ವಿಜಯಸಾಕ್ಷಿ ಸುದ್ದಿ, ಗದಗ : ಮುಂಡರಗಿ ತಾಲೂಕಿನ ಹಳ್ಳಿಗುಡಿಯ ಸರಕಾರಿ ಪ್ರೌಢಶಾಲೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಮತ್ತು ಸಸ್ಯ ಶ್ಯಾಮಲ ಕಾರ್ಯಕ್ರಮ ಜರುಗಿತು.
ದೈಹಿಕ ಶಿಕ್ಷಣ ಶಿಕ್ಷಕಿ ಸಿ.ಟಿ. ಅರಳೆಲೆಮಠ ಮಕ್ಕಳಿಗೆ ವಿವಿಧ ಆಸನಗಳನ್ನು, ಸೂರ್ಯ ನಮಸ್ಕಾರ, ಪ್ರಾಣಾಯಾಮಗಳ ಪ್ರಾತ್ಯಕ್ಷಿಕೆ ನೀಡುವುದರ ಮೂಲಕ ಮಕ್ಕಳಿಂದ ಯೋಗಾಸನ ಮಾಡಿಸಿದರು. ಪತಂಜಲಿ ಮಹರ್ಷಿಗಳ ಉಸಿರಾಟದ ಪೂರಕ-ರೇಚಕಗಳು ಉಸಿರಾಟದ ವೇಗವನ್ನು ಕಡಿಮೆ ಮಾಡುವುದರ ಮೂಲಕ ಮನಸ್ಸಿನ ಚಂಚಲತೆ, ಚಪಲತೆ, ಬಯಕೆ, ಮತ್ತು ಚಟಗಳನ್ನು ದೂರಿಕರಿಸಿ ಸನ್ಮಾರ್ಗ ಕಂಡುಕೊಳ್ಳುವಲ್ಲಿ ಹೆಚ್ಚು ಪರಿಣಾಮಕಾರಿಯಾಗಿವೆ ಎಂದರು.
ಇದೇ ಸಂದರ್ಭದಲ್ಲಿ ಡಾ. ನಿಂಗು ಸೊಲಗಿ ವಿರಚಿತ ಯೋಗ ಗೀತೆಯನ್ನು ಶಿಕ್ಷಕಿಯರು ಮತ್ತು ಮಕ್ಕಳು ಪ್ರಸ್ತುತಪಡಿಸಿದರು. ಸಸ್ಯ ಶ್ಯಾಮಲ ಪಂಚವಟಿ ಕಾರ್ಯಕ್ರಮದಡಿಯಲ್ಲಿ ಹತ್ತಿ, ಅರಳೆ, ಬನ್ನಿ, ಬಿಲ್ವ ಮತ್ತು ಬೇವಿನ ಸಸಿಗಳನ್ನು ನೆಡಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯೆ ಎಸ್.ಜಿ. ಪಾಟೀಲ, ಗುರುವೃಂದ ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು.