ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ: ನಾಡಿನ ಹಲವಾರು ಜಿಲ್ಲೆಗಳಿಂದ ಅಪಾರ ಭಕ್ತ ವೃಂದವನ್ನು ಹೊಂದಿರುವ ಶಿವನಾರದಮುನಿ ಸ್ವಾಮಿ ಸಮುದಾಯ ಭವನ ನಿರ್ಮಾಣದಿಂದ ಭಕ್ತರಿಗೆ ವಿಶ್ರಾಂತಿ ಪಡೆಯಲು ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲು ಅನುಕೂಲವಾಗಲಿದೆ ಎಂದು ಚಿಗಟೇರಿ ನಾರದಮುನಿ ಸೇವಾ ಟ್ರಸ್ಟ್ ಅಧ್ಯಕ್ಷ ಅಣಬೇರು ರಾಜಣ್ಣ ತಿಳಿಸಿದರು.
ಹರಪನಹಳ್ಳಿ ತಾಲೂಕಿನ ಚಿಗಟೇರಿ ಗ್ರಾಮದ ಶಿವನಾರದಮುನಿ ದೇವಸ್ಥಾನದ ಎದುರುಗಡೆ ಶಿವನಾರದಮುನಿ ಸೇವಾ ಟ್ರಸ್ಟ್ ಹಾಗೂ ವಿಧಾನ ಪರಿಷತ್ ಸದಸ್ಯರ ಸಹಯೋಗದಲ್ಲಿ ನಿರ್ಮಿಸಿರುವ ನೂತನ ಮಹಾ ಸಮುದಾಯ ಭವನ ಕಟ್ಟಡವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾಮಿಯ ದರ್ಶನಕ್ಕೆಂದು ನಾಡಿನಾದ್ಯಂತ ಸಾವಿರಾರು ಭಕ್ತರು ರಥೋತ್ಸವ, ಶ್ರಾವಣದ ಕೊನೆಯ ವಾರ, ಹುಣ್ಣಿಮೆ, ಅಮವಾಸ್ಯೆ ಸೇರಿದಂತೆ ವಿಶೇಷ ದಿನಗಳಲ್ಲಿ ಭಕ್ತರು ವರ್ಷದಿಂದ ವರ್ಷಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಅವರಿಗೆ ವಿಶ್ರಾಂತಿ ಪಡೆದುಕೊಳ್ಳಲು ಅನುಕೂಲವಾಗುವಂತೆ ನೂತನ ಭವನ ನಿರ್ಮಿಸಲಾಗಿದೆ ಎಂದರು.
ಸಮಿತಿಯ ಕಾರ್ಯದರ್ಶಿ ಪಲ್ಲಾಗಟ್ಟಿ ನಾಗರಾಜ್ ಮಾತನಾಡಿ, ಯಾವುದೇ ಧಾರ್ಮಿಕ ಕ್ಷೇತ್ರಗಳು ಅಭಿವೃದ್ಧಿಯಾಗಲು ಸ್ಥಳೀಯ ಟ್ರಸ್ಟ್ ಅಥವಾ ಸಮಿತಿಯ ಮುಂದಾಳತ್ವ ಹೊಂದಿರುವವರು ನಿಸ್ವಾರ್ಥ ಮನೋಭಾವ ಹೊಂದಿರಬೇಕು. ಅದರಂತೆಯೇ ಅಣಬೇರು ರಾಜಣ್ಣನವರು ಅವರ ಬದುಕಿನುದ್ದಕ್ಕೂ ಧಾರ್ಮಿಕ ಕಾರ್ಯಗಳಲ್ಲಿ ಸಂಪೂರ್ಣ ತೊಡಗಿಸಿಕೊಂಡಿದ್ದಾರೆ. ಅವರ ಮಾರ್ಗದರ್ಶನದಂತೆ ಮುಂದಿನ ದಿನಗಳಲ್ಲಿ ಹೆಚ್ಚಿನ ಮೂಲಸೌಲಭ್ಯ ಪಡೆದುಕೊಳ್ಳುವ ಕಡೆಗೆ ಗಮನವಹಿಸೋಣ ಎಂದರು.
ಸಮಿತಿಯ ಪದಾಧಿಕಾರಿಗಳಾದ ಶಾಮನೂರು ಬಸಪ್ಪ, ವಿ.ಕೆ. ಷಡಕಪ್ಪ ವಡ್ಡಿನಹಳ್ಳಿ, ಸುರೇಶ್ ಇಂಜಿನಿಯರ್, ಪರಮೇಶ್ವರಪ್ಪ ಕಕ್ಕರಗೋಳ, ಕೆ.ಬಿ. ಬಸವಲಿಂಗಪ್ಪ ಬಿ.ಕಲ್ಪನಹಳ್ಳಿ, ವೇದಮೂರ್ತಿ ಹುಲಿಕಟ್ಟಿ, ದ್ಯಾಮನಗೌಡ, ಪಿ.ಹಾಲಪ್ಪ, ಹುಣಸಿಹಳ್ಳಿ ಹನುಮಂತಪ್ಪ, ಬಳಿಗನೂರು ರಾಮನಗೌಡ, ಗಾಂಧಿನಗರ ಜಯಣ್ಣ, ಆಸಗೋಡ್ ಅಶೋಕ್, ಹುಲಿಯಾಳ್ ನಾರಪ್ಪ, ಗ್ರಾ.ಪಂ ಅಧ್ಯಕ್ಷ ನಾಗರಾಜ್ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.