ಎರಡು ದಿನಗಳ ಹಿಂದೆ ಬೆಂಗಳೂರಿನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸೋತಿದ್ದ ಆರ್ಸಿಬಿ, ಇದೀಗ ಮುಲ್ಲನ್ಪುರದಲ್ಲಿ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ 7 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿ ಸೇಡು ತೀರಿಸಿಕೊಂಡಿದೆ. ಮೊದಲು ಬ್ಯಾಟ್ ಮಾಡಿದ ಪಂಜಾಬ್ 157 ರನ್ ಗಳಿಸಿದರೆ, ಈ ಗುರಿ ಬೆನ್ನಟ್ಟಿದ ಆರ್ಸಿಬಿ ಇನ್ನು 7 ಎಸೆತಗಳು ಬಾಕಿ ಇರುವಂತೆಯೇ 3 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಮುಟ್ಟಿತು.
ಈ ಸೋಲಿನ ಬಳಿಕ ಮಾತನಾಡಿದ ಶ್ರೇಯಸ್ ಅಯ್ಯರ್, ನಮ್ಮ ತಂಡದ ಹೆಚ್ಚಿನ ಬ್ಯಾಟ್ಸ್ಮನ್ಗಳು ಮೊದಲ ಎಸೆತದಿಂದಲೇ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡುತ್ತಿದ್ದಾರೆ. ಆದರೆ ನಾವು ಮೊದಲು ಬ್ಯಾಟ್ ಮಾಡುವಾಗ ವಿಕೆಟ್ ಅನ್ನು ನಿರ್ಣಯಿಸಲು ಕಷ್ಟಪಡುತ್ತಿದ್ದೇವೆ. ಹೀಗಾಗಿಯೇ ನಾವು ಪಡೆಯುತ್ತಿರುವ ಆರಂಭವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಉತ್ತಮ ಆರಂಭ ಪಡೆದರೂ ಆ ಬಳಿಕ ಸತತ ವಿಕೆಟ್ ಕಳೆದುಕೊಳ್ಳುತ್ತಿರುವುದರಿಂದ ಬೃಹತ್ ಮೊತ್ತಗಳಿಸಲು ಕಷ್ಟಪಡುತ್ತಿದ್ದೇವೆ. ಇದಾಗ್ಯೂ ಈ ಪಂದ್ಯದಲ್ಲೂ ಸಕಾರಾತ್ಮಕ ಅಂಶ ಎಂದರೆರೆ, ನಾವು ಉತ್ತಮ ಆರಂಭ ಪಡೆದಿದ್ದೇವೆ. ಬೌಲರ್ಗಳು ಕೂಡ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ ಎಂದರು.
ನಾವು ವಿಕೆಟ್ಗೆ ಹೊಂದಿಕೊಳ್ಳುವ ಬಗ್ಗೆ ಮಾತನಾಡುತ್ತಲೇ ಇರುತ್ತೇವೆ. ಚೆಂಡು ಹಳೆಯದಾದ ನಂತರ ಅದು ವಿಕೆಟ್ನಿಂದ (ಪಿಚ್) ದೂರ ಹೋಗುವುದಿಲ್ಲ. ಅವರಿಬ್ಬರೂ (ಓಪನರ್ಗಳು) ಉತ್ತಮ ಸ್ಟ್ರೋಕ್ಮೇಕರ್ಗಳು. ನೀವು ಅವರಿಗೆ ನಿಧಾನವಾಗಿ ಆಡಲು ಹೇಳಿದರೆ ಅದನ್ನು ಅರ್ಥಮಾಡಿಕೊಳ್ಳುವುದು ಅವರಿಗೆ ಕಷ್ಟ. ಹೀಗಾಗಿಯೇ ಮಧ್ಯಮ ಕ್ರಮಾಂಕದ ಬ್ಯಾಟರ್ಗಳು ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು ಎಂದರು.
ಈ ಪಂದ್ಯದ ಬಳಿಕ ನಮಗೆ ಆರು ದಿನಗಳ ರಜೆ ಇದೆ. ನಾವು ಮತ್ತೆ ತರಬೇತಿಗೆ ಮರಳುವುದು ಮುಖ್ಯ, ನಾವು ರಿಫ್ರೆಶ್ ಮಾಡಿಕೊಳ್ಳುವುದು ಸಹ ಇಲ್ಲಿ ಮುಖ್ಯವಾಗುತ್ತದೆ. ಮುಂದಿನ ಪಂದ್ಯಕ್ಕೂ ಮೊದಲು ನಾವು ಸಾಧ್ಯವಾದಷ್ಟು ಉತ್ತಮ ಸ್ಥಿತಿಯಲ್ಲಿದ್ದೇವೆ ಎಂದು ಖಚಿತಪಡಿಸಿಕೊಳ್ಳಬೇಕು. ಹೀಗಾಗಿ ಬಿಡುವಿನ ಸಮಯದಲ್ಲಿ ನಾವು ಮುಂದಿನ ಪಂದ್ಯಕ್ಕಾಗಿ ಪ್ಲ್ಯಾನ್ ರೂಪಿಸುತ್ತೇವೆ ಎಂದು ಅಯ್ಯರ್ ಹೇಳಿದ್ದಾರೆ.