ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ 50ನೇ ವರ್ಷದ ಸುವರ್ಣ ಮಹೋತ್ಸವದ ಅಂಗವಾಗಿ ಅಖಿಲ ಕರ್ನಾಟಕ ವಾಣಿಜ್ಯೊದ್ಯಮಿಗಳ ಸಮ್ಮೇಳನ ಹಾಗೂ ಕೈಗಾರಿಕಾ ವಸ್ತು ಪ್ರದರ್ಶನ ಹಾಗೂ ಮಾರಾಟ `ಗದಗ ಉತ್ಸವ-2025’ನ್ನು ಆಗಸ್ಟ್ 15ರಿಂದ 19ರವರೆಗೆ ಶ್ರೀ ಸ್ವಾಮಿ ವಿವೇಕಾನಂದ ಸಭಾ ಭವನದಲ್ಲಿ ವಸ್ತು ಪ್ರದರ್ಶನ ಹಾಗೂ ಕಾರ್ಯಕ್ರಮವನ್ನು ಕೆ.ಎಚ್. ಪಾಟೀಲ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ವಸ್ತು ಪ್ರದರ್ಶನ ಮಳಿಗೆಗಳ ಮಾಹಿತಿ ಪತ್ರವನ್ನು ಉತ್ಸವ ಸಮಿತಿ ಚೇರಮನ್ ಆನಂದ ಎಲ್.ಪೊತ್ನೀಸ, ಕೋ-ಚೇರಮನ್ ಸದಾಶಿವಯ್ಯ ಎಸ್.ಮದರಿಮಠ, ಸಂಸ್ಥೆಯ ಅಧ್ಯಕ್ಷ ತಾತನಗೌಡ ಎಸ್.ಪಾಟೀಲ, ಮಹಿಳಾ ಘಟಕದ ಅಧ್ಯಕ್ಷರಾದ ನಂದಾ ಚಂದ್ರು ಬಾಳಿಹಳ್ಳಿಮಠ ಬಿಡುಗಡೆ ಮಾಡಿದರು.
ಪ್ರತಿ ವರ್ಷದಂತೆ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಬೆಂಗಳೂರು, ಗದಗ ಜಿಲ್ಲಾ ಕೈಗಾರಿಕಾ ಕೆಂದ್ರ, ಜಿಲ್ಲಾ ಪಂಚಾಯಿತಿ ಗದಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ಕೈಗಾರಿಕಾ ವಸ್ತು ಪ್ರದರ್ಶನ ಹಾಗೂ ಮಾರಾಟ `ಗದಗ ಉತ್ಸವ-2025’ನ್ನು ಆಯೋಜಿಸಲಾಗಿದೆ.
ಸ್ಥಳೀಯ ಕಲಾವಿದರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಮತ್ತು ಕಲಾ ಪರಂಪರೆಯನ್ನು ಬಿಂಬಿಸುವ ಸಲುವಾಗಿ ಪ್ರತಿದಿನ ಸಾಯಂಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಈ ವಸ್ತು ಪ್ರದರ್ಶನದಲ್ಲಿ ಭಾಗವಹಿಸಲು ಹಾಗೂ ಮಳಿಗೆಯನ್ನು ಕಾಯ್ದಿರಿಸಲು ಮತ್ತು ಆಸಕ್ತ ಕಲಾವಿದರು ಹೆಸರನ್ನು ನೋಂದಾಯಿಸಲು ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಕಚೇರಿ ಸಂಪರ್ಕಿಸಬೇಕೆಂದು ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ತಾತನಗೌಡ ಎಸ್.ಪಾಟೀಲ, ಉತ್ಸವ ಸಮಿತಿ ಚೇರಮನ್ ಆನಂದ ಎಲ್.ಪೊತ್ನೀಸ ,ಕೋ-ಚೇರಮನ್ ಸದಾಶಿವಯ್ಯ ಎಸ್.ಮದರಿಮಠ ಮನವಿ ಮಾಡಿದ್ದಾರೆಂದು ಸಂಸ್ಥೆಯ ಗೌರವ ಕಾರ್ಯದರ್ಶಿ ಅಶೋಕಗೌಡ ಕೆ.ಪಾಟೀಲ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೈಗಾರಿಕಾ ವಸ್ತುಪ್ರದರ್ಶನದಲ್ಲಿ ಗುಡಿ ಕೈಗಾರಿಕೆಗಳು, ಸಣ್ಣ ಉದ್ದಿಮೆದಾರರು ತಯಾರಿಸಿದ ಸಿದ್ಧ ಉಡುಪುಗಳು, ನವೀನ ಮಾದರಿಯ ಇಲೆಕ್ಟ್ರಾನಿಕ್ಸ್, ಸಾವಯವ ಕೃಷಿ ಬೀಜಗಳ ಮಾಹಿತಿ, ಹೊಸ ಟ್ರಾಕ್ಟರ್ಗಳು, ಕೃಷಿ ಉಪಕರಣಗಳು, ಸೋಲಾರ್ ಎನರ್ಜಿ ಪರಿಕರ, ಅತ್ಯಾಕರ್ಷಕ ಪೀಠೋಪಕರಣ, ಅಲಂಕಾರಿಕ ವಸ್ತುಗಳು, ಬಟ್ಟೆಗಳು ಹೀಗೆ ವೈವಿಧ್ಯಪೂರ್ಣ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ನಡೆಯುವುದು.