ವಿಜಯಸಾಕ್ಷಿ ಸುದ್ದಿ, ಗದಗ : ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್ ಅವರು ಬುಧವಾರ ನರಗುಂದ ತಾಲೂಕಿನ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ನರೇಗಾ ಕಾಮಗಾರಿಗಳ ಗುಣಮಟ್ಟವನ್ನು ಪರಿಶೀಲಿಸಿದರು.
ಹುಣಶೀಕಟ್ಟಿ, ಕೊಣ್ಣೂರು ಮತ್ತು ಶಿರೋಳ ಗ್ರಾ.ಪಂಗಳಿಗೆ ಭೇಟಿ ನೀಡಿದ ಭರತ್ ಎಸ್, ನರೇಗಾ ಯೋಜನೆಯಡಿ ಪ್ರಗತಿಯಲ್ಲಿರುವ ಹಾಗೂ ಮುಕ್ತಾಯಗೊಂಡ ಕಾಮಗಾರಿಗಳನ್ನು ಪರಿಶೀಲಿಸಿದರು. ಹುಣಶೀಕಟ್ಟಿ ಗ್ರಾ.ಪಂ ವ್ಯಾಪ್ತಿಯ ಕಲಕೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನರೇಗಾ ಮತ್ತು ಪಿಆರ್.ಇಡಿ ಇಲಾಖೆ ಒಗ್ಗೂಡುವಿಕೆಯಡಿ 1.33 ಲಕ್ಷ ರೂ ವೆಚ್ಚದಡಿ ನಿರ್ಮಿಸುತ್ತಿರುವ ಶಾಲಾ ಶೌಚಾಲಯದ ಕಾಮಗಾರಿ, ಕೊಣ್ಣೂರು ಗ್ರಾ.ಪಂನಲ್ಲಿ ನರೇಗಾ ಯೋಜನೆಯಡಿ ನಿರ್ಮಿಸಿದ ಗಟಾರ ಮತ್ತು ಸಿ.ಸಿ. ರಸ್ತೆ ಕಾಮಗಾರಿಗೆ ಭೇಟಿ ನೀಡಿ ಪರಿಶೀಲಿಸಿ, ಪ್ರಗತಿ ಹಂತದಲ್ಲಿರುವ ಕಾಮಗಾರಿಗಳನ್ನು ಆದಷ್ಟು ಬೇಗ ಮುಕ್ತಾಯಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಶಿರೋಳ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಸಿಇಓ ಅವರು, ಆಸ್ಪತ್ರೆಗೆ ಚಿಕಿತ್ಸೆಗೆ ಬಂದಿದ್ದ ರೋಗಿಗಳ ಜೊತೆ ಸಮಾಲೋಚನೆ ನಡೆಸಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಅಗತ್ಯ ಚಿಕಿತ್ಸಾ ಸೌಲಭ್ಯಗಳನ್ನು ತಲುಪಿತ್ತಿರುವ ಕುರಿತು ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಹಾಜರಿದ್ದ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಪಂಕಜಾ ಮೈತ್ರಿ ಅವರ ಜೊತೆಗೆ ಸಮಾಲೋಚನೆ ನಡೆಸಿ ಶಿರೋಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರತಿ ತಿಂಗಳು ಡೆಲಿವರಿ ಪ್ರಕರಣಗಳ ಸಂಖ್ಯೆಯ ಬಗ್ಗೆ ಮಾಹಿತಿ ಪಡೆದರು. ಅಲ್ಲದೆ ಔಷಧಿ ಉಗ್ರಾಣಕ್ಕೆ ಭೇಟಿ ನೀಡಿ ಔಷಧಿಗಳ ದಾಸ್ತಾನು ಕುರಿತು ಮಾಹಿತಿ ಪಡೆದರು. ಲ್ಯಾಬ್, ಶಸ್ತç ಚಿಕಿತ್ಸೆ ಕೊಠಡಿ ಸೇರಿದಂತೆ ಆರೋಗ್ಯ ಕೇಂದ್ರದ ಪ್ರತಿ ವಿಭಾಗಕ್ಕೂ ತೆರಳಿ ಆರೋಗ್ಯ ಕೇಂದ್ರದ ಸ್ವಚ್ಛತೆ ಮತ್ತು ನಿರ್ವಹಣೆ ಕುರಿತು ತಪಾಸಣೆ ನಡೆಸಿದರು.
