ಹಾವೇರಿ: ನಗರದ ರೈಲು ನಿಲ್ದಾಣದ ಎದುರಿನ ಹಳೆಯ ಧರ್ಮಶಾಲಾ ಆವರಣದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ನಿರ್ಮಿಸಿರುವ ಗಾಂಧಿ ಭವನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಉದ್ಘಾಟಿಸಿದರು.
ಮಹಾತ್ಮ ಗಾಂಧೀಜಿ ಪ್ರತಿಮೆ, ಮೋಹನದಾಸ್ ಕುಟೀರ, ಕಸ್ತೂರಬಾ ಕುಟೀರ, ಸ್ವದೇಶಿ, ಚರಕ, ಫೀನಿಕ್ಸ್, ಸಬರಮತಿ ಕುಟೀರಗಳು, ಸತ್ಯಾನ್ವಷಣೆ ಗ್ರಂಥಾಲಯ, ಸತ್ಯಶೋಧನೆ ಅಧ್ಯಯನ ಕೊಠಡಿ, ಹೃದಯಕುಂಜ್ ಪ್ರಾರ್ಥನಾ ಮಂದಿರ, ಮೋಹನದಾಸ್ ಟು ಮಹಾತ್ಮ ಬೆಳವಣಿಗೆಯ ಗಾಂಧೀಜಿಯವರ ಜೀವನದರ್ಶನ ಕುರಿತ ಛಾಯಾಚಿತ್ರಗಳ ಪ್ರದರ್ಶನಾಲಯ, ಸತ್ಯಾಗ್ರಹ ಸಭಾಂಗಣ, ರಂಗಚಟುವಟಿಕೆಗಳಿಗಾಗಿ ಬಾಪೂಜಿ ಬಯಲು ರಂಗಮಂದಿರನ್ನು ವೀಕ್ಷಿಸಿದ ಮುಖ್ಯಮಂತ್ರಿಯವರು ಮೆಚ್ಚುಗೆ ವ್ಯಕ್ತಪಡಿಸಿ, ಗಣ್ಯರ ಭೇಟಿಯ ಸಂದರ್ಶನ ಪುಸ್ತಕದಲ್ಲಿ ಅಭಿಪ್ರಾಯ ದಾಖಲಿಸಿದರು.
ಉಪ್ಪಿನ ಸತ್ಯಾಗ್ರಹದ ಸಂದರ್ಭದಲ್ಲಿ ಹಾವೇರಿ ಜಿಲ್ಲೆಯ ಮೋಟೆಬೆನ್ನೂರಿನ ಮೈಲಾರ ಮಹದೇವಪ್ಪ ಅವರೊಂದಿಗಿದ್ದ ಸನ್ನಿವೇಶದ ಪ್ರತಿಕೃತಿ, ದಂಡಿ ಯಾತ್ರೆ ಕಲಾಕೃತಿಗಳನ್ನು ತಾಳ್ಮೆಯಿಂದ ವೀಕ್ಷಿಸಿದ ಮುಖ್ಯಮಂತ್ರಿಗಳು ಹಾಗೂ ಗಣ್ಯರು ಸಂತಸ ವ್ಯಕ್ತಪಡಿಸಿದರು.
ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಗೃಹ ಸಚಿವ ಡಾ.ಜಿ.ಪರಮೇಶ್ವರ, ಕಾನೂನು ಹಾಗೂ ಪ್ರವಾಸೋದ್ಯಮ ಖಾತೆ ಸಚಿವ ಹೆಚ್.ಕೆ.ಪಾಟೀಲ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ , ಸಕ್ಕರೆ, ಜವಳಿ, ಕಬ್ಬು ಅಭಿವೃದ್ಧಿ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ನಗರಾಭಿವೃದ್ಧಿ ಸಚಿವ ಬಿ.ಎಸ್.ಸುರೇಶ್, ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್, ಶಾಸಕರಾದ ಶ್ರೀನಿವಾಸ ಮಾನೆ, ಬಸವರಾಜ ಶಿವಣ್ಣವರ, ಯು.ಬಿ.ಬಣಕಾರ, ಪ್ರಕಾಶ ಕೋಳಿವಾಡ, ಮಾಜಿ ಸಂಸದ ಪ್ರೊ.ಐ.ಜಿ.ಸನದಿ, ಜಿಲ್ಲಾಧಿಕಾರಿ ರಘುನಂದನಮೂರ್ತಿ, ಜಿಪಂ ಸಿಇಓ ಅಕ್ಷಯ್ ಶ್ರೀಧರ್, ಜಿಲ್ಲಾ ವಾರ್ತಾಧಿಕಾರಿ ಡಾ.ರಂಗನಾಥ ಬಿ.ಆರ್, ವಾರ್ತಾ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಡೊಳ್ಳಿನ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಗಿರೀಶ್ ಪದಕಿ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ತಿಮ್ಮೇಶಕುಮಾರ್, ಸಾಹಿತಿ ಸತೀಶ ಕುಲಕರ್ಣಿ, ಬೆಂಗಳೂರಿನ ಗಾಂಧಿ ಸ್ಮಾರಕ ನಿಧಿ ಉಪಾಧ್ಯಕ್ಷ ಡಾ.ತಿಪ್ಪನಗೌಡ ಮತ್ತಿತರರು ಇದ್ದರು.