ಇಸ್ಲಾಮಾಬಾದ್:– ಮುಂದಿನ 24-36 ಗಂಟೆಗಳಲ್ಲಿ ಭಾರತ ದಾಳಿ ನಡೆಸಲಿದೆ ಎಂದು ಪಾಕ್ ಸಚಿವ ಅತಾವುಲ್ಲಾ ತರಾರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಈ ಸಂಬಂಧ X ಮಾಡಿರುವ ಅವರು, ಮುಂದಿನ 24-36 ಗಂಟೆಗಳಲ್ಲಿ ಭಾರತ ತನ್ನ ಭೂಭಾಗದ ಮೇಲೆ ದಾಳಿ ನಡೆಸುತ್ತದೆ ಎನ್ನುವುದಕ್ಕೆ ವಿಶ್ವಾಸಾರ್ಹ ದಾಖಲೆಗಳಿವೆ. ಒಂದು ವೇಳೆ, ಸೇನಾ ಕ್ರಮ ಕೈಗೊಂಡರೆ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದರು.
26 ಜನರ ಸಾವಿಗೆ ಕಾರಣವಾದ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಪಾಕಿಸ್ತಾನದ ಕೈವಾಡವಿದೆ ಎಂಬ ಭಾರತದ ಆರೋಪ ಆಧಾರರಹಿತವಾದದ್ದು. ಕಪೋಲಕಲ್ಪಿತ ಆರೋಪಗಳ ಆಧಾರದ ಮೇಲೆ ಭಾರತೀಯ ಪಡೆಗಳು ದಾಳಿ ನಡೆಸಲು ಸಿದ್ಧತೆ ನಡೆಸುತ್ತಿವೆ ಎಂದು ಪಾಕ್ ಸಚಿವ ಅತಾವುಲ್ಲಾ ತರಾರ್ ಹೇಳಿದ್ದಾರೆ.
ಭಾರತ ಸ್ವತಃ ತಾನೇ ತೀರ್ಪುಗಾರನಂತೆ ವರ್ತಿಸುತ್ತಿದೆ. ಜವಾಬ್ದಾರಿಯುತ ರಾಷ್ಟ್ರವಾಗಿ ಸತ್ಯವನ್ನು ಖಚಿತಪಡಿಸಿಕೊಳ್ಳಲು ತಜ್ಞರ ಆಯೋಗಕ್ಕೆ ವಿಶ್ವಾಸಾರ್ಹ, ಪಾರದರ್ಶಕ ಹಾಗೂ ಸ್ವತಂತ್ರ ತನಿಖೆ ನಡೆಸಲು ಪಾಕಿಸ್ತಾನ ಮುಕ್ತ ಅವಕಾಶ ನೀಡಿದೆ. ಪಾಕಿಸ್ತಾನವು ಭಯೋತ್ಪಾದನೆಯ ಬಲಿಪಶುವಾಗಿದೆ ಎಂದು ತರಾರ್ ಮಾತನಾಡಿದ್ದಾರೆ.