ವಿಜಯಸಾಕ್ಷಿ ಸುದ್ದಿ, ಗದಗ : ಯಾವುದೇ ಕ್ರೀಡೆಯ ಗೆಲುವಿಗೆ ಕ್ರೀಡಾಪಟುಗಳಲ್ಲಿ ದೈಹಿಕ ಶಕ್ತಿ, ಸಾಮರ್ಥ್ಯ, ಸದೃಢತೆ, ಚಾಕಚಕ್ಯತೆ, ಆತ್ಮಸ್ಥೈರ್ಯ, ಮನೋಬಲ, ಆಸಕ್ತಿ, ಅಭಿರುಚಿಗಳು ಅಗತ್ಯವಾಗಿ ಇರಬೇಕಾಗಿರುವ ಮೂಲಭೂತ ಗುಣಾಂಶಗಳಾಗಿವೆ. ಇವೆಲ್ಲವುಗಳು ಇನ್ನಿತರೆ ಕ್ರೀಡೆಗಳಿಂದ ದೊರೆತರೂ ಪರಿಪೂರ್ಣವಾಗಿ ಯೋಗಾಸನ ಕ್ರೀಡೆಯಿಂದ ಮಾತ್ರ ದೊರೆಯುವವು. ಯೋಗಾಸನಗಳು ದೈಹಿಕ ಸಮತೋಲನ, ಉಸಿರಾಟ ನಿಯಂತ್ರಣ, ಮಾನಸಿಕ ಏಕಾಗ್ರತೆಗಳನ್ನು ಒಳಗೊಂಡಿವೆ. ಇವುಗಳಿಂದ ಕ್ರೀಡಾಪಟುವಿನಲ್ಲಿ ಸಹನೆ, ತಾಳ್ಮೆ, ಸಂಯಮ, ವೃದ್ಧಿಸುತ್ತವೆ ಎಂದು ಸಿದ್ಧಲಿಂಗ ನಗರದ ಬಸವೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಶೈನಾಜ ಬಚನಳ್ಳಿ ಅಭಿಪ್ರಾಯಪಟ್ಟರು.
ಎಸ್.ವಾಯ್.ಬಿ.ಎಂ.ಎಸ್. ಯೋಗಪಾಠಶಾಲೆಯ ಬಸವ ಯೋಗ ಕೇಂದ್ರ ಮತ್ತು ಗದಗ ಜಿಲ್ಲಾ ಯೋಗ ಒಕ್ಕೂಟ ಹಾಗೂ ಗದಗ ಜಿಲ್ಲಾ ಅಮೆಚೂರ್ ಯೋಗಾಸನ ಕ್ರೀಡಾ ಸಂಸ್ಥೆ ಗದಗ ಇವರುಗಳ ಸಹಯೋಗದಲ್ಲಿ ಸಿದ್ಧಲಿಂಗ ನಗರದಲ್ಲಿನ ಬಸವ ಯೋಗ ಮಂದಿರದಲ್ಲಿ ನಡೆದ ಗದಗ ಜಿಲ್ಲಾ ಮಟ್ಟದ ಯೋಗಾಸನ ಕ್ರೀಡೆ ಮತ್ತು ಯೋಗಾಸನ ಸಮೂಹ ನೃತ್ಯ ಸ್ಪರ್ಧೆಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಜೆ.ಸಿ. ಪ್ರೌಢಶಾಲೆಯ ಶಿಕ್ಷಕಿ ಮಂಜುಳಾ ಬುಳ್ಳಾ ಮಾತನಾಡಿ, ವಿದ್ಯಾರ್ಥಿಗಳು ಯೋಗಾಸನ ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ಅವರೆಲ್ಲರಿಗೆ ಪರಿಪೂರ್ಣ ಆರೋಗ್ಯ ಭಾಗ್ಯ ದೊರೆತು ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಲು ಸಾಧ್ಯವಾಗುವುದೆಂದು ತಿಳಿಸಿದರು.
ಯೋಗಾಸನ ಸಮೂಹ ನೃತ್ಯ ಸ್ಪರ್ಧೆಯಲ್ಲಿ ಗುರುಕುಲ ಯೋಗ ಅಕಾಡೆಮಿ ಪಾಪನಾಶಿ ತಂಡ, ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರ, ಸಿದ್ಧಲಿಂಗ ನಗರ ಗದಗ, ಆರ್.ಜಿ.ಇ.ಎಸ್. ಆಯುರ್ವೆದಿಕ್ ಮೆಡಿಕಲ್ ಕಾಲೇಜು ರೋಣ ತಂಡಗಳು ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದುಕೊಂಡವು.
