ಬೆಂಗಳೂರು: ಅಭಿವೃದ್ಧಿ ಮಾಡ್ತೀವಿ ಅಂತ ಅಧಿಕಾರಕ್ಕೆ ಬಂದವರು ಹೇಳೋ ಮಾತಾ ಇದು? ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಡಿಕೆ ಶಿವಕುಮಾರ್ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಇನ್ನೂ ಮೂರ್ನಾಲ್ಕು ವರ್ಷ ಆ ದೇವರೇ ಬಂದರೂ ಬೆಂಗಳೂರು ಸರಿ ಮಾಡಲು ಆಗಲ್ಲ ಎಂದು ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು,
ನಿನ್ನೆ ದಿನ ಡಿಕೆಶಿ ಅವರು, ಬೆಂಗಳೂರು ಉಸ್ತುವಾರಿಗಳು ಒಂದು ಹೇಳಿಕೆ ಕೊಟ್ಟಿದ್ದಾರೆ. ಇನ್ನೂ ಮೂರ್ನಾಲ್ಕು ವರ್ಷವಾದ್ರೂ ಆ ಭಗವಂತ ಕೂಡಾ ಬೆಂಗಳೂರು ಉದ್ಧಾರ ಮಾಡಲು ಆಗಲ್ಲ ಅಂದಿದ್ದಾರೆ. ಅಭಿವೃದ್ಧಿ ಮಾಡ್ತೀವಿ ಅಂತ ಅಧಿಕಾರಕ್ಕೆ ಬಂದವರು ಹೇಳೋ ಮಾತಾ ಇದು? ಎಂದು ಕಿಡಿಕಾರಿದ್ದಾರೆ.
ಇನ್ನೂ, ಒಂದು ಗುಂಡಿ ಮುಚ್ಚಲು ಇವರಿಗೆ ಯೋಗ್ಯತೆ ಇಲ್ಲ, ಅನುದಾನ ಕೊಡಲು ಆಗಲ್ಲ. ಬೆಂಗಳೂರು ಬಗ್ಗೆ ಡಿಕೆ ಶಿವಕುಮಾರ್ ಅವರ ಈ ಥರ ಹೇಳಿಕೆ ಸಹಜವಾಗಿ ಎಲ್ಲರಿಗೂ ಬೇಸರ ತರಿಸಿದೆ. ಬೆಂಗಳೂರನ್ನು ಸಿಂಗಾಪುರ ಮಾಡ್ತೀವಿ ಅಂತ ಅಧಿಕಾರಕ್ಕೆ ಬಂದ್ರು. ಒಂದು ಗುಂಡಿ ಮುಚ್ಚಲು ಯೋಗ್ಯತೆ ಇಲ್ಲ ಇವರಿಗೆ, ಟನೆಲ್ ರಸ್ತೆ ಬಗ್ಗೆ ಮಾತಾಡ್ತಾರೆ ಎಂದು ಕಿಡಿಕಾರಿದರು.