ವಿಜಯಸಾಕ್ಷಿ ಸುದ್ದಿ, ಗದಗ: ಇತ್ತೀಚೆಗೆ ಕರ್ನಾಟಕ ಸರಕಾರ ಜಾರಿಗೊಳಿಸಲು ಮುಂದಾಗಿರುವ ಕಾಂತರಾಜು ಆಯೋಗದ ವರದಿ ಜಾರಿಗೆ ಕುರುಹಿನಶೆಟ್ಟಿ ಸಮಾಜದಿಂದ ಇದಕ್ಕೆ ವಿರೋಧವಿದೆ. ವರದಿಯಲ್ಲಿ ತಿಳಿಸಿರುವ ನಮ್ಮ ಸಮಾಜದ ಅಂಕಿ-ಅಂಶಗಳು ಸತ್ಯಕ್ಕೆ ದೂರವಾಗಿದೆ ಎಂದು ಶ್ರೀ ನೀಲಕಂಠ ಪಟ್ಟದಾರ್ಯ ಮಹಾಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕುರುಹಿನಶೆಟ್ಟಿ ಸಮಾಜದ ಮೂಲ ಪೀಠದ ಪೀಠಾಧ್ಯಕ್ಷರಾಗಿ ನಾನು ಕರ್ನಾಟಕದಾದ್ಯಂತ ಪ್ರವಾಸ ಕೈಗೊಂಡಾಗ ಕುರುಹಿನಶೆಟ್ಟಿ ಸಮಾಜದ ಜನಸಂಖ್ಯೆಯು ಸುಮಾರು 12 ಲಕ್ಷಕ್ಕೂ ಅಧಿಕವಿರುವುದು ತಿಳಿದು ಬಂದಿದೆ. ಕಾಂತರಾಜು ವರದಿಯಲ್ಲಿ ಕೇವಲ ಒಂದೂವರೆ ಲಕ್ಷ ಎಂದು ನಮೂದಾಗಿದೆ. ಈಗ ಜಾರಿಗೊಳಿಸುತ್ತಿರುವ ಸಮೀಕ್ಷಾ ವರದಿ ಸರಿಯಾಗಿಲ್ಲ. ಹತ್ತು ವರ್ಷಗಳ ಹಿಂದೆ ಮಾಡಿರುವ ಸಮೀಕ್ಷೆಯು ಅವೈಜ್ಞಾನಿಕವಾಗಿರುವುದರಿಂದ ಈಗ ಈ ವರದಿ ಪ್ರಸ್ತುತವಾಗುವುದಿಲ್ಲ ಎಂದರು.
ಹಿಂದುಳಿದ ಸಮುದಾಯಗಳಲ್ಲಿ ಒಂದಾಗಿರುವ ಕುರುಹಿನಶೆಟ್ಟಿ ಸಮಾಜವು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಹಿಂದೆ ಉಳಿದಿರುವುದಕ್ಕೆ ಇಂತಹ ಅವೈಜ್ಞಾನಿಕ, ಅಪ್ರಾಯೋಗಿಕ ಸಮೀಕ್ಷೆಗಳೇ ಕಾರಣ. ಸರಕಾರವು ಆಷ್ಟು ಬೇಗ ಸರಿಯಾದ ಸಮೀಕ್ಷೆ ಮಾಡಿ ನಮ್ಮ ಸಮುದಾಯಕ್ಕೆ ಆದ ಅನ್ಯಾಯವನ್ನು ಸರಿಪಡಿಸಬೇಕು. ಇಲ್ಲವಾದಲ್ಲಿ ನಮ್ಮ ಹಕ್ಕುಗಳಿಗಾಗಿ ಸರ್ಕಾರದ ವಿರುದ್ಧ ಉಗ್ರ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ನಿಂಗಪ್ಪ ಚೆಗೂರು, ರಘುನಾಥ ತುಕ್ಕಾ, ಮಲ್ಲಿಕಾರ್ಜುನ ಐಲಿ, ಮೈಲಾರಪ್ಪ ಅರಳಿ, ಪ್ರಭು ರೊಡ್ಡಾ, ದೇವಿಂದ್ರಪ್ಪ ಗೊಟೂರ ಉಪಸ್ಥಿತರಿದ್ದರು.
ಬಾಗಲಕೋಟಿ, ಗಂಗಾವತಿ, ಬಳ್ಳಾರಿ, ಹಾಸನ, ತುಮಕೂರು, ಕಲಬುರ್ಗಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ 12 ಲಕ್ಷಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿದ್ದೇವೆ. ಆದರೆ, ಕಾಂತರಾಜು ವರದಿಯಲ್ಲಿ ಕಡಿಮೆ ಸಂಖ್ಯೆಯನ್ನು ತೋರಿಸುವ ಮೂಲಕ ಕುರುಹಿನಶೆಟ್ಟಿ ಸಮುದಾಯಕ್ಕೆ ಅನ್ಯಾಯ ಮಾಡಲಾಗಿದ್ದು, ಜಾತಿ ಗಣತಿಯನ್ನು ಮತ್ತೊಮ್ಮೆ ನಡೆಸಬೇಕು ಎಂದು ಶ್ರೀಗಳು ಮನವಿ ಮಾಡಿದರು.