ಇಸ್ಲಾಮಾಬಾದ್: ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತ ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ಪಾಕಿಸ್ತಾನ್ ಟೀಕಿಸಿದೆ. ಇಂದು ಪಾಕಿಸ್ತಾನವನ್ನು ಉದ್ದೇಶಿಸಿ ಮಾತನಾಡಿದ ಪಾಕ್ ಪ್ರಧಾನಿ ಶಹಬಾಜ್ ಷರೀಫ್, ತಮ್ಮ ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾರೆ. ‘ಹೇಡಿತನದ’ ದಾಳಿಯ ಪರಿಣಾಮವನ್ನು ಭಾರತ ಅನುಭವಿಸಲೇಬೇಕು. ಈ ದಾಳಿಗೆ ಪಾಕಿಸ್ತಾನ ಪ್ರತೀಕಾರ ತೀರಿಸಿಕೊಳ್ಳಲಿದೆ ಎಂದರು.
ಈ ರೀತಿ ದಾಳಿ ಮಾಡಿದ ನಂತರ ಬಹುಶಃ ನಾವು ಹಿಂದೆ ಸರಿಯುತ್ತೇವೆ ಎಂದು ಭಾರತ ಭಾವಿಸಿರಬಹುದು. ಆದರೆ ಇದು ಧೈರ್ಯದ ಮೇಲೆ ನಿರ್ಮಿಸಲಾದ ರಾಷ್ಟ್ರ ಎಂಬ ಅಂಶವನ್ನು ಅವರು ಮರೆತಿದ್ದಾರೆ. ನಾವು ಮುಂದಿಟ್ಟ ಹೆಜ್ಜೆಯನ್ನು ಹಿಂದಿಡುವ ಪ್ರಶ್ನೆಯೇ ಇಲ್ಲ. ಇದರ ಪರಿಣಾಮವನ್ನು ಭಾರತ ಅನುಭವಿಸಬೇಕಾಗುತ್ತದೆ ಎಂದು ದರ್ಪದ ಮಾತುಗಳನ್ನಾಡಿದ್ದಾರೆ.
ಪಾಕಿಸ್ತಾನದಲ್ಲಿ ವೈಮಾನಿಕ ದಾಳಿಯಲ್ಲಿ ಮೃತಪಟ್ಟ ಉಗ್ರರನ್ನು ಹುತಾತ್ಮರು ಎಂದಿರುವ ಪಾಕಿಸ್ತಾನ ಪ್ರಧಾನಿ, ಈ ಹುತಾತ್ಮರ ಸಾವಿಗೆ ನಾವು ಸೇಡು ತೀರಿಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಈ ಹುತಾತ್ಮರ ಪ್ರತಿ ಹನಿ ರಕ್ತಕ್ಕೂ ನಾವು ಸೇಡು ತೀರಿಸಿಕೊಳ್ಳುತ್ತೇವೆ. ಪಾಕಿಸ್ತಾನಕ್ಕೆ ಸೂಕ್ತ ಉತ್ತರವನ್ನು ಹೇಗೆ ನೀಡಬೇಕೆಂದು ತಿಳಿದಿದೆ. ಇಡೀ ರಾಷ್ಟ್ರವು ತನ್ನ ಧೈರ್ಯಶಾಲಿ ಸಶಸ್ತ್ರ ಪಡೆಗಳಿಗೆ ನಮಸ್ಕರಿಸುತ್ತದೆ. ಪಾಕಿಸ್ತಾನ ಸೇನೆಯು ಭಾರತದ ದಾಳಿಗೆ ಸಿದ್ಧವಾಗಿದೆ ಎಂದು ಹೇಳಿದರು.