ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಗ್ರಾಮಗಳಿಗೆ ಗ್ರಾಮ ಪಂಚಾಯಿತಿಗಳೇ ಮುಖ್ಯ ಆಡಳಿತ ಯಂತ್ರವಾಗಿದ್ದು, ಇಲ್ಲಿನ ಕೆಲಸಗಳ ಬಗ್ಗೆ ಜನರ ಅಲೆದಾಟವನ್ನು ತಪ್ಪಿಸುವ ಕಾರ್ಯಗಳು ನಡೆಯಬೇಕಾಗಿದೆ. ಕಟ್ಟಡಗಳ ಸುಧಾರಣೆಯಾಗುವದರ ಜೊತೆಗೆ ಆಡಳಿತ ಯಂತ್ರವು ಸುಧಾರಣೆಯಾದಾಗ ಮಾತ್ರ ಸರಕಾರದ ಕಾರ್ಯಗಳು ಜನರಿಗೆ ಶೀಘ್ರ ತಲುಪುವಂತಾಗುತ್ತವೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಅವರು ಶುಕ್ರವಾರ ತಾಲೂಕಿನ ಗೊಜನೂರು ಗ್ರಾಮ ಪಂಚಾಯಿತಿ ಕಚೇರಿ ನೂತನ ಕಟ್ಟಡವನ್ನು ಉದ್ಘಾಟಿಸಿ ನಂತರ ನಡೆದ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗ್ರಾ.ಪಂ ಸದಸ್ಯರಿಗೆ ಕೆಲಸ ಮಾಡಬೇಕೆನ್ನುವ ಹಿತಾಸಕ್ತಿಯಲ್ಲಿ ವಯಕ್ತಿಕ ಹಿತಾಸಕ್ತಿಯನ್ನು ಬಿಟ್ಟು ಊರಿನ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಬೇಕೆನ್ನುವ ಮನೋಭಾವನೆ ಬೇಕಾಗಿದೆ. ಅದು ಗೊಜನೂರು ಪಂಚಾಯಿತಿಯಲ್ಲಿ ಕಂಡು ಬರುತ್ತಿದೆ. ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿಗಳು ಎಂದರೆ ನಿರಾಸಕ್ತಿ ತೋರುವವರೇ ಅಧಿಕವಾಗಿದ್ದು, ಗೊಜನೂರ ಗ್ರಾಮದವರು ಉದ್ಯೋಗ ಖಾತ್ರಿ ಯೋಜನೆಯಡಿ ಶಾಲೆ ಕಾಂಪೌಂಡ್, ಮೈದಾನ, ಊಟದ ಕೊಠಡಿ, ಗ್ರಾಮ ಪಂಚಾಯಿತಿ ಕಟ್ಟಡ ಸೇರಿದಂತೆ ಅನೇಕ ರೀತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಸದುಪಯೋಗವನ್ನು ಪಡೆಯಬಹುದಾಗಿದೆ.
ಇಲ್ಲಿ ಎಲ್ಲರೂ ಪಕ್ಷಾತೀತವಾಗಿ ಗ್ರಾಮದ ಶ್ರೇಯೋಭಿವೃದ್ಧಿಯನ್ನು ಬಯಸುತ್ತಿರುವದು ಇದೊಂದು ಮಾದರಿ ಪಂಚಾಯತಿಯಾಗಿ ಕಂಡು ಬರುತ್ತಿದೆ. ಇದೇ ರೀತಿ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿಯವರು ಉದ್ಯೋಗ ಖಾತ್ರಿ ಯೋಜನೆ ಅನುದಾನವನ್ನು ಬಳೆಸಿಕೊಳ್ಳಬೇಕು. ಗದಗ ಜಿಲ್ಲೆಯಲ್ಲಿ ನಿಗದಿಪಡಿಸಿದ ಅವಧಿಯಲ್ಲಿಯೇ ಸುಸಜ್ಜಿತ ಸುಂದರ ಮತ್ತು ಮಾದರಿ ಕಟ್ಟಡ ನಿರ್ಮಾಣ ಮಾಡುವಲ್ಲಿ ಗೊಜನೂರು ಗ್ರಾ.ಪಂ ಯಶಸ್ವಿಯಾಗಿದ್ದು, ಯಾವುದೇ ಹೈಟೆಕ್ ಕಟ್ಟಡಕ್ಕೂ ಕಡಿಮೆ ಇಲ್ಲದಂತೆ ನಿರ್ಮಾಣ ಮಾಡಿರುವುದರಿಂದ ಜನರಿಗೆ ಹೆಚ್ಚು ಅನೂಕೂಲವಾಗಲಿ ಎಂದರು.
