ಗದಗ:- ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ರೋಣ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಸಚಿವ ಸ್ಥಾನದ ಆಕಾಂಕ್ಷಿ ಜಿ ಎಸ್ ಪಾಟೀಲ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಈ ಸಂಬಂಧ ಗದಗ ನಗರದಲ್ಲಿ ಮಾತನಾಡಿದ ಅವರು, ರಾಜಕೀಯದಲ್ಲಿ 40 ವರ್ಷ ಅನುಭವ ಹೊಂದಿದ್ದೇನೆ. ಹೀಗಾಗಿ ನನಗೂ ಸಚಿವನಾಗಬೇಕೆಂಬ ಆಸೆ ಇದೆ. ಹೈಕಮಾಂಡ್ ಯಾವಾಗ ನಿರ್ಧಾರ ಕೈಗೊಳ್ಳುತ್ತೋ ಆಗ ಸಚಿನಾಗುತ್ತೇನೆ ಎಂದರು.
ಇನ್ನು ಕಾಂಗ್ರೆಸ್ ಅವಧಿಯಲ್ಲಿ ರೋಣ ಕ್ಷೇತ್ರಕ್ಕೆ ಸಚಿವ ಸ್ಥಾನ ನೀಡದೆ ಅನ್ಯಾಯ ಎಸಗಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ಬಿಜೆಪಿ ಸರ್ಕಾರದಲ್ಲಿ ರೋಣ ಕ್ಷೇತ್ರಕ್ಕೆ ಸಚಿವ ಸ್ಥಾನ ನೀಡಿದೆ. ಆದರೆ ಇದನ್ನು ನಾವು ವಿಚಾರ ಮಾಡಬೇಕಿದೆ. ಇಲ್ಲಿ ಸಣ್ಣ ಜಿಲ್ಲೆಗಳಿವೆ. ಆಯ್ಕೆ ಆದವರು ಬಹಳ ಜನ ಇದ್ದಾರೆ. ಜನ ನಮಗೆ ಒಳ್ಳೆಯ ತೀರ್ಪು ಕೊಟ್ಟಿದ್ದಾರೆ. ಅದನ್ನು ಗೌರವದಿಂದ ಸ್ವೀಕಾರ ಮಾಡಿ ಜನರ ಮೆಚ್ಚುಗೆಗೆ ಪಾತ್ರ ಆಗಬೇಕು. ಅದಕ್ಕೆ ಟೈಂ ಬಂದಾಗ ನೋಡೋಣ ಎಂದು ಜಿ ಎಸ್ ಪಾಟೀಲ್ ಹೇಳಿದರು.
ಇನ್ನೂ ಸಿಎಂ ಬದಲಾವಣೆ ಬಗ್ಗೆ ಗೊತ್ತಿಲ್ಲ. ಶಾಸಕಾಂಗ ಪಕ್ಷದ ಸಭೆ ಇದೆ. ಹೀಗಾಗಿ ಸುರ್ಜೇವಾಲ್ ಬರ್ತಾಯಿದ್ದಾರೆ ಎಂದರು. ಗೃಹ ಸಚಿವ ಪರಮೇಶ್ವರ್ ಎಸ್ಸಿ, ಎಸ್ಟಿ ಶಾಸಕರ ಸಭೆ ವಿಚಾರವಾಗಿ ಮಾತನಾಡಿ, ಅದು ಅವರಿಗೆ ಬಿಟ್ಟ ವಿಚಾರ. ಅವರು ಹಿರಿಯ ಮಂತ್ರಿಗಳಿದ್ದಾರೆ. ಪಕ್ಷದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಸಂಘಟನೆ ವಿಚಾರದಲ್ಲಿ ಹೀಗೆ ಹೇಳಿರಬಹುದು ಎಂದರು.