ವಿಜಯಸಾಕ್ಷಿ ಸುದ್ದಿ, ಗದಗ : ತಾಲೂಕಿನ ಅಂತೂರ ಬೆಂತೂರಿನಲ್ಲಿ ನ.7ರಂದು ಶ್ರೀ ಗುರು ಬೂದೀಶ್ವರ ಸಂಸ್ಥಾನ ಮಠದ 775 ವರ್ಷ ಬಾಳಿದ ಬೂದೀಶ್ವರರ ಕಂಚಿನ ಮೂರ್ತಿ ಪ್ರತಿಷ್ಠಾಪನೆ ನೆರವೇರಲಿದೆ.
ಪೂಜ್ಯಶ್ರೀ ಜಗದ್ಗುರು ಬೂದೀಶ್ವರ ಸ್ವಾಮಿಗಳವರ ಕಂಚಿನ ವಿಗ್ರಹ, ಪಲ್ಲಕ್ಕಿ ಮಹೋತ್ಸವದೊಂದಿಗೆ ಧರ್ಮಜಾಗೃತಿ ಮಹಾ ಪಾದಯಾತ್ರೆಯು ಯಾದಗಿರಿ ಜಿಲ್ಲೆ ಗುರುಮಠಕಲ್ ತಾಲೂಕ ಗಾಜರಕೋಟನ ರಾಚಪ್ಪಯ್ಯ ಕಡ್ಲಪ್ಪಯ್ಯ ದೇವಸ್ಥಾನದ ಶ್ರೀ ಜಗದ್ಗುರು ಬೂದೀಶ್ವರ ಸಂಸ್ಥಾನಮಠದಿಂದ ಅಕ್ಟೋಬರ್ 23ರಿಂದ ಹೊರಟಿದ್ದು, ಶ್ರೀ ಜಗದ್ಗುರು ಬೂದೀಶ್ವರ ಸ್ವಾಮಿಗಳವರ ಕಂಚಿನ ವಿಗ್ರಹ, ಪಲ್ಲಕ್ಕಿ ಮಹೋತ್ಸವ ಅಂತೂರ ಬೆಂತೂರ ಗ್ರಾಮಕ್ಕೆ ಆಗಮಿಸಲಿದೆ. ಇದಕ್ಕೂ ಮುನ್ನ ನ.6ರಂದು ಬೆಳಿಗ್ಗೆ 5 ಗಂಟೆಗೆ ಕುರ್ತಕೋಟಿ ಗ್ರಾಮದಿಂದ ಪಾದಯಾತ್ರೆ ಪ್ರಾರಂಭವಾಗಿ ಮುಂಜಾನೆ 7 ಗಂಟೆಗೆ ಅಂತೂರ-ಬೆಂತೂರ ಗ್ರಾಮಕ್ಕೆ ಪ್ರವೇಶಿಸಲಿದೆ.
ನೂರಾರು ಭಕ್ತರ ಸಮ್ಮುಖದಲ್ಲಿ ಪೂರ್ಣಕುಂಭ, ನಂದಿಕೋಲು ಹಾಗೂ ಭಜನೆ, ವಾದ್ಯ ತಂಡದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಸಂಚರಿಸಿ ಶ್ರೀ ಬೂದೀಶ್ವರರ ಕಂಚಿನ ವಿಗ್ರಹವು ಶ್ರೀಮಠವನ್ನು ತಲುಪುವುದು. ನಂತರ ನ. 7ರಂದು ಅಂತೂರ ಬೆಂತೂರಿನ ಶ್ರೀ ಜಗದ್ಗುರು ಬೂದೀಶ್ವರ ಸಂಸ್ಥಾನಮಠದ ಪೂಜ್ಯಶ್ರೀ ಜಗದ್ಗುರು ಡಾ. ರಾಚೋಟೀಶ್ವರ ಶಿವಾಚಾರ್ಯ ಮಹಾಸ್ವಾಮಿಗಳಿಂದ ಕತೃ ಗದ್ದುಗೆ ಮೇಲೆ ಜಗದ್ಗುರು ಬೂದೀಶ್ವರ ಶ್ರೀಗಳ ಕಂಚಿನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗುವುದು ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.