ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರವೊಂದನ್ನು ಬರೆದಿದ್ದಾರೆ.
ರಾಜ್ಯದ ರೈತರ ಸಮಸ್ಯೆಗಳ ಕುರಿತಂತೆ ತಮ್ಮೊಡಗೆ ತುರ್ತಾಗಿ ಚರ್ಚೆ ಮಾಡಬೇಕಿದ್ದು, ಅದಕ್ಕೆ ಅವಕಾಶ ನೀಡುವಂತೆ ಪತ್ರದಲ್ಲಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ. ದಿನದಿಂದ ದಿನಕ್ಕೆ ರೈತರ ಹೋರಾಟ ತೀವ್ರಗೊಂಡಿದ್ದು, ಕಬ್ಬಿನ ಬೆಲೆಗಾಗಿ ಅವರ ಪಟ್ಟು ಯಾವತ್ತೂ ತಣ್ಣಗಾಗಿಲ್ಲ. ದಿನಕ್ಕೊಬ್ಬರಂತೆ ಸಚಿವರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡುತ್ತಿದ್ದರೂ ಸಮಸ್ಯೆ ಇನ್ನೂ ಬಗೆಹರಿಯುತ್ತಿಲ್ಲ. ಈ ಮಧ್ಯೆ, ಸಿಎಂ ಸಿದ್ದರಾಮಯ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಕಬ್ಬು ಬೆಳೆಗಾರರ ಸಮಸ್ಯೆ ಬಗ್ಗೆ ತುರ್ತು ಚರ್ಚೆಗಾಗಿ ಪತ್ರ ಬರೆದಿದ್ದಾರೆ.
ಸಿಎಂ ಪತ್ರದಲ್ಲಿ ಉಲ್ಲೇಖಿಸಿರುವಂತೆ, ಉತ್ತರ ಕರ್ನಾಟಕದ ಬೆಳಗಾವಿ, ಬಾಗಲಕೋಟೆ, ವಿಜಯಪುರ, ವಿಜಯನಗರ, ಬೀದರ್, ಗದಗ, ಹುಬ್ಬಳ್ಳಿ-ಧಾರವಾಡ ಮತ್ತು ಹಾವೇರಿ ಜಿಲ್ಲೆಗಳ ರೈತರು ತಮ್ಮ ಹೋರಾಟವನ್ನು ತೀವ್ರ ಸ್ವರೂಪದಲ್ಲಿ ಮುಂದುವರೆಸುತ್ತಿದ್ದಾರೆ.
ರಾಜ್ಯ ಸರ್ಕಾರ ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಸಂಧಾನಿಸಲು ನಿರಂತರ ಪ್ರಯತ್ನ ಮಾಡಿದ್ದರೂ, ರೈತರು ಎದುರಿಸುತ್ತಿರುವ ವೆಚ್ಚ ಮತ್ತು ಲಾಭದ ಅಸಮತೋಲನ ಸಮಸ್ಯೆ ಸುಲಭವಾಗಿ ಬಗೆಹರಿಯುತ್ತಿಲ್ಲ. ಕಟಾವು, ಸಾರಿಗೆ ವೆಚ್ಚಗಳನ್ನು ಕಡಿಮೆ ಮಾಡಿದ ಬಳಿಕವೂ, ರೈತರಿಗೆ ಪ್ರತಿ ಟನ್ಗೆ 2,600–3,000 ರೂ. ಮಾತ್ರ ಲಾಭ ಸಿಗುತ್ತಿದೆ. ಹೀಗಾಗಿ, ಕೇಂದ್ರ ಸರ್ಕಾರದ ಸಹಾಯವಾಣಿ ಅಗತ್ಯವಿದೆ ಎಂದು ಸಿಎಂ ಸಿದ್ದರಾಮಯ್ಯ ತಮ್ಮ ಪತ್ರದಲ್ಲಿ ಮನವಿ ಮಾಡಿದ್ದಾರೆ.