ಶಿರೋಳ ಗ್ರಾಮದ ಸರ್ಕಾರಿ ಮಾದರಿ ಕೇಂದ್ರ ಶಾಲೆಯ ಮಕ್ಕಳ ಜೊತೆ ಬಿಸಿಯೂಟ ಸವಿದರು. ತರುವಾಯ, ಶಾಲಾ ಮಕ್ಕಳ ಜೊತೆ ಸಮಾಲೋಚನೆ ನಡೆಸಿ ಪ್ರತಿನಿತ್ಯ ಮಕ್ಕಳಿಗೆ ಕೊಡುವ ಆಹಾರದ ಕುರಿತು ಮಾಹಿತಿ ಪಡೆದರು. ಅಲ್ಲದೆ ಊಟದ ಜೊತೆ ಶಿಕ್ಷಕರು ಹೇಳುವ ಪಾಠದ ಬಗ್ಗೆ ಆಸಕ್ತಿವಹಿಸಿ ಕಲಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ಕಿವಿಮಾತು ಹೇಳಿದರು. ಊಟದ ಬಳಿಕ ಬಿಸಿಯೂಟ ಸಿಬ್ಬಂದಿ ಜೊತೆ ಮಾತನಾಡಿ, ಆಹಾರ ಗುಣಮಟ್ಟ ಕಾಪಾಡಿಕೊಂಡು ಹೋಗುವಂತೆ ಸೂಚಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಧಿಕಾರಿಗಳಾದ ಡಾ. ಗುರುನಾಥ ಹೂಗಾರ, ಕಾರ್ಯನಿರ್ವಾಹಕ ಅಧಿಕಾರಿಗಳಾದ ಎಸ್.ಕೆ. ಇನಾಮದಾರ್, ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ಸಂತೋಷಕುಮಾರ್ ಪಾಟೀಲ್, ಶಿರೋಳ ಪಿಡಿಓ ವೈ.ಬಿ. ಸಂಕನಗೌಡರ, ಪಿಆರ್.ಇಡಿ ಎಇಇ ನಿಂಗಪ್ಪ ಬೇವಿನಗಿಡದ ಅವರು ಸಾಥ್ ನೀಡಿದರು.
ಸಿಇಓ ಅವರ ನರಗುಂದ ತಾಲೂಕು ಭೇಟಿ ಸಂದರ್ಭದಲ್ಲಿ ಕೊಣ್ಣೂರು ಪಿಡಿಓ ಮಂಜುನಾಥ ಗಣಿ, ಹುಣಶಿಕಟ್ಟಿ ಪಿಡಿಓ ವ್ಹಿ.ಆರ್. ರಾಯನಗೌಡರ, ತಾಲೂಕು ನರೇಗಾ ಸಂಯೋಜಕ ಹನಮಂತ ಡಂಬಳ, ಐಇಸಿ ಸಂಯೋಜಕ ಸುರೇಶ ಬಾಳಿಕಾಯಿ, ತಾಂತ್ರಿಕ ಸಹಾಯಕರಾ ಅಲ್ತಾಪ್ ಅಮ್ಮಿನಬಾವಿ, ಮಲ್ಲಪ್ಪ ಕಟ್ಟಮನಿ, ಹುಚ್ಚಪ್ಪ ಕಟ್ಟಿ ಮತ್ತು ಹುಣಶೀಕಟ್ಟಿ, ಕೊಣ್ಣೂರು, ಶಿರೋಳ ಗ್ರಾ.ಪಂಗಳ ಸಿಬ್ಬಂದಿ ವರ್ಗದವರು ಹಾಜರಿದ್ದರು.
ಶಿರೋಳ ಗ್ರಾಮದಲ್ಲಿ ಜಿಲ್ಲಾ ಪಂಚಾಯತ ಹಾಗೂ ಜಿಲ್ಲಾ ಆಡಳಿತ ಗದಗ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಡಿ.ದೇವರಾಜ ಅರಸು ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದ ಭರತ್ ಎಸ್ ವಿದ್ಯಾರ್ಥಿಗಳ ವಸತಿ ಕೊಠಡಿ ಮತ್ತು ಅಡುಗೆ ಕೊಠಡಿಗೆ ಭೇಟಿ ನೀಡಿ ದವಸ-ದಾನ್ಯಗಳ ಗುಣಮಟ್ಟ ಪರಿಶೀಲಿಸಿದರು.