ಇದು ಪವಾಡವೋ? ಚರಿತ್ರೆಯೋ?: ತಲೆಗೆ ಗುಂಡು ಹೊಕ್ಕಿ 18 ವರ್ಷ ಕಳೆದವ ಸಾವನ್ನೇ ಗೆದ್ದ

0
Spread the love

ಬೆಂಗಳೂರು: ತಲೆಗೆ ಗುಂಡು ಹೊಕ್ಕಿ 18 ವರ್ಷ ಕಳೆದವನಿಗೆ ಬೆಂಗಳೂರಿನ ಆಸ್ಟರ್ ಆಸ್ಪತ್ರೆ ಮರು ಜನ್ಮ ಕೊಟ್ಟಿದೆ. ಬದುಕಿನುದ್ದಕ್ಕೂ ನರಕ ಯಾತನೆ ಕಟ್ಟಿಟ್ಟ ಬುತ್ತಿ ಅಂದುಕೊಂಡು ದಿನ ದೂಡುತ್ತಿದ್ದ ಅಮಾಯಕ ವ್ಯಕ್ತಿಯ ಬಾಳಿಗೆ ಹೊಸ ಹುರುಪು ಸಿಕ್ಕಿದೆ.

Advertisement

ಇನ್ನೇನು ಜೀವನ ಮುಗಿದೇ ಹೋಯಿತು, ಬದುಕು ಕ್ಷಣಿಕ ಅಂದುಕೊಂಡವನಿಗೆ ಬೆಂಗಳೂರು ವೈದ್ಯರು ದೇವರಾಗಿ ಬಂದು ಜೀವ ಉಳಿಸಿದ್ದಾರೆ. ಇದು ಪವಾಡವೋ? ಚರಿತ್ರೆಯೋ? ಮರು ಜನ್ಮವೋ? ಗೊತ್ತಿಲ್ಲ. ಆದರೆ ನಮ್ಮ ಹೆಮ್ಮೆಯ ಬೆಂಗಳೂರಿನ ವೈದ್ಯರ ತಾಕತ್ತು ಏನು ಅನ್ನೋದು ವಿಶ್ವಕ್ಕೆ ಮತ್ತೊಮ್ಮೆ ಗೊತ್ತಾಗಿದೆ.

ವಿಚಾರ ಏನಂದ್ರೆ, ಸುಮಾರು 18 ವರ್ಷಗಳ ಹಿಂದೆ ಯೆಮನ್ ದೇಶದಲ್ಲಿ ಭಯಾನಕ ಸಂಘರ್ಷ ನಡೆಯುತ್ತಿತ್ತು.  ಅಂಗಡಿಗೆ ಹೋಗಿದ್ದ ಬಾಲಕ ಮನೆಗೆ ವಾಪಸ್ ಆಗುತ್ತಿದ್ದ. ಅದೇ ದಾರಿಯಲ್ಲಿ ಎರಡು ಗುಂಪುಗಳ ನಡುವೆ ಸಂಘರ್ಷ ಶುರುವಾಗಿತ್ತು. ಬಂದೂಕಿನಿಂದ ಶುರುವಾದ ಗಲಾಟೆ, ನೋಡ ನೋಡುತ್ತಿದ್ದಂತೆಯೇ ಜೋರಾಗಿ ಹೋಯಿತು. ಎದುರಾಳಿ ವ್ಯಕ್ತಿ, ತನ್ನ ವಿರೋಧಿಗೆ ಹಾರಿಸಿದ್ದ ಗುಂಡು ನೇರವಾಗಿ ಏನೂ ತಪ್ಪು ಮಾಡಿರದ ಪುಟಾಣಿ ಬಾಲಕನಿಗೆ ತಗುಲಿತ್ತು.