ಸ್ಪರ್ಧೆಗಳಲ್ಲಿ ಒಟ್ಟು 120 ಸ್ಪರ್ಧಿಗಳು ಭಾಗವಹಿಸಿದ್ದರು. 25-35 ವರ್ಷ ಮಹಿಳೆಯರ ವಿಭಾಗದಲ್ಲಿ ಯಶೋಧಾ ಬಡಿಗೇರ ಪ್ರಥಮ, ಸುನಂದಾ ಕರಿಗಾರ ದ್ವಿತೀಯ ಸ್ಥಾನ ಪಡೆದುಕೊಂಡರು.
ನಿರ್ಣಾಯಕರಾಗಿ ಚೇತನ ಚುಂಚಾ, ಅಭಿಷೇಕ ಬಾರಕೇರ, ಶಿವುಕುಮಾರ ಬಾರಕೇರ, ರವಿ ಉಮಚಗಿ, ಸುನಂದಾ ಜ್ಯಾನೋಪಂತರ, ಸುಮಂಗಲಾ ಹದ್ಲಿ, ಸುಧಾ ಪಾಟೀಲ, ಸ್ಕೋರರ್ ಆಗಿ ಯಶವಂತ ಮತ್ತೂರ, ಸರಸ್ವತಿ ಕೊಂಡಿಕೊಪ್ಪ ಕಾರ್ಯ ನಿರ್ವಹಿಸಿದರು.
ಪ್ರಾರಂಭದಲ್ಲಿ ಸಾಮೂಹಿಕವಾಗಿ ಯೋಗ ಪ್ರಾರ್ಥನೆ ನಡೆಯಿತು. ಚೇತನ ಚುಂಚಾ ಸ್ವಾಗತ ಕೋರಿದರು.
ಬಸವ ಯೋಗ ಕೇಂದ್ರದ ಪ್ರಾಚಾರ್ಯ ಕೆ.ಎಸ್. ಪಲ್ಲೇದ ಪ್ರಾಸ್ತಾವಿಕ ನುಡಿಗಳನ್ನಾಡಿ ಕಾರ್ಯಕ್ರಮ ನಿರೂಪಿಸಿದರು. ಸ್ಪರ್ಧೆಯಲ್ಲಿ ಭಾಗವಹಿಸಿದ ಮತ್ತು ವಿಜೇತರಾದ ಸ್ಪರ್ಧಿಗಳಿಗೆಲ್ಲರಿಗೂ ಸಂಘಟಿಕರ ಪರವಾಗಿ ಗದಗ ಜಿಲ್ಲಾ ಯೋಗ ಒಕ್ಕೂಟದ ಅಧ್ಯಕ್ಷ ಎಂ.ಎಸ್. ಶಿರಿಯಣ್ಣವರ ಅಭಿನಂದನೆಗಳನ್ನು ತಿಳಿಸಿರುವರು.
ಗದಗ ಜಿಲ್ಲಾ ಮಟ್ಟದ ಯೋಗಾಸನ ಕ್ರೀಡಾ ಸ್ಪರ್ಧೆಯ 12-18 ವರ್ಷ ಬಾಲಕಿಯರ ವಿಭಾಗದಲ್ಲಿ ಕವನಾ ಪಾಟೀಲ ಪ್ರಥಮ, ಪೂರ್ಣಿಮಾ ಕಟಿಗ್ಗಾರ ದ್ವಿತೀಯ, ಲಕ್ಷ್ಮೀ ಬಸರಿ ತೃತೀಯ ಸ್ಥಾನ ಪಡೆದರು. ಬಾಲಕರ ವಿಭಾಗದಲ್ಲಿ ಪ್ರಶಾಂತ ಗಾಣಿಗೇರ ಪ್ರಥಮ, ಶಿವಕುಮಾರ ಗುಡ್ಡಿಮಠ ದ್ವಿತೀಯ, ಆಕಾಶ ಗುಡ್ಡಿಮನಿ ತೃತೀಯ ಸ್ಥಾನ ಪಡೆದರು. 18-25 ವರ್ಷ ಯುವತಿಯರ ವಿಭಾಗದಲ್ಲಿ ಕವಿತಾ ಬಾದೋಡಗಿ ಪ್ರಥಮ, ವಿಶಾಲಾಕ್ಷಿ ಗುಡ್ಡಿಮಠ ದ್ವಿತೀಯ ಸ್ಥಾನ ಪಡೆದರು. ಯುವಕರ ವಿಭಾಗದಲ್ಲಿ ಸಂದೀಪ ನಾಡಿಗೇರ ಪ್ರಥಮ ಸ್ಥಾನ ಪಡೆದರು.