ವಿಜಯಸಾಕ್ಷಿ ಸುದ್ದಿ, ಗದಗ : ವಿಧ ವಿಧದ ಬಟ್ಟೆ ನೇಯುವ ಮೂಲಕ ಎಲ್ಲರ ಮಾನ ಮುಚ್ಚುವ ನೇಕಾರರ ಬದುಕು ಎಂದಿಗೂ ಹರಿದ ಬಟ್ಟೆಯಂತೆಯೇ. ಅತ್ತ ತೊಡಲೂ ಆಗದು, ಇತ್ತ ಬಿಸಾಡಲೂ ಆಗದು ಎಂಬಂತೆ, ಆರ್ಥಿಕವಾಗಿ ಸಾಕಷ್ಟು ಹಿಂದುಳಿದಿದ್ದಾರೆ. ಅವರ ಬದುಕು ಚಿಂತಾಜನಕವಾಗಿದೆ. ಒಂದೆಡೆ, ಯಂತ್ರಗಳಿಂದ ಸಿದ್ಧಗೊಂಡ ಉಡುಪುಗಳು ಗ್ರಾಹಕರನ್ನು ಆಕರ್ಷಿಸುತ್ತ, ಕೈಮಗ್ಗ ನೇಕಾರಿಕೆ ಪ್ರಾಮುಖ್ಯತೆ ಕಳೆದುಕೊಳ್ಳುತ್ತಿದೆ.
ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ, ಗಾಯದ ಮೇಲೆ ಬರೆ ಎಳೆದಂತೆ ಸರ್ಕಾರದಿಂದ ಲಭ್ಯವಾಗುತ್ತಿದ್ದ ಪ್ರೋತ್ಸಾಹ ಧನವೂ ನಿಂತಿರುವುದು ನೇಕಾರರ ಆಕ್ರೋಶಕ್ಕೆ ಕಾರಣವಾಗಿದೆ. ನಿಲ್ಲಿಸಿರುವ ಪ್ರೋತ್ಸಾಹಧನ ಪುನರಾರಂಭಿಸಬೇಕು ಎಂದು ಗದಗ ಜಿಲ್ಲೆಯ ನೇಕಾರರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಅನಾದಿ ಕಾಲದಿಂದಲೂ ಜಿಲ್ಲೆಯಲ್ಲಿ ನೇಕಾರಿಕೆಯನ್ನೇ ವೃತ್ತಿಯಾಗಿಸಿಕೊಂಡು ಅದೆಷ್ಟೋ ಕುಟುಂಬಗಳು ಜೀವನ ನಡೆಸುತ್ತಿವೆ. ಸರ್ಕಾರ ಕೂಡಾ ನೇಕಾರಿಕೆ ಮಾಡಲು ಸಾಕಷ್ಟು ಉತ್ತೇಜನ ನೀಡುತ್ತ ಬಂದಿತ್ತು.
ಆದರೀಗ, ನೇಕಾರರಿಗೆ ನೀಡುತ್ತಿದ್ದ ಪ್ರೋತ್ಸಾಹಧನ ವಿತರಣೆ ನಿಲ್ಲಿಸಿರುವುದು ನೇಕಾರರ ಆಕ್ರೋಶಕ್ಕೆ ಕಾರಣವಾಗಿದೆ. ಗದಗ-ಬೆಟಗೇರಿ, ನರಸಾಪುರದಲ್ಲಿ 400ಕ್ಕೂ ಹೆಚ್ಚು ಕುಟುಂಬಗಳು ನೇಕಾರಿಕೆಯನ್ನೇ ನೆಚ್ಚಿಕೊಂಡು ಜೀವನ ನಡೆಸುತ್ತಿವೆ. ಕುಟುಂಬದ ಎಲ್ಲ ಸದಸ್ಯರು ನೇಕಾರಿಕೆ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಕಾಟನ್, ಪಾಲಿಸ್ಟರ್ ಬಟ್ಟೆ ನೇಯುವ ಕೈಮಗ್ಗ ನೇಕಾರರಿಗೆ 100 ರೂಪಾಯಿ ಕೂಲಿ ಜೊತೆಗೆ, 15ರಿಂದ 30 ರೂ. ಪ್ರೋತ್ಸಾಹಧನ ನೀಡಲಾಗುತ್ತಿತ್ತು. ಇದರಿಂದಲೇ ಬದುಕು ನಡೆಯದಿದ್ದರೂ, ನೇಕಾರರ ಬದುಕಿಗೆ ಆಸರೆಯಂತೂ ಆಗಿತ್ತು.