ಕಾರ್ಯಕ್ರಮದ ನೇತೃತ್ವವನ್ನು ಶಂಕ್ರಯ್ಯ ಹಿರೇಮಠ ವಹಿಸಿದ್ದರು. ಎಂ.ಎಸ್. ದೊಡ್ಡಗೌಡ್ರ, ಇಓ ಕೃಷ್ಣಪ್ಪ ಧರ್ಮರ, ಜಿಲ್ಲಾ ಪಶುವೈದ್ಯಾಧಿಕಾರಿ ಆರ್.ವೈ. ಗುರಿಕಾರ, ಸಿ.ಪಿ. ಮಾಡಳ್ಳಿ, ಗ್ರಾ.ಪಂ ಸದಸ್ಯ ಮಂಜುನಾಥ ಚಲುವಾದಿ ಮಾತನಾಡಿದರು.
ಗ್ರಾಪಂ ಅಧ್ಯಕ್ಷೆ ನೀಲವ್ವ ಮಾದರ, ಉಪಾಧ್ಯಕ್ಷ ಮಹಾಂತಗೌಡ ಪಾಟೀಲ್, ತಹಸೀಲ್ದಾರ ವಾಸುದೇವ ಸ್ವಾಮಿ, ಬಿಇಓ ಎಚ್.ಎನ್. ನಾಯಕ, ಸಿ.ಪಿ. ಮಾಡಳ್ಳಿ, ಜಿ.ಪಂ ಮಾಜಿ ಸದಸ್ಯ ಎಂ.ಎಸ್. ದೊಡ್ಡಗೌಡ್ರ, ದೇವಕ್ಕ ಲಮಾಣಿ, ಸುಶೀಲವ್ವ ಲಮಾಣಿ, ಶಿವನಗೌಡ ಪಾಟೀಲ್, ರಮೇಶ ದನದಮನಿ, ಶಿವಲಿಂಗಪ್ಪ ಸೊರಟೂರ, ವೀರೇಂದ್ರಗೌಡ ಪಾಟೀಲ್, ನಾಗಪ್ಪ ವಡಕಣ್ಣನವರ, ಯಲ್ಲಪ್ಪ ಮೋಡಿ, ಹಾಲಮ್ಮ ಸಂಶಿ, ಪುಟ್ಟವ್ವ ಮಾದರ, ಹರಳಕ್ಕ ಕರೆಣ್ಣವರ, ದಾವಲಬಿ ದೊಡ್ಡಮನಿ, ಲಲಿತಾ ಶಿವಳ್ಳಿ, ಗ್ರಾ.ಪಂ ಸದಸ್ಯರಾದ ನೀಲವ್ವ ಪಾಟೀಲ, ಸುಶೀಲವ್ವ ತಳವಾರ, ಗಂಗಾಧರ ಕರಿನಿಂಗಣ್ಣವರ, ನೀಲಪ್ಪ ಗುಡ್ಡಣ್ಣವರ, ಪಾತಿಮಾ ಮುಲ್ಲಾನವರ, ಗೀತಾ ಪುರದ, ದ್ಯಾಮವ್ವ ಮೆಣಸಿನಕಾಯಿ, ಮಾಂತಪ್ಪ ಹರಿಜನ, ಪುಟ್ಟವ್ವ ಲಮಾಣಿ, ಚಿನ್ನಕ್ಕ ಲಮಾಣಿ ಮುಂತಾದವರಿದ್ದರು. ಪಿಡಿಓ ಮಂಜುನಾಥ ಮಲ್ಲೂರ ಸ್ವಾಗತಿಸಿದರು, ಈಶ್ವರ ಮೆಡ್ಲೇರಿ ನಿರೂಪಿಸಿದರು.
ಮಾಜಿ ಶಾಸಕರುಗಳಾದ ಜಿ.ಎಸ್.ಗಡ್ಡದೇವರಮಠ, ರಾಮಕೃಷ್ಣ ದೊಡ್ಡಮನಿ, ರಾಮಣ್ಣ ಲಮಾಣಿ ಮಾತನಾಡಿ, ಗೊಜನೂರು ಗ್ರಾ.ಪಂ.ಸ್ವಂತ ಕಟ್ಟಡ ಈ ಭಾಗದಲ್ಲಿಯೇ ಮಾದರಿ ಕಟ್ಟಡವಾಗಿದ್ದು, ನಗರ ಪ್ರದೇಶಗಳಲ್ಲಿರುವ ಕಚೇರಿ ಕಟ್ಟಡಕ್ಕೆ ಯಾವುದೇ ರೀತಿಯ ಕೊರತೆ ಇಲ್ಲದಂತೆ ಈ ಕಟ್ಟಡ ನಿರ್ಮಾಣವಾಗಿರುವದನ್ನು ನೋಡಬಹುದಾಗಿದೆ. ಇದಕ್ಕೆ ಇಲ್ಲಿನ ಈಗೀನ, ಹಿಂದಿನ ಆಡಳಿತ ಮಂಡಳಿ, ಗ್ರಾಮಸ್ಥರ ಸಹಕಾರ ಮಾದರಿಯಾಗಿದೆ. ಸುಸಜ್ಜಿತ ಕಟ್ಟಡವಾಗಿ ನಿರ್ಮಾಣಗೊಂಡಿರುವದು ಹೆಮ್ಮೆಯ ಸಂಗತಿಯಾಗಿದೆ ಎಂದರು.