ವಿಜಯಸಾಕ್ಷಿ ಸುದ್ದಿ, ಮುಳಗುಂದ: ಜಗತ್ತಿಗೆ ನಾಗರಿಕತೆಯನ್ನು ಕಲಿಸಿದ ದೇಶ ಭಾರತವಾಗಿದೆ ಎಂದು ಎಂದು ಹೊಸಳ್ಳಿಯ ಜಗದ್ಗುರು ಬೂದೀಶ್ವರ ಸಂಸ್ಥಾನಮಠದ ಜಗದ್ಗುರು ಅಭಿನವ ಬೂದೀಶ್ವರ ಮಾಹಾಸ್ವಾಮಿಗಳು ಹೇಳಿದರು.
ಅವರು ಪಟ್ಟಣದ ಗ್ರಾಮ ದೇವತಾ ಟೋಪ ಜಾತ್ರಾ ಮಹೋತ್ಸವದ ಧರ್ಮಸಭೆ-2ರಲ್ಲಿ ಜಾತ್ರಾ ಸಮಿತಿಯ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ಸನ್ಮಾನಿಸಿ ಮಾತನಾಡಿದರು.
ಭಾರತ ಕಣ ಕಣದಲ್ಲೂ ದೇವರನ್ನು ಕಾಣುವ ಸುಸಂಸ್ಕೃತ ದೇಶವಾಗಿದೆ. ಜಗತ್ತಿಗೆ ಗುರುತ್ವವನ್ನು ಕೊಟ್ಟ ದೇಶ, ಹೆಣ್ಣು ಮಕ್ಕಳಲ್ಲಿ ದೈವತ್ವವನ್ನು ಕಂಡ ದೇಶ, ಭಾರತ ದೇಶದ ಹೆಸರು ಕೇಳಿದಾಕ್ಷಣ ಜಗತ್ತು ತನಗರಿವಿಲ್ಲದಂತೆ ತೆಲೆಬಾಗುತ್ತದೆ. ಇಂತಹ ನಾಡಿನಲ್ಲಿ ಹುಟ್ಟಿದ ನಾವು ಪುಣ್ಯವಂತರು. ನಾವೆಲ್ಲರೂ ಧರ್ಮವಂತರಾಗಿ ಬದುಕಬೇಕು. ಈ ಗ್ರಾಮ ದೇವತೆ ಟೋಪ ಜಾತ್ರೆ ಮಾಡುವ ಮೂಲಕ ನಾಡಿನ ಸಮೃದ್ಧಿ, ಸಂಪತ್ತು ಹೆಚ್ಚಾಗುತ್ತದೆ ಎಂದರು.
ರಾಜ್ಯೋತ್ಸವ ಪುರಸ್ಕೃತ ಖ್ಯಾತ ಹಿಂದೂಸ್ತಾನಿ ಗಾಯಕ ಬಾಲಚಂದ್ರ ನಾಕೋಡ ಹಾಗೂ ವಿಜಯಲಕ್ಷ್ಮೀ ಹಿರೇಮಠ ಇವರಿಂದ ಸಂಗಿತ ಸೇವೆ ಜರುಗಿತು. ನಂತರ ಗ್ರಾಮ ದೇವತೆಗಳ ಭವ್ಯ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯ ಮೇಳಗಳೊಂದಿಗೆ ದೇವತೆಗಳು ದೇವಸ್ಥಾನ ಪ್ರವೇಶ ಮಾಡಿದರು.
ಸಾನ್ನಿಧ್ಯವನ್ನು ಮುಳಗುಂದ ಗವಿಮಠದ ಮಲ್ಲಿಕಾರ್ಜುನ ಮಾಹಾಸ್ವಾಮಿಗಳು ವಹಿಸಿದ್ದರು, ಸಮ್ಮುಖವನ್ನು ನೀಲಗುಂದ ಗುದ್ನೇಶ್ವರಮಠದ ಪ್ರಭುಲಿಂಗ ದೇವರು, ಅಧ್ಯಕ್ಷತೆಯನ್ನು ಗೌರಮ್ಮಾ ಬಡ್ನಿ ವಹಿಸಿದ್ದರು. ರಾಜಣ್ಣಾ ಕೋರವಿ, ಸಿಪಿಐ ಸಂಗಮೇಶ ಶಿವಯೋಗಿ, ಫಕ್ಕೀರಯ್ಯ ಅಮೋಘಿಮಠ, ಪಿ.ಎ. ವಂಟಕರ, ಪಿ.ಎಸ್. ಮರಿದೇವರಮಠ, ಹಸನಸಾಬ ಶೇಖ, ಮಾಹಾದೇವಪ್ಪ ಗಡಾದ, ಗುಳಪ್ಪ ಮಜ್ಜಿಗುಡ್ಡ, ಮಂಜುನಾಥ ಮಟ್ಟಿ ಇದ್ದರು.
ಗದಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎ. ಬಳಿಗೇರ ಮಾತನಾಡಿ, ಭಾರತ ದೇಶದಲ್ಲಿ ಹೆಣ್ಣು ಮಕ್ಕಳಿಗೆ ದೇವಿಯ, ತಾಯಿಯ ಸ್ಥಾನಮಾನ ನೀಡಿ ನಿತ್ಯ ಗೌರವಿಸುವ ದೇಶವಾಗಿದೆ. ಜಗನ್ಮಾತೆಯ ಟೋಪ ಜಾತ್ರೆಯನ್ನು ಇಲ್ಲಿ ಸೌಹಾರ್ದತೆಯಿಂದ ಆಚರಿಸುವ ಮೂಲಕ ಸಹಬಾಳ್ವೆಗೆ ಇನ್ನೊಂದು ಹೆಸರಾಗಿದೆ. ದೇವಿಯ ಆರಾಧನೆಯಿಂದ ಮಳೆ, ಬೆಳೆ, ಸಂಪತ್ತು, ಆರೋಗ್ಯ ವೃದ್ಧಿಯಾಗುತ್ತದೆ ಎಂದರು.