ವಿಜಯಸಾಕ್ಷಿ ಸುದ್ದಿ, ಶಿವಮೊಗ್ಗ : ಮನುಷ್ಯನ ಉಜ್ವಲ ಭವಿಷ್ಯಕ್ಕೆ ಧರ್ಮಾಚರಣೆಯ ಅಗತ್ಯವಿದೆ. ಆಡುವ ಮಾತು ಧರ್ಮವಲ್ಲ. ಆಡಿದಂತೆ ನಡೆಯುವುದೇ ನಿಜವಾದ ಧರ್ಮ. ಬದುಕಿಗೆ ಬೆಳಕು ಕೊಡುವ ಶಕ್ತಿ ಧರ್ಮಕ್ಕೆ ಇದೆ ಹೊರತು ಬೇರೆ ಯಾವುದಕ್ಕೂ ಇಲ್ಲವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಗುರುವಾರ ತಾಲೂಕಿನ ಬೀರನಹಳ್ಳಿ ಗ್ರಾಮದಲ್ಲಿ ಜರುಗಿದ ಇಷ್ಟಲಿಂಗ ಪೂಜೆ ಹಾಗೂ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ವೀರಶೈವ ಧರ್ಮ ಅತ್ಯಂತ ಪ್ರಾಚೀನ ಧರ್ಮವಾಗಿದ್ದು, ಇದಕ್ಕೊಂದು ಭವ್ಯ ಪರಂಪರೆ, ಇತಿಹಾಸ ಇದೆ. ಪರಶಿವನ ಆದೇಶದಂತೆ ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾರ್ಯರು ಕೊಲ್ಲಿಪಾಕಿ ಸೋಮೇಶ್ವರಾದಿ ಪಂಚ ಶಿವಲಿಂಗಗಳಿಂದ ಅವತರಿಸಿ ಭೂಮಂಡಲದಲ್ಲಿ ವೀರಶೈವ ಧರ್ಮವನ್ನು ಸ್ಥಾಪಿಸಿದರು. ಸಕಲ ಜೀವಾತ್ಮರಿಗೆ ಸದಾ ಒಳಿತನ್ನೇ ಬಯಸಿದ ವೀರಶೈವ ಧರ್ಮ ಆಯಾ ಕಾಲಘಟ್ಟಗಳಲ್ಲಿ ಬೆಳೆದುಕೊಂಡು ಬಂದಿದೆ. ಎಷ್ಟೋ ಜನರು ಧರ್ಮವನ್ನು ಜಾತಿಗೆ ಜೋಡಿಸಿ ಧರ್ಮದ ವಿಶಾಲ ತತ್ವಕ್ಕೆ ಅಪಚಾರ ಮಾಡುತ್ತಿದ್ದಾರೆ. ಜಾತಿ ಎಂದೂ ಧರ್ಮವಾಗಲಾರದು. ಧರ್ಮದಲ್ಲಿರುವ ದೂರದೃಷ್ಟಿ ಜಾತಿಯಲ್ಲಿ ಇಲ್ಲ. ಬೀರನಹಳ್ಳಿ ಗ್ರಾಮದ ಮಠದ ನಾಗಯ್ಯನವರು ಮತ್ತು ಅವರ ಮಕ್ಕಳು ಇಷ್ಟಲಿಂಗ ಮಹಾಪೂಜೆ ಹಾಗೂ ಧರ್ಮ ಸಮಾರಂಭ ಏರ್ಪಡಿಸಿರುವುದು ಸಂತೋಷದ ಸಂಗತಿ ಎಂದರು.
ಸಮಾರಂಭದಲ್ಲಿ ಮಳಲಿಮಠದ ಡಾ. ನಾಗಭೂಷಣ ಶಿವಾಚಾರ್ಯರು ಹಾಗೂ ಚನ್ನಗಿರಿ ಹಿರೇಮಠದ ಡಾ. ಕೇದಾರ ಶಿವಶಾಂತವೀರ ಶಿವಾಚಾರ್ಯರು ಪಾಲ್ಗೊಂಡು ಧರ್ಮೋಪದೇಶವನ್ನು ಮಾಡಿದರು. ದಾವಣಗೆರೆ ದುಗ್ಗತ್ತಿ ಮಠದ ಪ್ರಶಾಂತ್ ನಿರೂಪಿಸಿದರು.