ರಾಯಚೂರು:- ಹೆರಿಗೆ ಮಾಡಲು ತಡ ಮಾಡಿದಕ್ಕೆ ಶಿಶು ಸಾವನ್ನಪ್ಪಿದೆ ಎಂದು ನಗರದ ಸರ್ಕಾರಿ ಆಸ್ಪತ್ರೆಯ ವೈದ್ಯರ ವಿರುದ್ಧ ಕುಟುಂಬ ಒಂದು ಗಂಭೀರ ಆರೋಪ ಮಾಡಿದೆ.
ಹೆರಿಗೆ ವೇಳೆ ತಾಲೂಕಿನ ಮರ್ಚೇಡ್ ಗ್ರಾಮದ ಪಾರ್ವತಮ್ಮ ಹಾಗೂ ಚಂದ್ರಶೇಖರ್ ದಂಪತಿಯ ಮಗು ಸಾವನ್ನಪ್ಪಿದೆ. ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಗರ್ಭಿಣಿಯನ್ನು ವೈದ್ಯರು ತಪಾಸಣೆ ಮಾಡಿ ನಾರ್ಮಲ್ ಡೆಲಿವರಿ ಆಗುತ್ತದೆ ಎಂದು ತಿಳಿಸಿ 2 ದಿನ ಕಾಯಿಸಿದ್ದರು. ಗರ್ಭಿಣಿ ನೋವಿನಿಂದ ಬಳಲುತ್ತಿದ್ದರೂ ಕೂಡ ಹೆರಿಗೆ ಮಾಡಲು ವಿಳಂಬ ಮಾಡಿದ್ದರು.
ಇದರಿಂದ ಗರ್ಭಿಣಿಯ ಕುಟುಂಬಸ್ಥರು ಸಿಸೇರಿಯನ್ ಮಾಡುವಂತೆ ವೈದ್ಯರಿಗೆ ತಿಳಿಸಿದ್ದಾರೆ. ಆದರೂ ಕೂಡ ವಿಳಂಬ ಮಾಡಿ ನಾರ್ಮಲ್ ಡೆಲಿವರಿ ಮಾಡಿದ್ದಾರೆ. ಈ ವೇಳೆ ಹೆರಿಗೆ ಮಾಡುವಾಗ ಮಗು ಸಾವನ್ನಪ್ಪಿದೆ. ಇದರಿಂದ ಹೆರಿಗೆ ಮಾಡಲು ತಡ ಮಾಡಿದ್ದಕ್ಕೆ ಮಗು ಸಾವನ್ನಪ್ಪಿದೆ ಎಂದು ಬಾಣಂತಿಯ ಪತಿ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡಿಎಚ್ಓ ಡಾ.ಸುರೇಂದ್ರಬಾಬು ಆಸ್ಪತ್ರೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.