ಜಗತ್ತಿನ ಶ್ರೇಷ್ಠ ದಾರ್ಶನಿಕರು, ದಕ್ಷಿಣಆಫ್ರಿಕಾದ ಪ್ರಧಾನಿಗಳಾದ ನೆಲ್ಸನ್ ಮಂಡೇಲಾರವರ ಪ್ರಕಾರ ಶಿಕ್ಷಣವು ಜಗತ್ತನ್ನು ಬದಲಾಯಿಸಬಹುದಾದ ಅತ್ಯಂತ ಶಕ್ತಿಶಾಲಿ ಅಸ್ತ್ರವಾಗಿದೆ. ಮಾನ್ಯರು ಶಿಕ್ಷಣವನ್ನು ಎರಡು ರೀತಿಯಲ್ಲಿ ವಿಶ್ಲೇಷಿಸಿದ್ದಾರೆ. ಅವುಗಳೆಂದರೆ ಶೈಕ್ಷಣಿಕ ಶಿಕ್ಷಣ ಮತ್ತು ಮೌಲ್ಯ ಶಿಕ್ಷಣ.
ಪ್ರತಿಯೊಬ್ಬ ವಿದ್ಯಾರ್ಥಿಗೂ ಔಪಚಾರಿಕ ಶಿಕ್ಷಣ (ತರಗತಿಯಲ್ಲಿ ಬೋಧಿಸುವ ವಿಷಯಗಳು)ದ ಜೊತೆಜೊತೆಗೆ ಅನೌಪಚಾರಿಕ ಶಿಕ್ಷಣ (ಪಠ್ಯವಸ್ತುವನ್ನು ಹೊರತುಪಡಿಸಿ ಅನುಭವದ ಮೂಲಕ ಕಲಿಕೆ) ಕೂಡ ಬಹಳ ಮುಖ್ಯ. ವಿದ್ಯಾರ್ಥಿ ಬರಿ ಪಠ್ಯವಸ್ತುವನ್ನು ಅರಿತುಕೊಂಡು ಜೀವನ ನಡೆಸಲು ಸಾಧ್ಯವಿಲ್ಲ. ಅದರ ಜೊತೆಗೆ ಸಾಮಾನ್ಯ ಜ್ಞಾನ ಕೂಡ ಬಹಳ ಮುಖ್ಯ. ಇದೇ ಕಾರಣಕ್ಕೆ ಪಠ್ಯವಸ್ತುವಿನ ಜೊತೆ ಸಹ ಪಠ್ಯವಸ್ತುಗಳಾದ ಶಾರೀರಿಕ ಶಿಕ್ಷಣ, ಚಿತ್ರಕಲೆ, ಸಂಗೀತ, ನಾಟಕ-ನೃತ್ಯ ಹಾಗೂ ವೃತ್ತಿಶಿಕ್ಷಣ, ಮೌಲ್ಯಶಿಕ್ಷಣ ಈ ಎಲ್ಲ ವಿಷಯಗಳಿಂದ ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವವನ್ನು ಪರಿಪೂರ್ಣವಾಗಿ ರೂಪಿಸಿಕೊಳ್ಳಲು ಸಹಾಯಕವಾಗುತ್ತದೆ.
ಪ್ರಸ್ತುತ ಜಗತ್ತನ್ನು ಮತ್ತು ನಾವು ಬಾಳಿ ಬದುಕಬೇಕಿರುವ ಸಮಾಜವನ್ನು ಸೂಕ್ಷ್ಮವಾಗಿ ಅವಲೋಕನ ಮಾಡಿದಾಗ ನಮ್ಮ ಗಮನಕ್ಕೆ ಬರುವುದು ಅನ್ಯಾಯ, ಕ್ರೌರ್ಯ, ಅಸಹನೆ, ದುರಾಚಾರ, ಹೊಂದಾಣಿಕೆ ಇಲ್ಲದಿರುವುದು ಹಾಗೂ ಇನ್ನಿತರ ಅಂಶಗಳು. ಇದಕ್ಕೆ ಮಕ್ಕಳಿಗೆ ನೀಡುತ್ತಿರುವ ಶಿಕ್ಷಣದಲ್ಲಿನ ಮೌಲ್ಯ ಶಿಕ್ಷಣದ ಕೊರತೆಯೇ ಮುಖ್ಯ ಕಾರಣ. ಮಕ್ಕಳಿಗೆ ಒಳ್ಳೆಯ ಆಚಾರ-ವಿಚಾರ, ಉತ್ತಮ ಸಂಸ್ಕಾರ ದೊರಯಬೇಕೆಂದರೆ ಮೌಲ್ಯ ಶಿಕ್ಷಣ ನೀಡುವುದು ಅವಶ್ಯಕ ಎನ್ನುವುದು ನನ್ನ ಅನಿಸಿಕೆ.