ಆದರೆ, 2013ರಿಂದ 2017ರವರೆಗೆ ಮಾತ್ರ ಪ್ರೋತ್ಸಾಹ ಧನ ನೀಡಿ, ನಂತರ ಪ್ರೋತ್ಸಾಹಧನ ನಿಲ್ಲಿಸಲಾಗಿದೆ.
ತಲೆತಲಾಂತರದಿಂದ ಮುಂದುವರೆಸಿಕೊಂಡು ಬಂದಿದ್ದ ಮೂಲ ಕಸುಬನ್ನು ಬಿಟ್ಟು ಪರ್ಯಾಯ ಕೆಲಸ ಹುಡುಕುವ ಸ್ಥಿತಿ ನಿರ್ಮಾಣವಾಗಿದೆ. ನೇಕಾರಿಕೆಯನ್ನು ಮಾತ್ರ ನಂಬಿದ ನೇಕಾರರ ಸ್ಥಿತಿ ಮಾತ್ರ ಅಯೋಮಯವಾಗಿದೆ. ಹೀಗಾಗಿ ಪ್ರೋತ್ಸಾಹಧನವನ್ನು ಪುನಃ ಪ್ರಾರಂಭಿಸಬೇಕೆಂದು ಸರ್ಕಾರ ಹಾಗೂ ಕೆಎಚ್ಡಿಸಿ ಸಂಸ್ಥೆಯನ್ನು ಒತ್ತಾಯಿಸಿದ್ದಾರೆ.
ಶಾಲಾ ಮಕ್ಕಳಿಗೆ ಸಮವಸ್ತ್ರ ನೀಡುವ ಉದ್ದೇಶದಿಂದ ಕೈಮಗ್ಗ ನೇಕಾರರಿಗೆ ಪ್ರೋತ್ಸಾಹಧನ ವಿತರಿಸುವ ಮೂಲಕ ಉತ್ತೇಜನ ನೀಡಲಾಗಿತ್ತು. ಈಗ ಸರ್ಕಾರ ಹಾಗೂ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ನೇಕಾರರನ್ನು ನಡು ನೀರಿನಲ್ಲಿ ಕೈಬಿಟ್ಟಂತಾಗಿದೆ.
2017ರ ಮಾರ್ಚ್ವರೆಗೆ ಪ್ರೋತ್ಸಾಹಧನ ನೀಡಲಾಗಿದೆ. ನಂತರ, ಸರ್ಕಾರದಿಂದ ಹಣ ಬಿಡುಗಡೆಯಾಗಿಲ್ಲ. ಸರ್ಕಾರ ಹಾಗೂ ನಿಗಮದಿಂದ ಪ್ರೋತ್ಸಾಹ ಧನ ನೀಡಲಾಗುತ್ತಿತ್ತು. ಶಾಲಾ ಮಕ್ಕಳಿಗೆ ನೀಡುವ ಸಮವಸ್ತ್ರದ ಬಟ್ಟೆ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆ ಆಗಬೇಕೆಂಬ ಉದ್ದೇಶದಿಂದ ವಿದ್ಯಾ ವಿಕಾಸ್ ಯೋಜನೆಯಡಿ ಉತ್ತೇಜನ ನೀಡಲಾಗುತ್ತಿತ್ತು. ಈಗ ಅದೇ ಹಣವನ್ನು ಬೇರೆ ಕಾರ್ಯಗಳಿಗೆ ಉಪಯೋಗ ಮಾಡಲಾಗುತ್ತಿದೆ. ಈ ಹಿಂದೆ ಮೂರು ಕೋಟಿ ರೂಪಾಯಿ ಪ್ಯಾಕೇಜ್ ನೀಡಲಾಗುತ್ತಿತ್ತು. ನಿಗಮಕ್ಕೆ ನೀಡುವ ಪ್ಯಾಕೆಜ್ ಮೊತ್ತ ಬಾರದ ಹಿನ್ನೆಲೆಯಲ್ಲಿ ಇನ್ಸೆಂಟಿವ್ ಕೊಟ್ಟಿಲ್ಲ. ಸರ್ಕಾರಕ್ಕೆ ಹೆಚ್ಚಿನ ಹಣ ಒದಗಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ.
– ಜಯಪ್ರಕಾಶ್ ಗೆಣಕಿಹಾಳ.
ಕೈಮಗ್ಗ ನಿಮಗದ ಯೋಜನಾಧಿಕಾರಿ.