ವಿಜಯಸಾಕ್ಷಿ ಸುದ್ದಿ, ಗದಗ: ರೋಣ ತಾಲೂಕಿನ ಅಬ್ಬಿಗೇರಿ ಹಾಗೂ ಸವಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಅನುಷ್ಠಾನಗೊಂಡ ವಿವಿಧ ಕಾಮಗಾರಿಗಳ ಸಾಮಗ್ರಿ ಬಿಲ್ಗಳ FTOಗಳ ಪರಿಶೀಲನೆ ಕುರಿತು ಅಯುಕ್ತಾಲಯದಿಂದ ಆಗಮಿಸಿದ ರಾಜ್ಯ ತಂಡ ಭೇಟಿ ನೀಡಿ ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಸಿತು.
ಜಂಟಿ ನಿರ್ದೇಶಕರಾದ ಲಲಿತಾ ರೆಡ್ಡಿ (ಕೃಷಿ) ನೇತೃತ್ವದಲ್ಲಿ ಸದಸ್ಯರಾದ ತನುಜಾ, ಯಶವಂತ ಜಿ.ಎಲ್ ಅವರು ಜಂಟಿಯಾಗಿ ಗ್ರಾ.ಪಂಗಳಿಗೆ ಭೇಟಿ ನೀಡಿ ಕಾಮಗಾರಿಗಳು ಮತ್ತು ದಾಖಲೆಗಳನ್ನು ಪರಿಶೀಲಿಸಿದರು. ಪ್ರಸಕ್ತ ಸಾಲಿನಲ್ಲಿ ಅನುಷ್ಠಾನಗೊಂಡು ಸಾಮಗ್ರಿ ಪಾವತಿಗೆ ಸೃಜನೆ ಮಾಡಲಾದ FTO ಕಾಮಗಾರಿಗಳ ಪರಿಶೀಲನೆ ನಡೆಸಿದರು.
ಅನುಷ್ಠಾನಗೊಂಡಿರುವ ವೈಯಕ್ತಿಕ ಕಾಮಗಾರಿಗಳ ಕುರಿತು ಪರಿಶೀಲಿಸಿದ ಅವರು, ಯೋಜನೆಯಡಿ ಫಲಾನುಭವಿಗಳು ಪಡೆದುಕೊಂಡ ಸವಲತ್ತುಗಳನ್ನು ಪರಿಶೀಲಿಸಿ ಯೋಜನೆಯಡಿ ಫಲಾನುಭವಿಗಳು ಆರ್ಥಿಕವಾಗಿ, ಸಾಮಾಜಿಕವಾಗಿ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆಯೇ ಎಂಬುದರ ಕುರಿತು ಫಲಾನುಭವಿಗಳ ಜೊತೆಗೆ ಸಮಾಲೋಚಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ಚಂದ್ರಶೇಖರ ಬಿ.ಕಂದಕೂರ, ಜಿಲ್ಲಾ ಸಹಾಯಕ ಕಾರ್ಯಕ್ರಮ ಸಂಯೋಜನಾಧಿಕಾರಿ ಕಿರಣಕುಮಾರ ಎಸ್.ಎಚ್, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಲೋಹಿತ ಎಂ, ಬಸವರಾಜ ಶೃಂಗೇರಿ, ನರೇಗಾ ವಿಭಾಗದ ತಾಲೂಕು ಐಇಸಿ ಸಂಯೋಜಕ ಮಂಜುನಾಥ, ತಾಂತ್ರಿಕ ಸಹಾಯಕ ಪ್ರವೀಣ ಸೂಡಿ, ಗ್ರಾ.ಪಂ ಸಿಬ್ಬಂದಿ ವರ್ಗ ಹಾಗೂ ತಾ.ಪಂ ನರೇಗಾ ಸಿಬ್ಬಂದಿಗಳು ಹಾಜರಿದ್ದರು.



