ಬೆಂಗಳೂರು:- ಆಟೋಗೆ ಇನ್ನೋವಾ ಕಾರು ಡಿಕ್ಕಿ ಹೊಡೆದ ಪರಿಣಾಮ ಆಟೋ ಚಾಲಕನ ಕಾಲು ಮುರಿದಿರುವ ಘಟನೆ ಕೆ.ಆರ್ ಮಾರ್ಕೆಟ್ನ ಬಿಜಿಎಸ್ ಫ್ಲೈಓವರ್ ಮೇಲೆ ಭಾನುವಾರ ತಡರಾತ್ರಿ ಜರುಗಿದೆ.
ಅಪಘಾತದ ಬಳಿಕ ಕಾರು ಚಾಲಕ ನಿಲ್ಲಿಸದೇ ಪರಾರಿಯಾಗಿದ್ದಾನೆ. ಅಪಘಾತದ ಸಮಯದಲ್ಲಿ ವಾಹನ ಓಡಾಟ ಕಡಿಮೆ ಇದ್ದ ಕಾರಣ ಭಾರೀ ಅನಾಹುತ ತಪ್ಪಿದೆ. ಹಿಂದಿನಿಂದ ವೇಗವಾಗಿ ಬಂದ ಕಾರು ಆಟೋಗೆ ಡಿಕ್ಕಿಯಾಗಿದೆ. ಕಾರು ಡಿಕ್ಕಿಯಾದ ರಭಸಕ್ಕೆ ಆಟೋ ಸಂಪೂರ್ಣ ಜಖಂ ಆಗಿದ್ದು, ಆಟೋ ಚಾಲಕ ವಸೀಂ ಪಾಷಾ ಅವರ ಕಾಲು ಮುರಿದಿದೆ.
ಗಾಯಗೊಂಡ ಆಟೋ ಚಾಲಕನಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಚಾಮರಾಜಪೇಟೆ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.



