ಬಡ ವಿದ್ಯಾರ್ಥಿಗಳಿಗೆ ಕಂಟಕವಾಯ್ತೇ ಅಧಿಸೂಚನೆ?

0
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಸಾವಿರಾರು ಪದವಿ ವಿದ್ಯಾರ್ಥಿಗಳ ಭವಿಷ್ಯದಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಹಣದ ಚೆಲ್ಲಾಟ ಆಡುತ್ತಿದ್ದರೆ, ಬಡ ವಿದ್ಯಾರ್ಥಿಗಳ ಗೋಳಾಟ, ಪಾಲಕರ ನರಳಾಟ ಹೆಚ್ಚಾಗಿದೆ. ಇದರಿಂದ ಪದವಿ ಪಡೆಯಬೇಕೆಂಬ ಆಸೆಯನ್ನು ಹೊತ್ತಿರುವ, ಹೆಚ್ಚಿನ ವಿದ್ಯಾಭ್ಯಾಸದ ನಿರೀಕ್ಷಕೆಯಲ್ಲಿರುವ ವಿದ್ಯಾರ್ಥಿಗಳಿಗೆ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ಅಧಿಸೂಚನೆ ಕಂಟಕವಾಗಿ ಪರಿಣಮಿಸಿದೆ.

Advertisement

ಧಾರವಾಡದ ಕರ್ನಾಟಕ ವಿಶ್ವವಿದ್ಯಾಯಲ ನಿರ್ಲಕ್ಷ್ಯದಿಂದ ಪದವಿ ವಿದ್ಯಾರ್ಥಿಗಳು ಮಾರ್ಚ್ ತಿಂಗಳಲ್ಲಿ ಮರು ಮೌಲ್ಯಮಾಪನಕ್ಕೆ ಒಂದು ವಿಷಯಕ್ಕೆ 650 ರೂಗಳಂತೆ ಭರಣ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ 6 ಮತ್ತು 5ನೇ ಸೆಮಿಸ್ಟರ್ ಫಲಿತಾಂಶವನ್ನು ಬಿಡುಗಡೆ ಮಾಡಲಾಗಿದೆ. ಆದರೆ, 2 ಮತ್ತು 4ನೇ ಸೆಮಿಸ್ಟರ್ ಫಲಿತಾಂಶವನ್ನು ತಡೆಹಿಡಿದ್ದಾರೆ. 1,3,5 ಹಾಗೂ 6ನೇ ಸೆಮೀಸ್ಟರ್‌ಗಳಲ್ಲಿ ಉತ್ತೀರ್ಣಗೊಂಡ ವಿದ್ಯಾರ್ಥಿಗಳು ತಮ್ಮ 2 ಹಾಗೂ 4ನೇ ಸೆಮೀಸ್ಟರ್ ಫಲಿತಾಂಶಕ್ಕಾಗಿ ಕಾದು ಕುಳಿತುಕೊಂಡಿದ್ದರು. ಆದರೆ, ಫಲಿತಾಂಶದ ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿಗಳಿಗೆ ಆಘಾತ ಸೃಷ್ಟಿಸುವ ಅಧಿಸೂಚನೆಯನ್ನು ಕೆಯುಡಿ ಹೊರಡಿಸಿದ್ದು, ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ ತಲೆನೋವಾಗಿದೆ.

ಸದ್ಯ ಹೊರಡಿಸಿರುವ ಅಧಿಸೂಚನೆಯನ್ನು ಈ ಹಿಂದೆ ಕೂಡ ಕರ್ನಾಟಕ ವಿಶ್ವವಿದ್ಯಾಲಯ ಹೊರಡಿಸಿತ್ತು. ವಿದ್ಯಾರ್ಥಿಗಳಿಂದ ಹಣ ತುಂಬಿಸಿಕೊಂಡು ಉತ್ತೀರ್ಣಗೊಂಡರೆ ನೀವು ಪಾವತಿಸಿದ ಮೊತ್ತವನ್ನು ಮರಳಿ ನೀಡುತ್ತೇವೆ ಎಂದು ಹಣ ವಸೂಲಿ ಮಾಡಿದ್ದರು. ಆದರೆ, 6 ಮತ್ತು 5ನೇ ಸೆಮಿಸ್ಟರ್‌ಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಇದುವರೆಗೂ ಹಣ ಮಾತ್ರ ಮರಳಿ ಬಂದಿಲ್ಲ.

