ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಅಧಿಕಾರ ಹಂಚಿಕೆ ವಿಚಾರವಾಗಿ ಉಂಟಾದ ಒಳಕಿತ್ತಾಟ ದಿನೇದಿನೆ ತೀವ್ರಗೊಳ್ಳುತ್ತಿದೆ. ಸಿಎಂ ಸಿದ್ದರಾಮಯ್ಯ ‘ನಾ ಕೊಡೆ’ ಎನ್ನುವ ನಿಲುವು ಹಿಡಿದಿದ್ದರೆ, ಡಿಸಿಎಂ ಡಿಕೆ ಶಿವಕುಮಾರ್ ‘ನಾ ಬಿಡೆ’ ಎಂದು ಪಟ್ಟು ಹಿಡಿದಿದ್ದಾರೆ ಎನ್ನುವ ರಾಜಕೀಯ ವಲಯದ ಚರ್ಚೆ ಗರಿಗೆದರಿದೆ.
ದೆಹಲಿಯಲ್ಲಿ ವರಿಷ್ಠರನ್ನು ಭೇಟಿ ಮಾಡಿ ವಾಪಸ್ ಆದ ಬಳಿಕ ಡಿಕೆ ಶಿವಕುಮಾರ್ ಅವರ ವರಸೆಯಲ್ಲಿ ಬದಲಾವಣೆ ಕಂಡುಬರುತ್ತಿದೆ. ಶನಿವಾರ ಬೆಂಗಳೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಸಮ್ಮೇಳನದಲ್ಲಿ ಸಿಎಂ ಮತ್ತು ಡಿಸಿಎಂ ಒಂದೇ ವೇದಿಕೆಯಲ್ಲಿ ಇದ್ದರೂ, ಬಹು ಹೊತ್ತು ಪರಸ್ಪರ ಸಂಭಾಷಣೆ ಇಲ್ಲದಿರುವುದು ರಾಜಕೀಯ ಸಂದೇಶ ನೀಡಿದೆ. ಸಾಮಾನ್ಯವಾಗಿ ಅಕ್ಕಪಕ್ಕ ಕುಳಿತ ನಾಯಕರು ಮಾತನಾಡುವುದು ಸಹಜವಾದರೂ, ಈ ಬಾರಿ ದೂರವೇ ಹೆಚ್ಚು ಕಾಣಿಸಿಕೊಂಡಿತು.
ನಂತರ ನದಿ ಮೂಲ ನಿರ್ವಹಣೆ ಪುಸ್ತಕದ ಕುರಿತು ಅನಿವಾರ್ಯವಾಗಿ ಕೆಲ ಮಾತುಕತೆ ನಡೆದರೂ, ಒಟ್ಟಾರೆ ಮೌನವೇ ಹೆಚ್ಚಿನದಾಗಿ ಗಮನ ಸೆಳೆದಿತು. ಈ ಬೆಳವಣಿಗೆಗೆ ಬಿಜೆಪಿ ನಾಯಕರು ವ್ಯಂಗ್ಯವಾಡಿದ್ದು, “ದೆಹಲಿಯಿಂದ ರಾಜಕೀಯ ಗನ್ ಹಿಡಿದುಕೊಂಡು ಬಂದಿದ್ದಾರೆ” ಎಂದು ಟೀಕಿಸಿದ್ದಾರೆ.
ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, “ಹೇಳಬೇಕಾದುದನ್ನೆಲ್ಲ ವರಿಷ್ಠರಿಗೆ ಹೇಳಿದ್ದೇನೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಗುರುವಾರ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ವಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಎದುರು ಹಕ್ಕು ಮಂಡಿಸಿ ವಾಪಸ್ ಆದ ಬಳಿಕ “ಕಾಲವೇ ಉತ್ತರಿಸುತ್ತದೆ” ಎಂದು ಹೇಳಿದ್ದರು.
ಫೆಬ್ರವರಿ 17ರ ಬಳಿಕ ರಾಜಕೀಯ ಸಮೀಕರಣ ಬದಲಾಗುತ್ತದೆಯೇ ಎಂಬ ಚರ್ಚೆ ತೀವ್ರವಾಗಿದೆ. ಹೈಕಮಾಂಡ್ ಮಧ್ಯಪ್ರವೇಶದ ನಿರೀಕ್ಷೆಯಲ್ಲಿ ಡಿಕೆಶಿ ಬಣ ಇದ್ದರೆ, ಬಜೆಟ್ ದಿನಾಂಕ ಘೋಷಿಸಿ ಲೆಕ್ಕಪತ್ರ ಮಂಡನೆಗೆ ಸಜ್ಜಾಗಿರುವ ಸಿಎಂ ಮುಂದಿನ 1 ತಿಂಗಳು ಬ್ಯುಸಿ ಎಂಬ ಸಂದೇಶ ರವಾನಿಸಿದ್ದಾರೆ.
ಎಐಸಿಸಿ ಮೂಲಗಳ ಪ್ರಕಾರ, ವರಿಷ್ಠರು ಸಚಿವರು ಮತ್ತು ನಾಯಕರನ್ನು ವಿಶ್ವಾಸಕ್ಕೆ ಪಡೆಯಲು ಮುಂದಾಗಿದ್ದು, ಸಿಎಂ ಹಾಗೂ ಡಿಸಿಎಂ ಜತೆ ಪ್ರತ್ಯೇಕವಾಗಿ ಮಾತುಕತೆ ನಡೆಸುವ ಸಾಧ್ಯತೆ ಇದೆ.
ಇದರ ಮಧ್ಯೆ ಡಿಕೆ ಶಿವಕುಮಾರ್ ನೊಣವಿನಕೆರೆ ಅಜ್ಜಯ್ಯನ ಸನ್ನಿಧಿಗೆ ಭೇಟಿ ನೀಡಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದಾರೆ. “ಅಜ್ಜಯ್ಯನ ಶಕ್ತಿ ಇಲ್ಲದೇ ಇದ್ದರೆ ಈ ಸರ್ಕಾರ ಇಷ್ಟು ಶಕ್ತಿಯುತವಾಗಿರುತ್ತಿರಲಿಲ್ಲ” ಎಂದು ಹೇಳಿ ರಾಜಕೀಯವಾಗಿ ಟ್ವಿಸ್ಟ್ ನೀಡಿದ್ದಾರೆ.
ಸರ್ಕಾರ ಸಾವಿರ ದಿನ ಪೂರೈಸಿರುವ ಸಂಭ್ರಮದ ನಡುವೆಯೇ ಈ ಪಟ್ಟದಾಟ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಹಾವೇರಿಯಲ್ಲಿ ನಡೆಯುತ್ತಿರುವ ಕಾರ್ಯಕ್ರಮದತ್ತ ರಾಜ್ಯದ ಗಮನ ನೆಟ್ಟಿದೆ.



