ವಿಜಯಸಾಕ್ಷಿ ಸುದ್ದಿ, ಗದಗ: ಆಶಾ ಕಾರ್ಯಕರ್ತೆಯರಿಗೆ ಮೊದಲು ತರಬೇತಿ ನೀಡಿ ಕೆಲಸಕ್ಕೆ ಸೇರಿಸಿಕೊಳ್ಳುತ್ತಾರೆ. ತರಬೇತಿ ನಂತರವೂ ವಿದ್ಯಾರ್ಹತೆ ಎಂಬ ಮಾನದಂಡ ಹೇರಿ ಕೆಲಸದಿಂದ ವಜಾಗೋಳಿಸುವ ಹುನ್ನಾರ ನಡೆದಿದೆ. ಯಾವುದೇ ಆಶಾ ಕಾರ್ಯಕರ್ತೆಯರನ್ನು ತೆಗೆದು ಹಾಕದಂತೆ ಹಾಗೂ ವೇತನ ಹೆಚ್ಚಳಕ್ಕಾಗಿ ಆಗ್ರಹಿಸಿ ರಾಜ್ಯಾದ್ಯಂತ ಆಗಸ್ಟ್ 12ರಿಂದ 14ರವರೆಗೆ ಧರಣಿ ಹಮ್ಮಿಕೊಂಡಿದ್ದು, ಗದಗ ನಗರದ ಗಾಂಧಿ ಸರ್ಕಲ್ನಲ್ಲಿ ಅಹೋರಾತ್ರಿ ಧರಣಿ ನಡೆಸಲು ತಿರ್ಮಾನಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಕಾರ್ಯದರ್ಶಿ ಡಿ. ನಾಗಲಕ್ಷ್ಮೀ ಹೇಳಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆಶಾ ಕಾರ್ಯಕರ್ತೆಯರು 17 ವರ್ಷಗಳಿಂದ ತಳ ಹಂತದಲ್ಲಿ ಕೆಲಸ ಮಾಡುತ್ತಿದ್ದಾರೆ. ರಾಷ್ಟ್ರೀಯ ಆರೋಗ್ಯ ಯೋಜನೆಯಡಿಯಲ್ಲಿ ಆಶಾ ಕಾರ್ಯಕರ್ತೆಯರ ಹಗಲು-ರಾತ್ರಿ ಸೇವೆಯಿಂದ ಶಿಶು ಮರಣ, ತಾಯಿ ಮರಣದ ಪ್ರಮಾಣದಲ್ಲಿ ಗಣನೀಯ ಇಳಿಕೆ ಆಗಿದೆ ಎಂದು ಹೇಳಿದರು.
ಕೇವಲ 5 ಸಾವಿರ ಪ್ರೋತ್ಸಾಹ ಧನ ನೀಡುತ್ತಿದ್ದಾರೆ. 15 ಸಾವಿರ ರೂ ಪ್ರೋತ್ಸಾಹಧನ ನೀಡುವಂತೆ ಬೆಂಗಳೂರಿನಲ್ಲಿ ಅಹೋರಾತ್ರಿ ಧರಣಿ ಮಾಡಿದೆವು. 10 ಸಾವಿರ ರೂ ನೀಡುವುದಾಗಿ ಸಿಎಂ ಭರವಸೆ ನೀಡಿದರು. ಆದರೆ, ಅದು ಭರವಸೆಯಾಗಿಯೇ ಉಳಿಯಿತು. ಸಿಎಂ ಸಿದ್ದರಾಮಯ್ಯ ಸುಳ್ಳು ಹೇಳಿ ನಮ್ಮನ್ನು ಪ್ರತಿಭಟನೆಯಿಂದ ಹಿಂದೆ ಸರಿಯುವಂತೆ ಮಾಡಿದರು. ಸದ್ಯ ಸೇವೆ ಮಾಡುತ್ತಿರುವ ಕಾರ್ಯಕರ್ತೆಯರನ್ನು ಕೆಲಸದಿಂದ ತಗೆಯುವ ಹುನ್ನಾರ ನಡೆದಿದೆ ಎಂದು ಆರೋಪಿಸಿದರು.
ಆಶಾ ಕಾರ್ಯಕರ್ತೆಯರು 17 ವರ್ಷದಿಂದ ತರಬೇತಿ ಪಡೆದು ತಜ್ಞರಂತೆ ಕೆಲಸ ಮಾಡುತ್ತಿದ್ದಾರೆ. ಮೌಲ್ಯಮಾಪನ, ಶಿಕ್ಷಣದ ಹೆಸರಿನಲ್ಲಿ ಕಾರ್ಯಕರ್ತೆಯರನ್ನು ಕೈಬಿಡುವ ಕೆಲಸ ಮಾಡಲಾಗುತ್ತಿದೆ. 60 ವರ್ಷ ಆದವರನ್ನು ಏಕಾಏಕಿ ಕೆಲಸದಿಂದ ಕೈ ಬಿಡಲಾಗಿದೆ. ಕೈ ಬಿಡುವ ಮುನ್ನ ಇಡಿಗಂಟು ನೀಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಈ ವೇಳೆ ಗದಗ ಜಿಲ್ಲಾ ಗೌರವಾಧ್ಯಕ್ಷ ಸುರೇಶ್ ಜಿ, ಭಾಗ್ಯಜ್ಯೋತಿ, ಲಕ್ಷ್ಮೀ ಪೂಜಾರ, ಗೌರಮ್ಮ ಕಟ್ಟಿಮನಿ, ಪ್ರೇಮಾ ಪಾಟೀಲ, ರಮಿಜಾ ಹಾವೇರಿ, ಸುಮಂಗಲಾ ತಳವಾರ, ಮಂಜುಳಾ ಹೊಸೂರ, ಅನ್ನಪೂರ್ಣ ಖಾಟವಾ, ಗೀತಾ ಭಜಂತ್ರಿ, ಶಾಹಿನ್ ಅಲ್ಮಾಸ್ ಉಪಸ್ಥಿತರಿದ್ದರು.
ಕೊರೋನಾ ಸಮಯದಲ್ಲಿ ಮೊದಲ ಸಾಲಿನ ಯೋಧರಾಗಿ ಕೆಲಸ ಮಾಡಿದ್ದಾರೆ. ಮನೆ-ಮನೆಗೆ ತೆರಳಿ ಅರಿವು ಮೂಡಿಸುವ ಕೆಲಸ ಮಾಡಿದ್ದಾರೆ. ಇಂತಹ ಆಶಾ ಕಾರ್ಯಕರ್ತೆಯರ ಗೋಳನ್ನು ಯಾವ ಸರ್ಕಾರವೂ ಕೇಳುತ್ತಿಲ್ಲ. ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಹಾಗೂ ಅಧಿಕಾರ ನಡೆಸಿರುವ ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳು ನಮ್ಮ ಸಮಸ್ಯೆ ಆಲಿಸುವ ಪ್ರಯತ್ನ ಮಾಡಿಲ್ಲ ಎಂದು ಡಿ. ನಾಗಲಕ್ಷ್ಮೀ ಬೇಸರ ವ್ಯಕ್ತಪಡಿಸಿದರು.