ಮರು ಮೌಲ್ಯಮಾಪನ ಫಲಿತಾಂಶಕ್ಕೆ ಯುಯುಸಿಎಂಎಸ್ ಆಧುನಿಕ ತಂತ್ರಜ್ಞಾನ ವಿದ್ಯಾರ್ಥಿಗಳ ಜೀವನದಲ್ಲಿ ಮಾರಕವಾಗುತ್ತಿದೆ. ಏಕೆಂದರೆ, ಈಗಾಗಲೇ ಫಲಿತಾಂಶ ಬಿಡುಗಡೆಯಾಗಿ ವಿದ್ಯಾರ್ಥಿಗಳಿಗೆ ತಾಂತ್ರಿಕ ಸಮಸ್ಯೆ ತಣ್ಣೀರು ಎರಚಿದಂತಾಗಿದೆ.

ಕರ್ನಾಟಕ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಬರುವ ಪದವಿ ಕಾಲೇಜುಗಳಲ್ಲಿ ಹೆಚ್ಚಾಗಿ ಬಡವರು, ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಶಿಕ್ಷಣ ಪಡೆಯುವುದು ಸಾಮಾನ್ಯವಾಗಿದೆ. ಆಕಸ್ಮಿಕ ಒಂದು ಅಥವಾ ಎರಡು ವಿಷಯಗಳಲ್ಲಿ ಅನುತ್ತೀರ್ಣಗೊಂಡರೆ ಒಂದು ವಿಷಯಕ್ಕೆ 650 ರೂಗಳನ್ನು ಭರಣ ಮಾಡಬೇಕು. ವಿದ್ಯಾರ್ಥಿಗಳು ಕಾಲೇಜು ಶುಲ್ಕ ಮತ್ತು ಪರೀಕ್ಷೆ ಶುಲ್ಕಗಳನ್ನು ಸಹಜವಾಗಿ ಪಾಲಕರಿಂದ ಪಡೆದುಕೊಳ್ಳಬೇಕು. ಇಂತಹ ಸ್ಥಿತಿಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಹಣದ ಆಸೆಗಾಗಿ ವಿದ್ಯಾರ್ಥಿಗಳ ಜೀವನದಲ್ಲಿ ಆಟ ಆಡುತ್ತಿದೆಯೇ ಎಂಬುದು ಪಾಲಕರನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ.

“ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ಸನ್-1949ರಲ್ಲಿ ಮಾಡಿದ ಕಾನೂನು ಈಗಲೂ ಮುಂದುವರೆದಿದ್ದು, ಇದರಲ್ಲಿ ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ಸ್ ಮಾಡುವ ಪದ್ಧತಿ ಇತ್ತು. ಸದ್ಯ ಯುಯುಸಿಎಂಎಸ್ ತಂತ್ರಜ್ಞಾನದ ಅಳವಡಿಕೆಯಿಂದ ಫಲಿತಾಂಶ ಬಿಡುಗಡೆ ಮಾಡಲು ವಿಳಂಬವಾಗಿದೆ. ಕುಲಪತಿ ಹಾಗೂ ನಿದೇರ್ಶಕರಿಗೆ ಸಭೆಯನ್ನು ಆಯೋಜಿಸಿ ತಡೆ ಹಿಡಿದಿರುವ ಸೆಮಿಸ್ಟರ್‌ನ ಫಲಿತಾಂಶವನ್ನು ಬಿಡುಗಡೆ ಮಾಡಲು ಸೂಚನೆ ನೀಡುತ್ತೇವೆ, ಎರಡು ಅಥವಾ ಮೂರು ದಿನಗಳಲ್ಲಿ ಫಲಿತಾಂಶ ಹೊರ ಬೀಳುತ್ತದೆ ಎಂದು ಉನ್ನತ ಶಿಕ್ಷಣ ಸಚಿವಾಲಯಕ್ಕೆ ಕೆಯುಡಿಯ ನಿದೇರ್ಶಕರು ಮಾಹಿತಿ ನೀಡಿದ್ದಾರೆ”

– ಡಾ. ಭಾಗ್ಯವಾನ ಎಸ್. ಮುದಿಗೌಡ್ರ.

ಉನ್ನತ ಶಿಕ್ಷಣ ಸಚಿವಾಲಯದ ವಿಶೇಷಾಧಿಕಾರಿ.


Spread the love

LEAVE A REPLY

Please enter your comment!
Please enter your name here