ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡವು ಮಂಗಳವಾರ ನಡೆದ IPL ಪಂದ್ಯದಲ್ಲಿ ಚೆನ್ನೈ ವಿರುದ್ಧ 18 ರನ್ ಗಳಿಂದ ಗೆದ್ದು ಬೀಗಿದೆ.
ಮುಲ್ಲನ್ಪುರದಲ್ಲಿ ನಡೆದ ಈ ಪಂದ್ಯದಲ್ಲಿ, 24 ವರ್ಷದ ಯುವ ಬ್ಯಾಟ್ಸ್ಮನ್ ಪ್ರಿಯಾಂಶ್ ಆರ್ಯ ಸ್ಫೋಟಕ ಶತಕ ಗಳಿಸುವ ಮೂಲಕ ಪಂಜಾಬ್ ತಂಡವನ್ನು 219 ರನ್ಗಳ ಬೃಹತ್ ಸ್ಕೋರ್ಗೆ ಕೊಂಡೊಯ್ದರು. ಈ ಗುರಿ ಬೆನ್ನಟ್ಟಿದ CSK ತಂಡವು, ಕೇವಲ 201 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ಚೆನ್ನೈ ತಂಡ ಸತತ ನಾಲ್ಕನೇ ಸೋಲನ್ನು ಎದುರಿಸಿದೆ.
ಈ ಪಂದ್ಯದಲ್ಲೂ ಎರಡೂ ತಂಡಗಳು 200ಕ್ಕಿಂತ ಹೆಚ್ಚಿನ ಮೊತ್ತ ಗಳಿಸಿದವು. ಮೊದಲು ಬ್ಯಾಟಿಂಗಿಗೆ ಇಳಿದ ಪಂಜಾಬ್ ತಂಡ 20 ಓವರುಗಳಲ್ಲಿ 6 ವಿಕೆಟ್ಗೆ 219 ರನ್ಗಳ ಉತ್ತಮ ಮೊತ್ತ ಗಳಿಸಿತು. ಒಂದು ಹಂತದಲ್ಲಿ ಕುಸಿತದತ್ತ ಸಾಗಿದ್ದ ತಂಡಕ್ಕೆ ಪ್ರಿಯಾಂಶ್ ಶತಕದ ಮೂಲಕ ಆಸರೆಯಾದರು. ಕೊನೆಯಲ್ಲಿ ಶಶಾಂಕ್ ಸಿಂಗ್ (ಔಟಾಗದೇ 52, 36 ಎಸೆತ) ಮತ್ತು ಮಾರ್ಕೊ ಯಾನ್ಸೆನ್ (ಔಟಾಗದೇ 34, 19ಎಸೆತ) ಅವರ ಆಟದಿಂದ ತಂಡ ಉತ್ತಮ ಮೊತ್ತ ಕಲೆಹಾಕಿತು.
ಉತ್ತರವಾಗಿ ಚೆನ್ನೈ ತಂಡ ತನ್ನ ಪಾಲಿನ ಓವರುಗಳಲ್ಲಿ 5 ವಿಕೆಟ್ಗೆ 201 ರನ್ ಗಳಿಸಿ ನಿರಾಸೆ ಅನುಭವಿಸಿತು. ಇದು ಋತುರಾಜ್ ಗಾಯಕವಾಡ ಪಡೆಗೆ ಐದು ಪಂದ್ಯಗಳಲ್ಲಿ ಸತತ ನಾಲ್ಕನೇ ಸೋಲಾಗಿದೆ.