ಧರ್ಮಶಾಲಾದಲ್ಲಿ ಭಾನುವಾರ ನಡೆದ ಐಪಿಎಲ್ ಪಂದ್ಯದಲ್ಲಿ ಲಕ್ನೋ ಹಾಗೂ ಪಂಜಾಬ್ ಕಿಂಗ್ಸ್ ಮುಖಾಮುಖಿಯಾಗಿದ್ದವು. ಈ ವೇಳೆ ಪಂಜಾಬ್ ಆರ್ಭಟಕ್ಕೆ ನಲುಗಿದ ಲಕ್ನೋ, 37 ರನ್ ಗಳಿಂದ ಸೋಲೊಪ್ಪಿಕೊಂಡಿತು. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ತಂಡವು 20 ಓವರ್ಗಳಲ್ಲಿ 236 ರನ್ ಕಲೆಹಾಕಿತು. ಈ ಕಠಿಣ ಗುರಿಯನ್ನು ಬೆನ್ನತ್ತಿದ ಲಕ್ನೋ ಸೂಪರ್ ಜೈಂಟ್ಸ್ ತಂಡವು 20 ಓವರ್ಗಳಲ್ಲಿ 199 ರನ್ ಬಾರಿಸಿ 37 ರನ್ಗಳಿಂದ ಸೋಲೊಪ್ಪಿಕೊಂಡಿತು.
ಈ ಸೋಲಿನ ಬಳಿಕ ಮಾತನಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ರಿಷಭ್ ಪಂತ್, ಪ್ಲೇಆಫ್ಗೇರಲು ನಮಗೆ ಇನ್ನೂ ಉತ್ತಮ ಅವಕಾಶವಿದೆ ಎಂದಿದ್ದಾರೆ. ಏಕೆಂದರೆ ಮುಂದಿನ ಮೂರು ಪಂದ್ಯಗಳು ನಿರ್ಣಾಯಕ ಈ ಮ್ಯಾಚ್ಗಳಲ್ಲಿ ಗೆಲುವು ದಾಖಲಿಸಿ ಪ್ಲೇಆಫ್ಗೇರುವ ವಿಶ್ವಾಸವಿದೆ ಎಂದು ಪಂತ್ ಹೇಳಿದ್ದಾರೆ. ಇನ್ನು ಈ ಸೋಲನ್ನು ವಿಮರ್ಶಿಸಿದ ಪಂತ್, ನಾವು ಹೆಚ್ಚು ರನ್ ಬಿಟ್ಟು ಕೊಟ್ಟಿದ್ದು ದುಬಾರಿಯಾಯಿತು. ಅದರಲ್ಲೂ ಕೆಲ ನಿರ್ಣಾಯಕ ಕ್ಯಾಚ್ಗಳನ್ನು ಕೈ ಬಿಟ್ಟೆವು. ಇವೆಲ್ಲವೂ ನೋವುಂಟು ಮಾಡುತ್ತದೆ. ಆದರೆ ಏನೂ ಮಾಡಕ್ಕಾಗಲ್ಲ. ಅವೆಲ್ಲವೂ ಪಂದ್ಯದ ಒಂದು ಭಾಗ. ಇದಾಗ್ಯೂ ನಮ್ಮ ಬೌಲರ್ಗಳುಆರಂಭದಲ್ಲಿಯೇ ಲೆಂಗ್ತ್ ಅನ್ನು ಸರಿಯಾಗಿ ಆಯ್ಕೆ ಮಾಡಲಿಲ್ಲ. ಇದರಿಂದ ಆರಂಭದಲ್ಲೇ ಹೆಚ್ಚಿನ ರನ್ಗಳ ಸೋರಿಕೆಯಾಯಿತು. ಆದರೆ ಮುಂದಿನ ಮೂರು ಪಂದ್ಯಗಳ ಮೂಲಕ ನಾವು ಕಂಬ್ಯಾಕ್ ಮಾಡುವ ವಿಶ್ವಾಸವಿದೆ ಎಂದು ರಿಷಭ್ ಪಂತ್ ಹೇಳಿದ್ದಾರೆ.



