ವಿಜಯಸಾಕ್ಷಿ ಸುದ್ದಿ, ಧಾರವಾಡ: ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ಡೇ ಕೇರ್ ಕಿಮೋಥೆರಪಿ ಕೇಂದ್ರವನ್ನು ಸೋಮವಾರ ಸಂಜೆ ಕಾರ್ಮಿಕ ಸಚಿವರು ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್, ಜಿಲ್ಲಾಧಿಕಾರಿ ದಿವ್ಯ ಪ್ರಭು ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಅವರು ಮಾತನಾಡಿ, ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ಡೇ ಕೇರ್ ಕಿಮೋಥೆರಪಿ ಕೇಂದ್ರವನ್ನು ಎ.ಬಿ.ಎ.ಆರ್.ಕೆ ಯೋಜನೆ ಅಡಿಯಲ್ಲಿ ಒಡಂಬಡಿಕೆಯೊಂದಿಗೆ ಪ್ರತಿಯೊಂದು ರೋಗಿಗಳಿಗೆ 1ನೇ ಸೈಕಲ್ ಚಿಕಿತ್ಸೆಯನ್ನು ಮಾಡಿಕೊಂಡವರಿಗೆ ಮುಂದಿನ ಸೈಕಲ್ನ್ನು ಅವರ ಅಭಿಪ್ರಾಯ ಹಾಗೂ ಸಲಹೆಯಂತೆ ಚಿಕಿತ್ಸೆಗೆ ಪ್ರತಿ ಬುಧವಾರ ಕ್ಯಾನ್ಸರ್ ರೋಗದ ತಜ್ಞವೈದ್ಯರಿಂದ ರೋಗಿಗಳನ್ನು ಜಿಲ್ಲಾ ಆಸ್ಪತ್ರೆಯಲ್ಲಿಯೇ ಪರೀಕ್ಷಿಸಲಾಗುವುದು. ಇದರಿಂದ 2024-2025ನೇ ಸಾಲಿನ 242 ರೋಗಿಗಳನ್ನು ಕ್ಯಾನ್ಸರ್ ಚಿಕಿತ್ಸೆಗೆ ಕಳುಹಿಸಲಾಗಿದೆ. ಇಲ್ಲಿ ಚಿಕಿತ್ಸೆ ಸಿಗುವುದರಿಂದ ದೂರದ ಊರಿನ ಸಾರ್ವಜನಿಕರಿಗೆ ಅನುಕೂಲವಾಗುವುದು. ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದರು.
ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಮುಖ್ಯಸ್ಥ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಸಂಗಪ್ಪ ಎನ್.ಗಾಬಿ, ಸ್ಥಳೀಯ ವೈದ್ಯಾಧಿಕಾರಿ ಡಾ. ಗಿರಿಜಾತಾಯಿ ಜಿ.ಹೆಚ್, ಹಿರಿಯ ತಜ್ಞವೈದ್ಯರುಗಳಾದ ಡಾ. ಮಯೂರ ಕದಂ ಮತ್ತು ಡಾ. ಎಸ್.ಎಮ್. ಸಾಂಬ್ರಾಣಿ, ಶುಶ್ರೂಷಾ ಅಧೀಕ್ಷಕ ವಿಜಯಕುಮಾರ ಮಳಗಿ, ಕಛೇರಿ ಅಧೀಕ್ಷಕ ವಾಯ್.ಹೆಚ್. ಬನಸೋಡೆ ಹಾಗೂ ಸಿಬ್ಬಂದಿಗಳು ಹಾಜರಿದ್ದರು.