ಹುಬ್ಬಳ್ಳಿ: ‘ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಅವೈಜ್ಞಾನಿಕವಾಗಿದ್ದು, ಇದನ್ನು ಸಂಪೂರ್ಣವಾಗಿ ವಿರೋಧಿಸುತ್ತೇವೆ. ಇದರ ಬಗ್ಗೆ ಭೋವಿ,ವಡ್ಡರ, ಕೊರಚ, ಕೊರಮ, ಭಜಂತ್ರಿ ಲಂಬಾಣಿಯವರು 2012 ರಿಂದ ಹೋರಾಟ ನಡೆಸಿದ್ದಾರೆ’ ಎಂದು ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ಗೌರವಾಧ್ಯಕ್ಷ ಅರವಿಂದ ಲಿಂಬಾವಳಿ ತಿಳಿಸಿದರು.
ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ವಿರೋಧಿಸಿ ಇಲ್ಲಿನ ಬಂಜಾರ ಭವನದಲ್ಲಿ ನಡೆದ ವಿಭಾಗ ಮಟ್ಟದ ಸಭೆಯಲ್ಲಿ ಮಾತನಾಡಿದ ಅವರು, ‘ಆಂಧ್ರಪ್ರದೇಶ ಸರ್ಕಾರವು ಒಳಮೀಸಲಾತಿ ಕಲ್ಪಿಸಲು ಯತ್ನಿಸಿ ಎಡವಿದೆ. ಹೀಗಿದ್ದರೂ ರಾಜ್ಯದ ಕೆಲ ಸಚಿವರು ವರದಿ ಜಾರಿಗಾಗಿ ಒತ್ತಾಯಿಸುತ್ತಿರುವುದು ಖಂಡನೀಯ.
ಸಚಿವರ ಒತ್ತಾಯವನ್ನು ಜನರು ಒಪ್ಪಲ್ಲ’ ಎಂದರು. ವರದಿಯನ್ನು ವಿರೋಧಿಸುವ ಹೋರಾಟಕ್ಕೆ ರಾಜ್ಯದ ಲಂಬಾಣಿ, ಭೋವಿ, ಕೊರಚ, ಕೊರಮ, ಭಜಂತ್ರಿ ಸೇರಿ ಇತರೆ ಸಮುದಾಯದವರು ಕೈ ಜೋಡಿಸಬೇಕು. ನವೆಂಬರ್ 30ರಂದು ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ, ನಮ್ಮ ಬೇಡಿಕೆಯನ್ನು ಮುಂದಿಡೋಣ’ ಎಂದರು.