ವಿಜಯಸಾಕ್ಷಿ ಸುದ್ದಿ, ಗದಗ : ಅಸ್ಮಾಕಂ ಅಂದರೆ ಇದು ನನ್ನ ಅಲ್ಲ, ‘ನಮ್ಮ ಸಂಸ್ಕೃತ’ ಕಾರ್ಯಕ್ರಮ. ಎಲ್ಲ ವಿದ್ಯಾರ್ಥಿಗಳು ಸಂಸ್ಕೃತವನ್ನು ಹೆಚ್ಚು ಹೆಚ್ಚು ಓದುವದರ ಮೂಲಕ ಸಂಸ್ಕೃತ ಭಾಷೆಯನ್ನು ನಮ್ಮದಾಗಿಸಿಕೊಳ್ಳಬೇಕು. ಇತರರಿಗೂ ಈ ವಿದ್ಯೆಯನ್ನು ಮುಟ್ಟಿಸಬೇಕು. ಮನುಷ್ಯನ ಧ್ವನಿಪಟಲಕ್ಕೆ ಸಂಬಂಧಿಸಿದ ಗುಕ್ಕಿಸುವ ರೋಗ ಸಂಸ್ಕೃತ ಕಲಿಯುವದರಿಂದ ದೂರವಾಗುತ್ತದೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ ಎಂದು ವಿ. ಗಣಪತಿ ಎಸ್.ಗಾಂವ್ಕರ್ ಹೇಳಿದರು.
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಬೆಂಗಳೂರು, ಸಂಸ್ಕೃತ ಶಿಕ್ಷಣ ನಿರ್ದೇಶನಾಲಯ ಬೆಂಗಳೂರು ಹಾಗೂ ಜಗದ್ಗುರು ತೋಂಟದಾರ್ಯ ಮಠ ಗದಗ ಇವುಗಳ ಸಹಯೋಗದಲ್ಲಿ ನಗರದ ಜ. ತೋಂಟದಾರ್ಯ ಸಂಸ್ಕೃತ ಪಾಠಶಾಲೆಯ ಅಸ್ಮಾಕಂ ಸಂಸ್ಕೃತಂ ಸರಣಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಷ್ಟçಕವಿ ಕುವೆಂಪುರವರ ರಾಮಾಯಣದರ್ಶನಂ ಕಾವ್ಯವನ್ನು ಸರಿಯಾಗಿ ಅರ್ಥೈಸಿಕೊಳ್ಳಲು ಸಂಸ್ಕೃತದ ಜ್ಞಾನ ಅವಶ್ಯ. ಸಂಸ್ಕೃತ ವಿ.ವಿ ಕುಲಪತಿಗಳಾದ ಡಾ. ಅಹಲ್ಯಾರವರು ಸಂಸ್ಕೃತ ಬೆಳವಣಿಗೆಗಾಗಿ ಎಲ್ಲ ರೀತಿಯ ಪ್ರೋತ್ಸಾಹ ಕೊಡುತ್ತಿದ್ದಾರೆ. ಸಂಸ್ಕೃತ ವಿ.ವಿ ಸಂಸ್ಕೃತ ಶಿಕ್ಷಣ ನಿರ್ದೇಶನಾಲಯದ ಈ ಸರಣಿ ಕಾರ್ಯಕ್ರಮಗಳು ರಾಜ್ಯಾದ್ಯಂತ ಜರುಗಿ ಸಾಮಾನ್ಯ ಜನರಿಗೆ ತಲುಪಿ ಸಂಸ್ಕೃತ ಜನಭಾಷೆಯಾಗುವತ್ತ ಶಿಕ್ಷಕರು, ಸಂಸ್ಕೃತಜ್ಞರು ಪ್ರಯತ್ನಿಸಬೇಕಾಗಿದೆ ಎಂದರು.
ಜ.ತೋ. ಸಂಸ್ಕೃತ ಪಾಠಶಾಲೆಯಿಂದ ತೋಂಟದಾರ್ಯ ಮಠದ ವರೆಗೆ ಸಂಸ್ಕೃತ ಘೋಷಣೆಗಳನ್ನು ಕೂಗುತ್ತಾ ಜಾಥಾ ನಡೆಸಲಾಯಿತು.
ಮುಖ್ಯಾಧ್ಯಾಪಕರಾದ ವಿದ್ವಾನ್ ಎಸ್.ಎನ್. ಶಿಂಪಿಗೇರವರು ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಶಿಕ್ಷಕರಾದ ಮಹಾಂತೇಶ ಮಾದರ ನಿರೂಪಿಸಿದರು. ಶಿಕ್ಷಕಿಯರಾದ ವಿಜಯಲಕ್ಷ್ಮಿ ಪಟ್ಟಣಶೆಟ್ಟಿ, ಸರೋಜಾ ಉಳವಿ, ಹಿರಿಯ ಶಿಕ್ಷಕರಾದ ಎಸ್.ಎಸ್. ನೀಲಗುಂದ, ಕಳಕಪ್ಪ ಕುರ್ತಕೋಟಿ ಮುಂತಾದವರು ಉಪಸ್ಥಿತರಿದ್ದರು. ವಿಶ್ವ ಬಾಹ್ಯಾಕಾಶ ದಿನದ ಅಂಗವಾಗಿ ಚಂದ್ರಗೀತೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಅಧ್ಯಕ್ಷತೆ ವಹಿಸಿದ್ದ ಜ.ತೋ. ಸಂಸ್ಕೃತ ಪಾಠಶಾಲೆಯ ನಿವೃತ್ತ ಮುಖ್ಯಾಧ್ಯಾಪಕ ವಿದ್ವಾನ್ ಎಸ್.ವ್ಹಿ. ಹಿರೇಮಠ ಮಾತನಾಡಿ, ವಿಶ್ವದ ಅನೇಕ ಭಾಷೆಗಳು ಸಂಸ್ಕೃತದ ನೆರವು ಪಡೆದುಕೊಂಡಿವೆ. ಆಧುನಿಕ ಯುಗದಲ್ಲಿ ಕಂಪ್ಯೂಟರ್ಗೆ ಸಹ ಸರಿಯಾಗಿ ಹೊಂದುವಂತಹ ಭಾಷೆ ಸಂಸ್ಕೃತವಾಗಿದೆ. ಸಂಸ್ಕೃತ ಕಲಿತವರಿಗೆ ವಿದೇಶಗಳಲ್ಲಿಯೂ ಬೇಡಿಕೆ ಇದೆ. ಅನೇಕ ದೇಶಗಳ ಜನ ಸಂಸ್ಕೃತ ಕಲಿಯಲು ಉತ್ಸುಕರಾಗಿದ್ದಾರೆ. ಸಂಸ್ಕೃತ ಕಲಿತವರಿಗೆಲ್ಲ ಮುಂದಿನ ದಿನಮಾನಗಳಲ್ಲಿ ಉತ್ತಮ ಬೇಡಿಕೆ ಇದೆ. ಉತ್ತಮ ಸಂಸ್ಕಾರ ಹೊಂದಿದ ಈ ಭಾಷೆಯನ್ನು ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಕಲಿಯಬೇಕೆಂದರು.