ವಿಜಯಸಾಕ್ಷಿ ಸುದ್ದಿ, ದಾವಣಗೆರೆ : ಮನುಷ್ಯ ಯಾವಾಗಲೂ ಸುಖಾಪೇಕ್ಷಿ. ಸುಖದ ಮೂಲ ಧರ್ಮದ ಆಚರಣೆಯಲ್ಲಿದೆ. ಶಾಂತಿ-ನೆಮ್ಮದಿಯ ಬದುಕಿಗೆ ಧರ್ಮವೊಂದೇ ಆಶಾಕಿರಣವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ನಗರದ ಶ್ರೀ ರಂಭಾಪುರಿ ಜಗದ್ಗುರು ವೀರಗಂಗಾಧರ ಮಂಗಲ ಭವನದಲ್ಲಿ ಜರುಗಿದ ಆಷಾಢ ಮಾಸದ ಇಷ್ಟಲಿಂಗ ಮಹಾಪೂಜಾ ಹಾಗೂ ಜನಜಾಗೃತಿ ಧರ್ಮ ಸಮಾವೇಶದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಅರಿತು ಬಾಳುವುದರಲ್ಲಿ ಬದುಕಿನ ಉತ್ಕರ್ಷತೆಯಿದೆ. ಮನುಷ್ಯನಲ್ಲಿ ಒಳ್ಳೆಯ ಮತ್ತು ಕೆಟ್ಟ ಎರಡೂ ಗುಣಗಳಿವೆ. ಒಳ್ಳೆಯವರ ಒಡನಾಟದಲ್ಲಿ ಬಾಳಿದರೆ ಜೀವನ ವಿಕಾಸಗೊಳ್ಳುತ್ತದೆ. ದುರ್ಜನರ ಒಡನಾಟದಲ್ಲಿ ಬಾಳಿದರೆ ಬದುಕು ಸರ್ವ ನಾಶವಾಗುತ್ತದೆ. ವೀರಶೈವ ಧರ್ಮ ಸಿದ್ಧಾಂತದಲ್ಲಿ ಜೀವನ ವಿಕಾಸದ ಆಧ್ಯಾತ್ಮ ತತ್ವಗಳನ್ನು ಶ್ರೀ ಜಗದ್ಗುರು ರೇಣುಕಾಚಾರ್ಯರು ಪ್ರತಿಪಾದಿಸಿದ್ದಾರೆ ಎಂದರು.
ಪ್ಲಾಸ್ಟಿಕ್ ಸರ್ಜನ್ ಡಾ. ಕೆ.ಸಿ. ಶಿವಮೂರ್ತಿ ಅವರಿಗೆ `ವೈದ್ಯ ಚಿಂತಾಮಣಿ’ ಪ್ರಶಸ್ತಿಯನ್ನಿತ್ತು ಶ್ರೀ ರಂಭಾಪುರಿ ಜಗದ್ಗುರುಗಳು ಶುಭ ಹಾರೈಸಿದರು.
ಹರಪನಹಳ್ಳಿ ತೆಗ್ಗಿನಮಠ ಸಂಸ್ಥಾನದ ವರಸದ್ಯೋಜಾತ ಶಿವಾಚಾರ್ಯ ಸ್ವಾಮಿಗಳು, ಕಣ್ವಕುಪ್ಪಿ ಡಾ.ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ಮಾತನಾಡಿದರು. ಹಾರನಹಳ್ಳಿ ಶಿವಯೋಗೀಶ್ವರ ಶಿವಾಚಾರ್ಯರು, ಚನ್ನಗಿರಿ ಕೇದಾರ ಶಿವಶಾಂತವೀರ ಶಿವಾಚಾರ್ಯರು ಉಪಸ್ಥಿತರಿದ್ದರು.
ಶಿವಲೀಲ ಕೊಟ್ರಯ್ಯ, ಮೇಘ, ಲಿಂಗರಾಜ ಬಸಾಪುರ, ಕೆ.ಎಂ.ರುದ್ರಮುನಿ, ಮಂಜುಳ ಹೆಚ್.ಆರ್., ಐಗೂರು ಪ್ರಭು, ಚಂದ್ರಕಾಂತ್, ಪರಮೇಶ್ವರಪ್ಪ, ಡಿ.ಕೆ.ಮಾಲತೇಶ ಸೇರಿದಂತೆ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರಿಗೆ ಜಗದ್ಗುರುಗಳು ಶುಭ ಹಾರೈಸಿದರು. ಜಯದೇವ ದೇವರಮನೆ ಸ್ವಾಗತಿಸಿದರು. ಪ್ರೊ.ಮಲ್ಲಯ್ಯ ನಿರೂಪಿಸಿದರು. ಹರೀಶ ಎನ್.ಕೆ. ಜಗದ್ಗುರುಗಳಿಗೆ ಗೌರವ ಮಾಲಾರ್ಪಣೆ ಸಲ್ಲಿಸಿದರು.
ಸಮಾರಂಭ ಉದ್ಘಾಟಿಸಿದ ಅ.ಭಾ.ವೀ.ಲಿಂ.ಮಹಾಸಭಾ ರಾಷ್ಟ್ರೀಯ ಘಟಕದ ಉಪಾಧ್ಯಕ್ಷ ಅಣಬೇರು ರಾಜಣ್ಣ ಮಾತನಾಡಿ, ಕಾಲು ಜಾರುವುದರಿಂದ ಆಗುವ ಅಪಾಯಕ್ಕಿಂತ ನಾಲಿಗೆ ಜಾರುವುದರಿಂದ ಆಗುವ ಅನಾಹುತ ಹೆಚ್ಚು. ಧರ್ಮದ ದಿಕ್ಸೂಚಿ ನಮ್ಮೆಲ್ಲರ ಬಾಳಿನ ಉನ್ನತಿಗೆ ಕಾರಣವಾಗುತ್ತದೆ. ವಿಶ್ವ ಬಂಧುತ್ವದ ಚಿಂತನೆಗಳನ್ನು ವೀರಶೈವ ಧರ್ಮ ಪ್ರತಿಪಾದಿಸಿದೆ. ಆಚಾರ್ಯರ ಶರಣರ ಆದರ್ಶ ಚಿಂತನೆಗಳು ನಮ್ಮೆಲ್ಲರ ಬಾಳಿಗೆ ಬೆಳಕು ತೋರಲೆಂದರು.