ಬಾಲಕ ನಿತ್ಯವೂ ನರಕಯಾತನೆ ಅನುಭವಿಸಬೇಕಾಯಿತು. ಕಿವಿಯಲ್ಲಿ ಆಗಾಗ ರಕ್ತ ಸೋರಲು ಶುರುವಾಗಿತ್ತು. ವಿಪರೀತ ತಲೆ ನೋವು ಬರಲು ಶುರುವಾಗಿದೆ. ಎಲ್ಲಾ ಗೋಳುಗಳ ನಡುವೆ, ತಗುಲಿದ್ದ ಬುಲೆಟ್​ ಆತನನ್ನು ಕಿವುಡನನ್ನಾಗಿ ಮಾಡಿಬಿಟ್ಟಿತು. ಸಂಕಷ್ಟಕ್ಕೆ ಸಿಲುಕಿದ್ದ ಹುಡುಗ, ತಂದೆ ಹಾಗೂ ಸಹೋದರರ ಸಹಾಯದಿಂದ ಚಿಕಿತ್ಸೆಗಾಗಿ ಯೆಮನ್ ದೇಶದುದ್ದಕ್ಕೂ ಅಲೆದಾಟ ನಡೆಸಿದ್ದ. ಅಲ್ಲಿನ ಯಾವೊಂದು ಆಸ್ಪತ್ರೆಯಲ್ಲೂ ಚಿಕಿತ್ಸೆ ಸಿಗಲಿಲ್ಲ.

ಅಷ್ಟರಲ್ಲಾಗಲೇ ಅಂದು ಬಾಲಕನಾಗಿದ್ದವ ಪ್ರಾಯಕ್ಕೆ ಬಂದು 28 ವರ್ಷಗಳನ್ನು ಪೂರೈಸಿದ್ದ. ಕೊನೆಗೊಂದಿನ ಸ್ನೇಹಿತರ ಸಲಹೆಯಂತೆ ಬೆಂಗಳೂರಿನ ಆಸ್ಟರ್ ಆಸ್ಪತ್ರೆ ಬಗ್ಗೆ ತಿಳಿದುಕೊಳ್ಳುತ್ತಾನೆ. ಅಂತೆಯೇ ಬೆಂಗಳೂರಿಗೆ ಬಂದಿದ್ದ ಈತ, ಎಂಆರ್​ಐ ಸ್ಕ್ಯಾನ್​ಗೆ ಒಳಗಾಗುತ್ತಾರೆ. ಜೀವದ ಜೊತೆ ದೊಡ್ಡ ಸವಾಲಾಗಿ  ಉಳಿದಿದ್ದ ಬುಲೆಟ್​ ಅನ್ನು ಆಸ್ಟರ್ ವೈದ್ಯರು ಯಶಸ್ವಿಯಾಗಿ ತೆಗೆದು, ಆ ವ್ಯಕ್ತಿಗೆ ಮರುಜೀವ ಕೊಟ್ಟಿದ್ದಾರೆ.

ಬುಲೆಟ್ ಕೂತಿದ್ದ ಜಾಗದಲ್ಲಿ, ಶರೀರದ ಮುಖ್ಯ ರಕ್ತನಾಳವೊಂದು ಅಲ್ಲೇ ಇದ್ದರೂ ಅದೃಷ್ಟಕ್ಕೆ ಅದಕ್ಕೆ ಯಾವುದೇ ಹಾನಿ ಆಗಿರಲಿಲ್ಲ. ಅದ್ಹೇನೆ ಹೇಳಿ ಚಿಕಿತ್ಸೆ ಬಯಸಿ ಬಂದವ ಯೆಮನ್ ಪ್ರಜೆ, ಮರುಜನ್ಮ‌ ಪಡೆದು ತಮ್ಮ ದೇಶಕ್ಕೆ ವಾಪಸ್ ಆಗಿದ್ದು, ಆಸ್ಟರ್ ಆಸ್ಪತ್ರೆಯ ವೈದ್ಯರ ಶಸ್ತ್ರ ಚಿಕಿತ್ಸೆಗೆ ವೈದ್ಯಲೋಕವೇ ಸಲಾಂ ಹೇಳಿದೆ.


Spread the love

LEAVE A REPLY

Please enter your comment!
Please enter your name here