ಈ ಹಿಂದೆ ನಾವು ಅಭ್ಯಾಸ ಮಾಡುವ ಸಮಯದಲ್ಲಿ ಪಠ್ಯವಸ್ತುವಿನಲ್ಲಿ ನೀತಿ ಕಥೆಗಳಿರುತ್ತಿದ್ದವು. ಇದರಿಂದ ಮಕ್ಕಳು ಪ್ರಾಮಾಣಿಕತೆ, ಸಮಗ್ರತೆ, ಸಹಾನುಭೂತಿ, ದಯೆ, ನ್ಯಾಯಸಮ್ಮತೆ, ಸಾಮಾಜಿಕ ಮತ್ತು ಭಾವನಾತ್ಮಕ ಕೌಶಲ್ಯ, ಜವಾಬ್ದಾರಿ, ತಾಳ್ಮೆ, ಶಿಸ್ತು, ಭಾತೃತ್ವ, ಪರಸ್ಪರರನ್ನು ಗೌರವಿಸುವುದು, ಪರಸ್ಪರ ಹೊಂದಾಣಿಕೆ, ಕಠಿಣ ಪರಿಶ್ರಮ, ಕೃತಜ್ಞತೆ, ಪರಸ್ಪರ ಹಂಚಿಕೊಳ್ಳುವಿಕೆ, ಉದಾರತೆ, ಜವಾಬ್ದಾರಿ ತೆಗೆದುಕೊಳ್ಳುವುದು ಈ ಎಲ್ಲ ಅಂಶಗಳನ್ನು ಜೀವನದಲ್ಲಿ ರೂಢಿಸಿಕೊಂಡು ನಮ್ಮ ನಿಮ್ಮೆಲ್ಲ ಹಿರಿಯರು ಸಾತ್ವಿಕ ಹಾಗೂ ಆದರ್ಶ ಜೀವನವನ್ನು ನಡೆಸುತ್ತಿದ್ದರು.
ಆದರೆ ಈಗಿನ ಮಕ್ಕಳಲ್ಲಿ ಈ ಮೇಲ್ಕಾಣಿಸಿದ ಯಾವುದೇ ಅಂಶಗಳು ನಮಗೆ ಕಾಣಸಿಗುವುದಿಲ್ಲ. ಮೌಲ್ಯ ಶಿಕ್ಷಣದ ಕೊರತೆ ಹಾಗೂ ಅತ್ಯಾಧುನಿಕ ತಂತ್ರಜ್ಞಾನ ಬಳಕೆಯೇ ಇದಕ್ಕೆ ಮುಖ್ಯ ಕಾರಣ. ಮಕ್ಕಳು ಹೊಂದಾಣಿಕೆ ಜೀವನ ನಡೆಸದೆ ಸಮಾಜ ವಿರೋಧಿ ಕೆಲಸಗಳಲ್ಲಿ ಹಾಗೂ ಅನೇಕ ಕಾನೂನು ಬಾಹಿರ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವುದನ್ನು ನಾವೆಲ್ಲ ಪ್ರತಿದಿನ ದಿನಪತ್ರಿಕೆಗಳಲ್ಲಿ, ದೃಶ್ಯ ಮಾದ್ಯಮಗಳಲ್ಲಿ ನೋಡುತ್ತಿದ್ದೇವೆ. ಇಂದಿನ ಶಾಲೆಗಳು ತರಗತಿಯಲ್ಲಿ ಮತ್ತು ಸಾಮಾಜಿಕ ಪರಿಸರದಲ್ಲಿ ತಿಳಿಸಲಾದ ಮೌಲ್ಯಗಳು ಮತ್ತು ನಂಬಿಕೆಗಳನ್ನು ಒಳಗೊಂಡಿರುವ ಪಠ್ಯಕ್ರಮದ ಪರಿಕಲ್ಪನೆಯನ್ನು ಶಿಕ್ಷಣ ವ್ಯವಸ್ಥೆಯಲ್ಲಿ ಅಳವಡಿಸುವುದು ಇಂದಿನ ಅಗತ್ಯವಾಗಿದೆ. ಇದು ಔಪಚಾರಿಕ ಪಠ್ಯಕ್ರಮದ ಪಾಠ ಪ್ರವಚನಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಆದರೆ ಪ್ರಸ್ತುತ ಶಿಕ್ಷಣ ವ್ಯವಸ್ಥೆ ಅದನ್ನು ನಿರ್ಲಕ್ಷಿಸಿ ಭಾಷೆ, ವಿಷಯಗಳು ಮತ್ತು ಅಂಕಗಳ ಮೇಲೆ ಹೆಚ್ಚು ಗಮನ ಹರಿಸುತ್ತಿದೆ.
