ಕಾಲ್ತುಳಿತಕ್ಕೆ ಒಳಗಾದ ಸಂತ್ರಸ್ತೆ ಕುಟುಂಬದ ಬಗ್ಗೆ ಯಾರು ಕೂಡ ಮಾತನಾಡುತ್ತಿಲ್ಲ ಎಂದು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಪುಷ್ಪ 2 ಸಿನಿಮಾ ನಟ ಅಲ್ಲು ಅರ್ಜುನ್ ಬಂಧನ ವಿಚಾರದಲ್ಲಿ ಪೊಲೀಸರ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಅಲ್ಲು ಅರ್ಜುನ್ ಸುಮ್ಮನೆ ಸಿನಿಮಾ ನೋಡಿ ಹೊರ ಬಂದಿಲ್ಲ. ಅವರು ತಮ್ಮ ಕಾರಿನ ಸನ್ರೂಫ್ನಿಂದ ಹೊರಬಂದು ಅಭಿಮಾನಿಗಳತ್ತ ಕೈಬೀಸಿದರು. ಚಲನಚಿತ್ರದ ಸಂಭ್ರಮಾಚರಣೆ ಮಾಡುತ್ತಿದ್ದ ಅಭಿಮಾನಿಗಳನ್ನು ಹುರಿದುಂಬಿಸಿದರು. ಇದರಿಂದ ಪರಿಸ್ಥಿತಿ ಹತೋಟಿ ತಪ್ಪಿತು ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.
ಅಲ್ಲು ಅರ್ಜುನ್ ಅವರು ಶೂಟಿಂಗ್ ವೇಳೆ ತಮ್ಮ ಸಿನಿಮಾವನ್ನು ನೋಡಿರಲಿಕ್ಕಿಲ್ಲ, ಅದಾದ ಮೇಲೆ ಸ್ಪೆಷಲ್ ಶೋ ಹಾಕಿ ನೋಡಬಹುದಿತ್ತು. ಇಲ್ಲವೇ, ಹೋಂ ಥಿಯೇಟರ ನಲ್ಲೇ ನೋಡಬಹುದಿತ್ತು. ಅದನ್ನು ಮಾಡದೇ, ಫ್ಯಾನ್ಸ್ ಮಧ್ಯೆ ಸಿನಿಮಾ ನೋಡಲು ಬಂದರು ಎಂದು ರೇವಂತ್ ರೆಡ್ಡಿ ಅಭಿಪ್ರಾಯ ಪಟ್ಟಿದ್ದಾರೆ.
ನಟನ ಬಂಧನದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಆದರೆ, ಕಾಲ್ತುಳಿತಕ್ಕೆ ಒಳಗಾದ ಸಂತ್ರಸ್ತೆ ಮತ್ತು ಅವರ ಕುಟುಂಬದ ಬಗ್ಗೆ ಯಾರು ಕೂಡ ಮಾತನಾಡುತ್ತಿಲ್ಲ. ಬಡ ಕುಟುಂಬವೊಂದು ಸದಸ್ಯನನ್ನು ಕಳೆದುಕೊಂಡಿದೆ. ಮೃತ ಮಹಿಳೆಯ ಮಗ ಇನ್ನೂ ಆಸ್ಪತ್ರೆಯಲ್ಲಿ ಕೋಮಾದಲ್ಲಿದ್ದಾನೆ. ಅವನು ಕೋಮಾದಿಂದ ಹೊರಬಂದು ತನ್ನ ತಾಯಿಯಿಲ್ಲದ ಜೀವನವನ್ನು ನಡೆಸಬೇಕಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.