ಕೊಪ್ಪಳ:- ಜಿಲ್ಲೆಯ ಗಂಗಾವತಿ ತಾಲೂಕಿನ ವೆಂಕಟಗಿರಿ ಬಳಿ ಹಾಡಹಗಲೇ ವ್ಯಕ್ತಿಯೋರ್ವನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಜರುಗಿದೆ. 32 ವರ್ಷದ ಯುವಕ ನಾಗರಾಜ್ ಈರಪ್ಪ ಬೂದನೂರ ಕೊಲೆಯಾದ ಯುವಕ. ಈತ ಗಂಗಾವತಿ ತಾಲೂಕಿನ ವಿಠ್ಠಲಾಪೂರ ಗ್ರಾಮದ ನಿವಾಸಿ ಎನ್ನಲಾಗಿದೆ.
Advertisement
ಯುವಕನ ಅನೈತಿಕ ಸಂಬಂಧದಿಂದ ಬೇಸತ್ತು ಹನುಮಂತ ಹಾಗೂ ಸಿದ್ದರಾಮೇಶ್ ಎಂಬುವರಿಂದ ಕೊಲೆ ನಡೆದಿದೆ. ಹನುಮಂತನ ಹೆಂಡತಿಯೊಂದಿಗೆ ನಾಗರಾಜ್ ಅನೈತಿಕ ಸಂಬಂಧ ಹೊಂದಿದ್ದ. ಎರಡು ಮೂರು ಬಾರಿ ಕನಕಗಿರಿ ಪೊಲೀಸ್ ಠಾಣೆಯಲ್ಲಿ ರಾಜಿಯಾದರೂ ಮಾತು ಕೇಳದ ಹಿನ್ನಲೆ ವೆಂಕಟಗಿರಿ ಜಮೀನೊಂದರಲ್ಲಿ ಕೊಲೆ ಮಾಡಲಾಗಿದೆ.
ಕೊಲೆ ಮಾಡಿ ಕನಕಗಿರಿ ಪೊಲೀಸ್ ಠಾಣೆಗೆ ಹನುಮಂತ ಶರಣಾಗಿದ್ದಾನೆ. ಇನ್ನೋರ್ವ ಆರೋಪಿ ಸಿದ್ದರಾಮೇಶ್ ನಾಪತ್ತೆ ಆಗಿದ್ದು, ಖಾಕಿಯಿಂದ ಶೋಧ ಕಾರ್ಯ ನಡೆದಿದೆ. ಕೊಪ್ಪಳ ಜಿಲ್ಲೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.