ಮಕ್ಕಳ ಸರ್ವತೋಮುಖ ಅಭಿವೃದ್ಧಿಯಲ್ಲಿ ನಾಡಿನ ಮುಂದಿನ ಭವಿಷ್ಯ ಅಡಗಿರುತ್ತದೆ. ಇಂದಿನ ಹದಿಹರೆಯದ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳು, ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಮಕ್ಕಳು ವ್ಯಸನ ಮುಕ್ತರಾಗಲು ಅನೇಕ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಈ ಸಂದರ್ಭದಲ್ಲಿ ಡಾ.ಧನಂಜಯ್ ಸರ್ಜಿ ಸೇರಿದಂತೆ ಅನೇಕ ಶಾಸಕರು ಬಹಳ ಉತ್ಸಾಹದಿಂದ ಸದರಿ ವಿಧಾನ ಪರಿಷತ್ತಿನ ಉಪವೇಶಗಳಲ್ಲಿ ಭಾಗವಹಿಸಿ ಮಕ್ಕಳ ಹಕ್ಕುಗಳ ರಕ್ಷಣೆ ಬಗ್ಗೆ ಸುದೀರ್ಘವಾಗಿ ಎರಡು ದಿನಗಳ ಕಾಲ ಅಧಿವೇಶನದಲ್ಲಿ ಚರ್ಚೆ ನಡೆಸಿದ್ದು ನಂತರ ಸದನವು ಅನೇಕ ಶಿಫಾರಸುಗಳನ್ನು ಮಾಡಿದೆ.
13.06.2025 ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮತ್ತು ಚೈಲ್ಡ್ ಫಂಡ್ ಇಂಡಿಯಾ ಇವರ ಸಹಯೋಗದಲ್ಲಿ ಕರ್ನಾಟಕದ ಮಕ್ಕಳ ಆನ್ಲೈನ್ ಅಪಾಯಗಳ ಕುರಿತ ವಿಶೇಷ ಅಧ್ಯಯನದ ವರದಿಯ ಬಿಡುಗಡೆ ಸಭೆಯಲ್ಲಿ ಆನ್ಲೈನ್ ಮೂಲಕ ಶಿಕ್ಷಣ ಸರಿಯಾದ ಪದ್ಧತಿ ಅಲ್ಲ, ಒಟ್ಟಾರೆ ಎಲ್.ಕೆ.ಜಿಯಿಂದ ಪಿ.ಯು.ಸಿವರೆಗೆ ಆನ್ಲೈನ್ ಶಿಕ್ಷಣವನ್ನು ರದ್ದುಗೊಳಿಸುವ ಕುರಿತಂತೆ ಸಭೆಯಲ್ಲಿ ನಿರ್ಣಯಿಸಿದ್ದು, ಇದು ಒಂದು ವಿನೂತನ ಪ್ರಯೋಗವಾಗಿದೆ.
ಪ್ರಜಾಪ್ರಭುತ್ವ ರಾಷ್ಟçವಾದ ಭಾರತದಲ್ಲಿ ಮೌಲ್ಯ ಶಿಕ್ಷಣದ ಮಹತ್ವವನ್ನು ಪ್ರಜಾಪ್ರಭುತ್ವ ಚಿಂತನೆಯ ಪರಿಕಲ್ಪನೆಯೊಂದಿಗೆ ಒತ್ತಿಹೇಳಲಾಗುತ್ತದೆ. ಶಾಲೆಗಳಲ್ಲಿ ನೈತಿಕತೆ ಮತ್ತು ಮೌಲ್ಯಗಳ ಬೋಧನೆಯ ನಿರ್ಣಾಯಕ ಪಾತ್ರವನ್ನುಅರ್ಥ ಮಾಡಿಕೊಂಡು ಉತ್ತಮ ವ್ಯಕ್ತಿತ್ವ ನಿರ್ಮಾಣದೊಂದಿಗೆ ಉತ್ತಮ ನಾಗರಿಕರನ್ನು ರೂಪಿಸುವ ನಿಟ್ಟಿನಲ್ಲಿ ಪ್ರಸ್ತುತ ಶಾಲಾ ಪಠ್ಯಕ್ರಮದಲ್ಲಿ ನೈತಿಕ ಶಿಕ್ಷಣ ಮತ್ತು ಮೌಲ್ಯ ಶಿಕ್ಷಣವನ್ನು ಅಳವಡಿಸುವ ಕುರಿತಂತೆ ಅಗತ್ಯ ಕ್ರಮವಹಿಸಲು ಸಭಾಪತಿ ಬಸವರಾಜ ಹೊರಟ್ಟಿ ಪತ್ರದಲ್ಲಿ ಕೋರಿದ್ದಾರೆ.