ಕೋಲಾರ: ನಮಗೊಂದು ಕಾನೂನು ಸಿದ್ದರಾಮಯ್ಯ ಅವರಿಗೆ ಒಂದು ಕಾನೂನಾ? ಎಂದು ಮಾಜಿ ಸಂಸದ ಮುನಿಸ್ವಾಮಿ ಪ್ರಶ್ನಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಲೋಕಾಯುಕ್ತವನ್ನು ನುಂಗಿ ನೀರು ಕುಡಿದವರು ಸಿದ್ದರಾಮಯ್ಯನವರು.
ಹಾಗಾಗಿಯೇ ತಪ್ಪು ಮಾಡಿದ್ದರೂ ಅವರಿಗೆ ಕ್ಲೀನ್ ಚಿಟ್ ಕೊಡಲಾಗಿದೆ. ಸಿದ್ದರಾಮಯ್ಯನವರು ಅವರಿಗೆ ಬೇಕಾದವರನ್ನು ಹಾಕಿಕೊಂಡು ತಪ್ಪು ಮಾಡಿದ್ದಾರೆ. ಸಂಬಂಧಿಕರಿಗೆ ಸೈಟ್ ಗಳನ್ನು ಕೊಟ್ಟಿದ್ದಾರೆ. ನಮಗೊಂದು ಕಾನೂನು ಸಿದ್ದರಾಮಯ್ಯ ಅವರಿಗೆ ಒಂದು ಕಾನೂನಾ? ಎಂದು ಪ್ರಶ್ನಿಸಿದ್ದಾರೆ.
ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಕ್ಲೀನ್ ಚಿಟ್ ಸಿಗುತ್ತೆ ಎಂದು, ಈ ಪ್ರಕರಣ ಹೀಗೇ ಆಗುತ್ತೆ ಎಂದು ನಮ್ಮ ನಾಯಕರು ಮೊದಲೇ ಹೇಳಿದ್ದರು. ತಮ್ಮ ಮೇಲೆ ಆರೋಪ ಬಂದ ತಕ್ಷಣ ಈಶ್ವರಪ್ಪ ರಾಜೀನಾಮೆ ಕೊಟ್ಟರು.
ಅದರಂತೆ ಸಿದ್ದರಾಮಯ್ಯ ಅವರೂ ಸಹ ರಾಜೀನಾಮೆ ಕೊಡಬೇಕಿತ್ತು. ಅವರು ತಪ್ಪು ಮಾಡಿಲ್ಲ ಅಂದ ಮೇಲೆ ಸೈಟ್ ಗಳನ್ನು ವಾಪಸ್ ಏಕೆ ಕೊಡಬೇಕಿತ್ತು. 14 ಸೈಟ್ ಗಳನ್ನು ಅಕ್ರಮವಾಗಿ ಪಡೆದಿರುವ ಇವರಿಗೆ ಸಂವಿಧಾನದ ಪ್ರಕಾರ ಶಿಕ್ಷೆ ಆಗಲೇಬೇಕು ಎಂದು ಒತ್ತಾಯಿಸಿದ್ದಾರೆ.