ವಿಜಯಸಾಕ್ಷಿ ಸುದ್ದಿ, ಗದಗ : ಮಹಿಳೆ ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ಪ್ರಗತಿ ಸಾಧಿಸಬೇಕು. ಅಂದಾಗ ಮಾತ್ರ ಸ್ವಾವಲಂಬಿ ಜೀವನ ನಡೆಸಲು ಸಾಧ್ಯ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಯೋಗೇಶ ಎ. ಹೇಳಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ವತಿಯಿಂದ ತಾಲೂಕಿನ ಹೊಸಹಳ್ಳಿ ಗ್ರಾಮದ ದುರ್ಗಾದೇವಿ ದೇವಸ್ಥಾನದಲ್ಲಿ ಬುಧವಾರ ನಡೆದ ಶಿವಾನಿ ಜ್ಞಾನ ವಿಕಾಸ ಕೇಂದ್ರದ ಉದ್ಘಾಟನೆ ಹಾಗೂ ಸ್ವ-ಉದ್ಯೋಗ ಪ್ರೇರಣಾ ಶಿಬಿರ ಉದ್ಘಾಟಿಸಿ ಮಾತನಾಡಿ, ಆಧುನಿಕ ಮಹಿಳೆ ಅಬಲೆ ಅಲ್ಲ, ಸಬಲೆ. ಶಿಕ್ಷಣ, ಕಲೆ, ಸಾಹಿತ್ಯ, ವಿಜ್ಞಾನ-ತಂತ್ರಜ್ಞಾನ ಹೀಗೆ ಸರ್ವ ರಂಗದಲ್ಲೂ ತನ್ನ ಛಾಪು ಮೂಡಿಸಿದ್ದಾಳೆ. ಹೀಗಾಗಿ ಗ್ರಾಮೀಣ ಭಾಗದ ಮಹಿಳೆಯರು ಕೂಡ ಮುಖ್ಯವಾಹಿನಿಗೆ ಬರವ ಪ್ರಯತ್ನ ಮಾಡಬೇಕು ಎಂದರು.
ಆರ್ಥಿಕ ಸ್ವಾವಲಂಬಿ ಮಹಿಳೆ ತಮ್ಮ ಮಕ್ಕಳಿಗೆ ಹಾಗೂ ಸಮಾಜಕ್ಕೆ ಮಾದರಿಯಾಗಿ ನಿಲ್ಲುತ್ತಾಳೆ. ಇದು ನಮ್ಮ ಸಂಸ್ಕೃತಿಯಲ್ಲಿ ಆಳವಾಗಿ ಬೇರೂರಿದ ಲಿಂಗ ತಾರತಮ್ಯ ನೀತಿ ತೊಡೆದು ಹಾಕಲು ಸಹಕಾರಿಯೂ ಆಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಕೊಪ್ಪಳ ಪ್ರಾದೇಶಿಕ ಕಚೇರಿ ಜ್ಞಾನ ವಿಕಾಸದ ಯೋಜನಾಧಿಕಾರಿ ಸುಧಾ ಗಾಂವಕರ್ ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆ ಹೇಮಾವತಿ ಹೆಗ್ಗಡೆ ಅಮ್ಮನವರ ಕನಸಿನ ಕೂಸು. ಹೀಗಾಗಿ ಗ್ರಾಮೀಣ ಭಾಗದ ಮಹಿಳೆಯರ ಆರ್ಥಿಕ ಸಬಲತೆ ಸಾಧಿಸಬೇಕೆಂದು ಕರೆ ನೀಡಿದರು.
ಗದಗ ತಾಲೂಕು ಯೋಜನಾಧಿಕಾರಿ ಸುರೇಂದ್ರ ನಾಯ್ಕ ಹಾಗೂ ಆಸೆಟ್ ಉಪನ್ಯಾಸಕ ಸಂಘಗಳ ನಿರ್ವಹಣೆ ಹಾಗೂ ಮಹಿಳಾ ಸಬಲೀಕರಣ ವಿಷಯದ ಬಗ್ಗೆ ಮಾತನಾಡಿದರು. ಗ್ರಾ.ಪಂ ಸದಸ್ಯೆ ಶಿವಲೀಲಾ ಮುಳಗುಂದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಆಸೆಟ್ ಉಪನಿರ್ದೇಶಕ ಶಿವಕುಮಾರ, ಗ್ರಾ.ಪಂ ಉಪಾಧ್ಯಕ್ಷೆ ಸರೋಜಾ ಅಂಗಡಿ, ಒಕ್ಕೂಟದ ಅಧ್ಯಕ್ಷೆ ಮಂಜುಳಾ ರೋಣದ, ವಲಯ ಮೇಲ್ವಿಚಾರಕ ಶಿವರಾಜ, ತಾಲೂಕು ಜ್ಞಾನ ವಿಕಾಸ ಸಮನ್ವಯಾಧಿಕಾರಿ ಗಂಗಮ್ಮ, ಸೇವಾ ಪ್ರತಿನಿಧಿ ಮಹಾದೇವ ಮುಂತಾದವರು ಇದ್ದರು.