ವಿಜಯಸಾಕ್ಷಿ ಸುದ್ದಿ, ನರೇಗಲ್ : ಪಟ್ಟಣದ ಪೊಲೀಸ್ ಠಾಣೆಯ ಎದುರಿಗೆ ಹಳ್ಳಿ ಮಾರ್ಟ್ ಎಂಬ ಹೊಸ ವ್ಯಾಪಾರ ಮಳಿಗೆಯನ್ನು ನರಗುಂದ ತಾಲೂಕಿನ ಭೈರನಹಟ್ಟಿ ದೊರೆಸ್ವಾಮಿಮಠದ ಶ್ರೀ ಶಾಂತಲಿಂಗ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ನರೇಗಲ್ಲ ಹಿರೇಮಠದ ಷ.ಬ್ರ. ಮಲ್ಲಿಕಾರ್ಜುನ ಶಿವಾಚಾರ್ಯರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಷ.ಬ್ರ. ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು, ದೊಡ್ಡ ದೊಡ್ಡ ಪಟ್ಟಣಗಳಿಗೆ ಸೀಮಿತವಾಗಿದ್ದ ಮಾರ್ಟ್ ಕಲ್ಪನೆಯನ್ನು ಹೋಬಳಿ ಮಟ್ಟಕ್ಕೂ ಪರಿಚಯಿಸಿದ ಮಹಾಂತೇಶ ಜಕ್ಕಲಿಯವರನ್ನು ಭಗವಂತ ಆಶೀರ್ವದಿಸಲಿ. ಅತ್ತ ಪಟ್ಟಣವೂ ಅಲ್ಲದ ಇತ್ತ ಹಳ್ಳಿಯೂ ಅಲ್ಲದ ನರೇಗಲ್ಲದಂತಹ ಪಟ್ಟಣದಲ್ಲಿ ಇಂಥದ್ದೊಂದು ಅಂಗಡಿಯನ್ನು ತೆರೆಯುವ ಸಾಹಸ ಮಾಡಿರುವ ಜಕ್ಕಲಿಯವರ ಕಾರ್ಯ ಯಶಸ್ವಿಯಾಗಲಿ ಎಂದು ಹಾರೈಸಿದರು.
ದಿವ್ಯ ಸಾನ್ನಿಧ್ಯ ವಹಿಸಿದ್ದ ದೊರೆಸ್ವಾಮಠ ಭೈರನಹಟ್ಟಿಯ ಶ್ರೀ ಶಾಂತಲಿಂಗ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಒಂದು ಹೊಸ ಉದ್ಯಮವನ್ನು ಸ್ಥಾಪಿಸುವುದು ಸುಲಭದ ಕೆಲಸವಲ್ಲ. ಇಂತಹ ಸಾಹಸಕ್ಕೆ ಕೈ ಹಾಕುವ ಮೂಲಕ ಜಕ್ಕಲಿ ನರೇಗಲ್ಲ ಪಟ್ಟಣ ಮತ್ತು ಸುತ್ತಲಿನ ಜನತೆಗೆ ಉತ್ತಮ ಸೇವೆ ಒದಗಿಸಲು ಪ್ರಯತ್ನ ಪಟ್ಟಿದ್ದಾರೆ. ಅವರ ಪ್ರಯತ್ನಕ್ಕೆ ಯಶಸ್ಸು ಸಿಗಲಿ ಎಂದು ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ಗದಗ ತಾ.ಪಂನ ಮಾಜಿ ಅಧ್ಯಕ್ಷ ವಿದ್ಯಾಧರ ದೊಡ್ಡಮನಿ, ಧುರೀಣ ಅಶೋಕ ಬ್ಯಾಹಟ್ಟಿ, ಹೆಸ್ಕಾಂನ ಅಧೀಕ್ಷಕ ರಾಜೇಶ ಬಿ.ಕಲ್ಯಾಣಶೆಟ್ಟರ, ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ನಾಗರಾಜ ಕುರಿಯವರ, ನಿವೃತ್ತ ಮುಖ್ಯ ಶಿಕ್ಷಕ ಅರುಣ ಬಿ.ಕುಲಕರ್ಣಿ, ಕೆವಿಜಿ ಬ್ಯಾಂಕಿನ ವ್ಯವಸ್ಥಾಪಕ ಬಿ.ಜಿ. ನಾಯಕ ಮುಂತಾದವರಿದ್ದರು.