಲಿ ತಲ್ಲೀನರಾಗಬೇಕು ಎಂದು ಬಿಆರ್ಪಿ ಈಶ್ವರ ಮೆಡ್ಲೇರಿ ಹೇಳಿದರು.
ಅವರು ಶುಕ್ರವಾರ ಪಟ್ಟಣದ ಪಿಎಸ್ಬಿಡಿ ಬಾಲಕಿಯರ ಪ್ರೌಢಶಾಲೆಯಲ್ಲಿ ಎಸ್ಎಸ್ಎಲ್ಸಿ ಫಲಿತಾಂಶ ಸುಧಾರಣೆಗಾಗಿ ಹಮ್ಮಿಕೊಳ್ಳಲಾಗಿದ್ದ ಪಾಲಕರ ಸಭೆ ಹಾಗೂ ಓದಿನ ಮನೆ ಕಾರ್ಯಕ್ರಮದಲ್ಲಿ ಮಾತನಾಡಿ, ಶಿಕ್ಷಕರು ಪಾಠ ಮಾಡುವುದು ಎಷ್ಟು ಮುಖ್ಯವೋ, ವಿದ್ಯಾರ್ಥಿಗಳು ನಿರಂತರ ಓದಿ ಸಾಧನೆ ಮಾಡುವುದು ಅಷ್ಟೇ ಮುಖ್ಯ. ವಿದ್ಯಾರ್ಥಿಗಳು ತಮ್ಮಲ್ಲಿನ ಕೀಳರಿಮೆ ಬಿಟ್ಟು, ಋಣಾತ್ಮಕವಾಗಿ ಯೋಚಿಸದೇ ನಾನು ಮಾಡಬಲ್ಲೆ ಎಂಬ ಆತ್ಮವಿಶ್ವಾಸದಿಂದ ಅಭ್ಯಾಸದಲ್ಲಿ ತೊಡಗಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಇಂಗ್ಲೀಷ್, ವಿಜ್ಞಾನ ಮತ್ತು ಗಣಿತವನ್ನು ಕಬ್ಬಿಣದ ಕಡೆಲೆ ಎಂದು ಭಾವಿಸದೇ ಹೆಚ್ಚಿನ ವೇಳೆಯನ್ನು ಈ ವಿಷಯಗಳಿಗೆ ಮೀಸಲಿರಿಸಿ ಶಿಕ್ಷಕರು ಮತ್ತು ಸಹಪಾಠಿಗಳೊಂದಿಗೆ ಚರ್ಚಿಸಿ ವಿಷಯ ಮನನ ಮಾಡಿಕೊಳ್ಳಬೇಕು. ಅದಕ್ಕಾಗಿ ಇಲಾಖೆಯೂ ಈಗಾಗಲೇ ಫಲಿತಾಂಶ ಸುಧಾರಣೆಗಾಗಿ ಅನೇಕ ಪೂರಕ ಕಾರ್ಯಯೋಜನೆಗಳನ್ನು ಮಾಡಿದೆ ಎಂದರು.
ಸಂಸ್ಥೆಯ ಕಾರ್ಯದರ್ಶಿ ಜಯಲಕ್ಷ್ಮಿ ಗಡ್ಡದೇವರಮಠ ಮಾತನಾಡಿ, ಪ್ರತಿಯೊಬ್ಬ ಪಾಲಕರು ಮಕ್ಕಳ ಬಗ್ಗೆ ಸಾಕಷ್ಟು ಆಸೆ-ಕನಸು-ಭರವಸೆಗಳನ್ನಿಟ್ಟುಕೊಂಡಿರುತ್ತಾರೆ. ವಿದ್ಯಾರ್ಥಿಗಳಾದ ನೀವು ಹೆತ್ತವರ ಭರವಸೆಯ ಬೆಳಕಾಗಬೇಕು. ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವವರೆಗೂ ಶೈಕ್ಷಣಿಕ ಸಾಧನಗೆ ಅಡ್ಡಿಯಾಗಲಿರುವ ಮೊಬೈಲ್, ಟಿವಿ ಬಳಸುವುದಿಲ್ಲ ಎಂಬ ದೃಢ ಸಂಕಲ್ಪ ಮಾಡಿ ಎಂದರು.
ಸಂಸ್ಥೆಯ ಅಧ್ಯಕ್ಷರಾದ ಸುವರ್ಣ ಬಾಯಿ ಬಹದ್ದೂರ್ ದೇಸಾಯಿ, ಶಾರದಕ್ಕ ಮಹಾಂತಶೆಟ್ಟರ ಮುಖ್ಯೋಪಾಧ್ಯಾಯ ಜೆ.ಡಿ. ಲಮಾಣಿ, ಸಿಆರ್ಪಿ ಉಮೇಶ ನೇಕಾರ, ಎಂ.ಸಿ. ಹಿರೇಮಠ, ಪಿ.ಎಲ್. ಪಾಟೀಲ, ಎಸ್.ಎಸ್. ಮಠದ, ಎನ್.ಡಿ. ಗೌರಿ, ಎಸ್.ಎಂ. ಹಾದಿಮನಿ, ಕಾವ್ಯಾ ದೇಸಾಯಿ, ಶ್ವೇತಾ ಅಂಬಲಿ ಮುಂತಾದವರಿದ್ದರು.