ವಿಜಯಸಾಕ್ಷಿ ಸುದ್ದಿ, ಗದಗ : ರಂಗಭೂಮಿ ಕಲೆ ಎನ್ನುವುದು ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿದೆ. ಚಲನಚಿತ್ರದ ಅದ್ಭುತ ನಟ-ನಟಿಯರು ರಂಗಭೂಮಿಯಿಂದಲೇ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಇತ್ತೀಚಿನ ದಿನಮಾನಗಳಲ್ಲಿ ರಂಗಭೂಮಿ ಕಲೆ ಅಳಿವಿನಂಚಿನಲ್ಲಿದ್ದು, ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರಯೊಬ್ಬರ ಮೇಲಿದೆ ಎಂದು ವೀರೇಶ್ವರ ಪುಣ್ಯಾಶ್ರಮದ ಪಿಠಾಧಿಪತಿ ಪ.ಪೂ ಡಾ. ಕಲ್ಲಯ್ಯಜ್ಜನವರು ಕಲಾಭಿಮಾನಿಗಳಿಗೆ ಕಿವಿಮಾತು ಹೇಳಿದರು.
ನಗರದ ಭೂಮರಡ್ಡಿ ಕಂಪೌಂಡ್ನಲ್ಲಿ ಹಾಕಿರುವ ಜೇವರ್ಗಿ ರಂಗಭೂಮಿಯಲ್ಲಿ ನಡೆದ ರಂಗಸೇವಾ ಕಲಾ ಸಂಘ ವಿಜಯಪುರದ 11ನೇ ವಾರ್ಷಿಕೋತ್ಸವ ಹಾಗೂ ರಂಗ ಗೌರವ ಉದ್ಘಾಟನಾ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿ, ಒಟ್ಟಾರೆಯಾಗಿ ಅಳಿದುಳಿದಿರುವ 10-15 ನಾಟಕ ಕಂಪನಿಗಳನ್ನು ಹಾಗೂ ರಂಗಭೂಮಿಯನ್ನು ಜೀವಂತವಾಗಿಡುವ ಜವಾಬ್ದಾರಿ ಪ್ರತಿಯೊಬ್ಬ ಕಲಾಭಿಮಾನಿಗಳಲ್ಲಿ ಇದೆ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಶ್ರೀ ಪುಟ್ಟರಾಜ ಕಲಾ ಪೋಷಕ ಸಂಘದ ಅಧ್ಯಕ್ಷ ಎಫ್.ವ್ಹಿ. ಮರಿಗೌಡ್ರ ಮಾತನಾಡಿ, ರಂಗಭೂಮಿಯಲ್ಲಿ ಅನನ್ಯ ಸೇವೆ ಸಲ್ಲಿಸಿದ ಮಹನೀಯರಿಗೆ ರಂಗಸೇವಾ ಕಲಾ ಸಂಘದವರು ಗೌರವ ಸಲ್ಲಿಸುತ್ತಿರುವುದು ಅದ್ಭುತ ಕ್ಷಣವಾಗಿದೆ. ರಂಗಭೂಮಿಯಲ್ಲಿ ಸೇವೆ ಸಲ್ಲಿಸಿದ ಮಹನೀಯರಿಗೆ ಗೌರವ ನೀಡುವುದರಿಂದ ಯುವ ಕಲಾವಿದರಿಗೆ ಸ್ಪೂರ್ತಿಯಾದಂತಾಗುತ್ತದೆ. ಹಿರಿಯ ಕಲಾವಿದರು ನಡೆದುಕೊಂಡು ಬಂದ ಹಾದಿಯಲ್ಲಿ ಇಂದಿನ ಯುವ ಕಲಾವಿದರು ನಡೆದುಕೊಂಡು ಹೋಗುವ ಅವಶ್ಯಕತೆ ಇದ್ದು, ಮತ್ತಷ್ಟು ಹೊಸ ಹೊಸ ಪ್ರತಿಭೆಗಳ ಉದಯವಾಗಲಿ ಎಂದು ಅಭಿಪ್ರಾಯಪಟ್ಟರು.
ಹಿರಿಯ ರಂಗಭೂಮಿ ಕಲಾವಿದ, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ, ವಿಶ್ವಜ್ಯೋತಿ ಶ್ರೀ ಪಂಚಾಕ್ಷರ ನಾಟ್ಯ ಸಂಘ ಜೇವರ್ಗಿ ನಾಟಕ ಕಂಪನಿಯ ಅಧ್ಯಕ್ಷ ಹಾಗೂ ನಿರ್ದೇಶಕ ರಾಜಣ್ಣ ಜೇವರ್ಗಿ, ನಜೀರ್ ಮಜ್ಜಗಿ, ಅಂಬರೇಶ್ ನಾಗೂರ, ಪ್ರಭು ಹಿರೇಮಠ, ಖಾಸಿಮಸಾಬ್ ಹವಾಲ್ದರ್, ಸಣಗಮೇಶ್ ಬಿಳಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಗೆ ಭಾಜನರಾದ ವಿರುಪಾಕ್ಷಯ್ಯ ಬೇನಾಳ, ಗುರಯ್ಯಸ್ವಾಮಿ ಸಂಕನೂರ, ಮಂಜುನಾಥ ಸಂಕನಾಳ, ಬಸವರಾಜ ಯಾಳವಾರ, ಪ್ರಕಾಶ್ ಆರ್.ಮೂಡಗೇರಿ, ಅಂಬಿಕಾ ಹಿರಿಯೂರರಿಗೆ ಶಾಲು ಹೊದೆಸಿ, ನೆನಪಿನ ಕಾಣಿಕೆ ನೀಡುವುದರ ಮೂಲಕ ಗೌರವ ಸಮರ್ಪಣೆ ಮಾಡಲಾಯಿತು.