ವಿಜಯಸಾಕ್ಷಿ ಸುದ್ದಿ, ಗದಗ: ಭಾರತೀಯ ಸಂಸ್ಕೃತಿಯು ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಠತೆ ಪಡೆದ ಸಂಸ್ಕೃತಿಯಾಗಿದೆ. ಇಂತಹ ಪವಿತ್ರ ಸಂಸ್ಕೃತಿ ಮತ್ತು ಸಂಸ್ಕಾರವನ್ನು ನಾವಿಂದು ನಮ್ಮ ಮಕ್ಕಳಿಗೆ ರೂಢಿಸಬೇಕಿದೆ ಎಂದು ಜಂಗಮವಾಡಿಮಠ ವಾರಣಾಸಿ ಕಾಶೀ ಮಹಾಪೀಠದ ಜ. ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಭಗವತ್ಪಾದಂಗಳವರು ಹೇಳಿದರು.
ಅವರು ಮಂಗಳವಾರ ನಗರದ ಗಾಣಿಗ ಭವನದಲ್ಲಿ ಗದಗ-ಬೆಟಗೇರಿ ಶ್ರೀ ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಪ್ರವಚನ ಸಮಿತಿ ಏರ್ಪಡಿಸಿರುವ ಆಷಾಢ ಮಾಸದ ಇಷ್ಟಲಿಂಗ ಮಹಾಪೂಜೆ ಹಾಗೂ ಶ್ರೀ ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಪ್ರವಚನ ಮಾಲಿಕೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ನರೇಗಲ್ ಹಿರೇಮಠದ ಪೂಜ್ಯ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಶ್ರೀ ಸಿದ್ಧಾಂತ ಶಿಖಾಮಣಿ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ನೇತೃತ್ವ ವಹಿಸಿದ್ದ ಮಲ್ಲಸಮುದ್ರಗಿರಿಯ ಓಂಕಾರೇಶ್ವರಮಠದ ಪೂಜ್ಯ ಫಕೀರೇಶ್ವರ ಶಿವಾಚಾರ್ಯ ಸ್ವಾಮಿಗಳು ಹಾಗೂ ಎಂ.ಜಿ. ಸಂತೋಜಿ ಮಾತನಾಡಿದರು. ಚಳಗೇರಿ ಹಿರೇಮಠ ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಉಡನಕಲ್ಲ ಸರ್ಕಾರಿ ಪ್ರೌಢಶಾಲೆಯ ಸಂಗೀತ ಶಿಕ್ಷಕರಾದ ವೀರಭದ್ರಪ್ಪ ಹಿರೆಬೆನಕಲ್ ಅವರಿಗೆ `ದಿವ್ಯಾಂಗ ಪ್ರತಿಭಾ ಪುರಸ್ಕಾರ’ ನೀಡಿ ಗೌರವಿಸಲಾಯಿತು. ಅಕ್ಕಮ್ಮ ಗುರುಸ್ವಾಮಿಮಠ ಅವರಿಂದ ಸಂಗೀತ ಪ್ರಾರ್ಥನೆ ಜರುಗಿತು. ಗುರುಸಿದ್ಧಯ್ಯ ಹಿರೇಮಠ ಸ್ವಾಗತಿಸಿದರು. ಸಮಿತಿಯ ಕಾರ್ಯಾಧ್ಯಕ್ಷ ವ್ಹಿ.ಕೆ. ಗುರುಮಠ ನಿರೂಪಿಸಿ ವಂದಿಸಿದರು.
ಎಸ್.ಐ. ಯಾಳಗಿ, ಮಹೇಶ್ಚಂದ್ರ ಕಬಾಡರ, ಡಾ. ಸಂತೋಷ ತೋಟಗಂಟಿಮಠ, ಎಂ.ಜಿ. ಸಂತೋಜಿ, ಗೂಳಯ್ಯ ಮಾಲಗಿತ್ತಿಮಠ, ವಿಜಯಕುಮಾರ ಗಡ್ಡಿ, ಈರಪ್ಪ ಬಲೂಚಗಿ, ಬಸವರಾಜ ಗಾಳಪ್ಪನವರ, ಎಂ.ಪಿ. ಪಾಟೀಲ, ಗೌರಮ್ಮ ಹಿರೇಮಠ, ಶರಣಪ್ಪ ಬಳಿಗಾರ ದಂಪತಿಗಳನ್ನು ಪೂಜ್ಯರು ಸನ್ಮಾನಿಸಿ ಆಶೀರ್ವದಿಸಿದರು.
ಸನಾತನ ಸಂಸ್ಕೃತಿ ಮತ್ತು ಪರಂಪರೆಗೆ ತನ್ನದೇ ಆದ ಹಿರಿಮೆ-ಗರಿಮೆ ಇದೆ. ಋಷಿ ಮುನಿಗಳು, ದಾರ್ಶನಿಕರು ಇದಕ್ಕೆ ಭದ್ರ ಬುನಾದಿ ಒದಗಿಸಿದ್ದಾರೆ. ಮನುಕುಲದ ಒಳತಿಗಾಗಿ ಇರುವ ಈ ಸಂಸ್ಕೃತಿ ಮತ್ತು ಸಂಸ್ಕಾರವನ್ನು ನಮ್ಮ ಬದುಕನ್ನು ಹಸನಾಗಿಸಿಕೊಳ್ಳಲು ಪರಿಪಾಲಿಸುವದು ಅವಶ್ಯ ಎಂದು ಕಾಶೀ ಶ್ರೀಗಳು ಪ್ರತಿಪಾದಿಸಿದರು.